ಕಬ್ಬು ಕಡಿಯಲು ವಲಸೆ ಹೋದ ಕೂಲಿ ಕಾರ್ಮಿಕರು

ಕಬ್ಬು ಕಡಿಯಲು ವಲಸೆ ಹೋದ ಕೂಲಿ ಕಾರ್ಮಿಕರು Migrant laborers who migrated to cut sugarcane

                 ಮಾಂಜರಿ 23: ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ನಡೆಸಿದ ಹೋರಾಟ ಇಡೀ ರಾಜ್ಯದ ಗಮನಸೆಳೆದಿದೆ. ಆದರೆ, ಕಬ್ಬು ಕಡಿಯಲು ವಲಸೆ ಹೋದ ಕೂಲಿ ಕಾರ್ಮಿಕರ ಬದುಕು ಮಾತ್ರ ನರಕಸದೃಶವಾಗಿಯೇ ಇದೆ .ತಾಲೂಕಿನ ನಾನಾ ತಾಂಡಗಳಿಂದ ಮಹಾರಾಷ್ಟ್ರದ ಬೀಡ ಮಾರಾಠವಾಡ  ಕೊಲಾಪುರ ಸೋಲಾಪುರ ಹಾಗೂ ರಾಜ್ಯದ  ಕಲಬುರ್ಗಿ ಅಫ್ಜಲ್ಪುರ ಜಿಲ್ಲೆಗಳಿಗೆ ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು 6 ತಿಂಗಳಿಗೂ ಹೆಚ್ಚು ಕಾಲ ವಲಸೆ ಹೋಗುವುದು ವಾಡಿಕೆ. ನೆರೆಯ ಮಹಾರಾಷ್ಟ್ರ ರಾಜ್ಯದ ಹಲವು ಜಿಲ್ಲೆಗಳಿಂದ ಮತ್ತು ರಾಜ್ಯದ ಕೆಲವು ಜಿಲ್ಲೆಗಳಿಂದ ಹೆಚ್ಚು ವಲಸೆ ಕೂಲಿ ಕಾರ್ಮಿಕರಿದ್ದಾರೆ. ದಿನ ಪೂರ್ತಿ ಮೈಮುರಿದು ದುಡಿದರೂ ಕೈಸೇರುವುದು ಬರೀ ಬಿಡಿಗಾಸು. ಕನಿಷ್ಠ ಕೂಲಿಯ ಭಾಗ್ಯವಿಲ್ಲದೆ ಹಲವು ವರ್ಷಗಳಿಂದಲೂ ತುತ್ತಿನ ಚೀಲ ತುಂಬಿಸಿಕೊಳ್ಳುವುದು, ಒಂದು ಸೂರು ಕಟ್ಟಿಕೊಳ್ಳುವುದು, ಮದುವೆ, ಮುಂಜಿಗಾಗಿ ಹಣ ಹೊಂದಿಸಲು ಅಸಹಯನೀಯ ಸಂಕಟ ಅನುಭವಿಸುತ್ತಾರೆ. 

                  ವಲಸಿಗ ಕಾರ್ಮಿಕರು ವಾಸಿಸುವ ಟೆಂಟ್‌ಗಳಿಗೆ ಕನಿಷ್ಠ ಸೌಲಭ್ಯಗಳಿಲ್ಲ. ನೆಲದಲ್ಲಿ ನಾಲ್ಕು ಕಟ್ಟಿಗೆಗಳನ್ನು ಊರಿ, ಅವುಗಳ ಸುತ್ತ ಬಟ್ಟೆ ಕಟ್ಟಿದರೆ ಅದುವೇ ಕಬ್ಬು ಕಡಿಯುವವರ ಬಾತ್ ರೂಂ.ಹಾಕಿದ ಟೆಂಟ್ ಮುಂಭಾಗದಲ್ಲಿಒಂದು ದೊಡ್ಡ ಕಲ್ಲು ಇರಿಸಿದರೆ ಅದುವೇ ಅವರ ಮನೆಗೆ ಬೀಗ ಹಾಕಿದಂತೆ. ಕೆಲಸದ ವೇಳೆ ಹಾವು, ಚೇಳು ಕಡಿದರೆ, ಲೋಡಿಂಗ್ ವೇಳೆ ಕುಸಿದು ಬಿದ್ದರೆ, ಅಪಘಾತ ಸಂಭವಿಸಿದರೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವಾದರೆ ಎಲ್ಲವನ್ನೂ ತುಟಿಕಚ್ಚಿ ಸಹಿಸಿಕೊಳ್ಳಬೇಕು. ಸರಕಾರ, ಕಾರ್ಖಾನೆಯ ಮಾಲೀಕರು, ಸ್ಥಳೀಯ ಆಡಳಿತಗಳ ಮುಖ್ಯಸ್ಥರು ಸೇರಿ ಯಾರೊಬ್ಬರೂ ಕೂಲಿ ಕಾರ್ಮಿಕರ ಸಂಕಷ್ಟಗಳಿಗೆ ಪರಿಹಾರ ಕೊಡಿಸಿಲ್ಲ. ಮುಂಜಾನೆ 8ರಿಂದ ಸಂಜೆ 6ವರೆಗೆ ಎಡಬಿಡದೇ ದುಡಿದರೂ ಕೂಲಿಕಾರರಿಗೆ ಕೇವಲ 450ರೂ. ಸಿಗುತ್ತದೆ. ಉದ್ಯೋಗ ಖಾತರಿ ಯೋಜನೆಯಡಿ ಕಬ್ಬು ಕಟಾವು ಅಳವಡಿಸುವ ಚಿಂತನೆಗೆ ಇಂಬು ಕೊಡಬೇಕಿದೆ. 

              ದುಡಿಮೆಗೆ ತೆರಳುವ ಪಾಲಕರು ತಮ್ಮ ಮಕ್ಕಳು, ಹಿರಿಯರನ್ನು ಊರುಗಳಲ್ಲೇ ಬಿಟ್ಟು ತೆರಳುತ್ತಾರೆ. ಅವರಿಂದ ಭಾವನಾತ್ಮಕ ಸಂಬಂಧದಿಂದ ದೂರ ಉಳಿಯುವುದು ಅನಿವಾರ್ಯ. ಮನೋವೈಜ್ಞಾನಿಕ ಅಡ್ಡಪರಿಣಾಮವೂ ಈ ಕಾರ್ಮಿಕರನ್ನು ಬಾಧಿಸುತ್ತದೆ. ತಮ್ಮವರಿಂದ 6 ತಿಂಗಳುಗಟ್ಟಲೆ ದೂರವುಳಿದು, ಚಳಿ ಮಳೆಗೆ ಜಗ್ಗದೆ ಸಂಕಷ್ಟಗಳನ್ನೇ ಹೊದ್ದು ಮಲಗಿದರೂ ದುಡಿಮೆ ಮಾತ್ರ ದುಗ್ಗಾಣೆ ಎಂಬಂತಾಗಿದೆ. ಕಬ್ಬು ಕಡಿಯುವ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ತಾಂಡಾದಲ್ಲಿ ಲೋಡಿಂಗ್ ವೇಳೆ ಬಿದ್ದು  ಒಬ್ಬ ಕಾರ್ಮಿಕ ಕಾಲು ಮುರಿದುಕೊಂಡು ಮೂಲೆ ಸೇರಿದ್ದಾರೆ. ತಾಲೂಕಿನ ತಾಂಡಾವೊಂದರಲ್ಲಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ, ಒಂದಿಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆದರೆ, ಸರಕಾರ ಮಾತ್ರ ಕಾರ್ಮಿಕರ ಸಮಸ್ಯೆಗೆ ಕಣ್ಣು ತೆರೆಯದಾಗಿದೆ. ತಿಂಗಳಲ್ಲೇ ಕೆಲವೊಮ್ಮೆ 2ರಿಂದ 3 ಬಾರಿ ಟೆಂಟ್ ಬದಲಿಸಬೇಕು.ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವಾಗ ವಾಹನದ ವೆಚ್ಚವೇ 20 ಸಾವಿರ ರೂ.ಗಳಾದರೆ, ಕಾರ್ಖಾನೆಯವರು ಕೇವಲ 5ಸಾವಿರ ರೂ. ಭರಿಸುತ್ತಾರೆ. ಟೆಂಟ್ ಸಮೀಪ ಹೋಗುತ್ತಿದ್ದಂತೆ ಕಾರ್ಮಿಕರ ಸಂಕಷ್ಟದ ಸರಮಾಲೆಯೇ ನೋಡುಗರ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ.