ನಗು ಹಣ ಕೊಟ್ಟು ಕೊಂಡುಕೊಳ್ಳಲಾಗದು: ಡಾ. ಎಚ್‌. ಬಿ. ರಾಜಶೇಖರ

ನಗು ಹಣ ಕೊಟ್ಟು ಕೊಂಡುಕೊಳ್ಳಲಾಗದು: ಡಾ. ಎಚ್‌. ಬಿ. ರಾಜಶೇಖರ  Money cannot buy laughter: Dr. H. B. Rajashekar

ನಗು ಹಣ ಕೊಟ್ಟು ಕೊಂಡುಕೊಳ್ಳಲಾಗದು: ಡಾ. ಎಚ್‌. ಬಿ. ರಾಜಶೇಖರ  

ಬೆಳಗಾವಿ 16:  ಎಲ್ಲ ವಸ್ತುಗಳು ಮಾರಾಟಕ್ಕೆ ಸಿಗಬಹುದು ಆದರೆ ನಗುವನ್ನು ಹಣ ಕೊಟ್ಟು ಕೊಂಡುಕೊಳ್ಳಲಾಗದು. ನಗುವೆಂಬುದು ಹೃದಯದ ಭಾಷೆ. ಹಸನ್ಮುಖಿ ಸದಾಸುಖಿ ಎಂದು ಹಿರಿಯರು ಹೇಳುತ್ತಾರೆ ಆದರಂತೆ ಎಲ್ಲರೂ ನಗುತ್ತಲಿರೋಣವೆಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ, ಖ್ಯಾತ ವೈದ್ಯರಾದ ಡಾ. ಎಚ್‌. ಬಿ. ರಾಜಶೇಖರ ಇಂದಿಲ್ಲಿ ಹೇಳಿದರು. ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 11 ರಂದು ನಗರದ ಚೆನ್ನಮ್ನ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ "ರಂಗಭೂಮಿಯ ರಸಪ್ರಸಂಗಗಳು" ಎಂಬ ಹಾಸ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ರಾಜಶೇಖರ ಅವರು ಮೇಲಿನಂತೆ ಅಭಿಪ್ರಾಯಪಟ್ಟರು.  

ಮುಂದೆ ಮಾತನಾಡುತ್ತ ಅವರು  ಮನುಷ್ಯ ಮಾತ್ರ ನಕ್ಕು ಆನಂದಿಸಬಲ್ಲ. ಪ್ರಾಣಿಗಳಿಂದ ಇದು ಸಾಧ್ಯವಿಲ್ಲ. ಹಾಸ್ಯಪ್ರಜ್ಞೆ ಇಲ್ಲದ ಮನುಷ್ಯನ ಬುದ್ಧಿಯು ಸರಿಯಾಗಿ ಬೆಳವಣಿಗೆಯಾಗಲಾರದೆಂಬುದನ್ನು ವಿಜ್ಞಾನವೇ ಪ್ರಯೋಗದಿಂದ ಸಿದ್ಧ ಪಡಿಸಿದೆ ಎಂದು ಹೇಳಿದರು. ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದ ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ನನಗೆ ರಂಗಭೂಮಿಯಲ್ಲಿ ಸುಮಾರು ನಾಲ್ವತ್ತು ವರ್ಷಗಳ ಅನುಭವವಿದೆ. ಹಲವಾರು ನಾಟಕಗಳನ್ನು ಮಾಡಿದ್ದೇನೆ. ರಂಗಭೂಮಿಯಲ್ಲಿಯ ರಸ ಪ್ರಸಂಗಗಳನ್ನಿಂದು ನಗುತ್ತ ನಗಿಸುತ್ತ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆಯಾದರೂ ಅಂದು ನಾನು ಪಟ್ಟ ಕಷ್ಟ ನೋವು ನನಗೆ ಗೊತ್ತು. ಸಮಯ ಪ್ರಜ್ಞೆಯಿದ್ದ ಕಲಾವಿದ ಮಾತ್ರ ಸಿಲುಕುವ ಸಂಕಷ್ಟದಿಂದ ಪಾರಾಗಿ ಬರಲು ಸಾಧ್ಯವೆಂದು ಎಂದು ಹೇಳಿದ ಅವರು ರಂಗಭೂಮಿ ರಸಪ್ರಸಂಗಳನ್ನು  ಹಂಚಿಕೊಂಡು ಜನರನ್ನು ನಗೆ ಗಡಲಲ್ಲಿ ತೇಲಿಸಿದರು. ರಂಗಭೂಮಿ ರಸಪ್ರಸಂಗಗಳನ್ನು ನಟ ನಿರ್ದೇಶಕ ಶೀರೀಷ ಜೋಶಿ, ರಂಗಭೂಮಿ ಹವ್ಯಾಸಿ ಕಲಾವಿದರಾದ   ಪದ್ಮಾ ಕುಲಕರ್ಣಿ,   ಪವಿತ್ರಾ ರೇವಣಕರ, ರಾಮಚಂದ್ರ ಭಟ್ಟ, ಚಿದಂಬರ ಮುನವಳ್ಳಿ, ಕಲಾವಿದ ಭೀಮಾ ಗಜಪತಿ ಹಂಚಿಕೊಂಡರು. ಹಾಸ್ಯಕೂಟ ಸಂಚಾಲಕರಾದ ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅರವಿಂದ ಹುನಗುಂದ ನಿರೂಪಿಸಿದರು.