ಗಡಿನಾಡಲ್ಲಿ ಕನ್ನಡ ಡಿಂಡಿಮ-ರಾಜ್ಯದ ವಿವಿಧ ಕಲಾ ಪ್ರಕಾರಗಳ ಅನಾವರಣ

ವಿಜಯಪುರ 01: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡ ಕರ್ನಾಟಕ ಸಂಭ್ರಮ -50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಸಾಂಸ್ಕೃತಿಕ ಕಾರ್ಯಕ್ರಮ, ಗಡಿನಾಡ ಕನ್ನಡಿಗರ ಸಮಾವೇಶ ಹಾಗೂ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವು  ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು. 

 ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮದಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು. ಅನೇಕ ಭಕ್ತರ ಆರಾಧ್ಯ ದೈವ ಸುಕ್ಷೇತ್ರ ಶ್ರೀ ದಾನಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಸಂಭ್ರಮದ ಅಂಗವಾಗಿ ನಡೆದ ಕಾರ್ಯಕ್ರಮ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ವಿವಿಧ ಕಲಾಪ್ರಕಾರಗಳು ಇಲ್ಲಿ ಅನಾವರಣಗೊಂಡು ಪ್ರೇಕ್ಷಕರ ಮನಮುಟ್ಟಿದವು. 

ಸಮಾವೇಶದಲ್ಲಿ ಹಲವಾರು ಕಲಾ ಪ್ರಕಾರದ ಸಾಂಸ್ಕೃತಿಕ, ಜಾನಪದ ಕಲೆಗಳ ಅನಾವರಣಗೊಂಡವು. ಸಂಪೂರ್ಣ ಕರ್ನಾಟಕದ ಕಲೆ, ಇತಿಹಾಸ, ಸಾಂಸ್ಕೃತಿಕ ಪರಿಚಯ ಮಾಡಿಸಿತು. 

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರ ಮನಗೆದ್ದವು.ವಿವಿಧ ಅಕಾಡೆಮಿಗಳ ಸಹಯೋಗದಲ್ಲಿ ಹೊನ್ನ ಬಿತ್ತೆವು ನೃತ್ಯ ರೂಪಕ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ವತಿಯಿಂದ ದೃಶ್ಯಯಾನ ರೂಪಕ ಮತ್ತು ಶಿಲ್ಪಕಲಾ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕನ್ನಡ ನೃತ್ಯ ರೂಪಕ, ಕಾಸರಗೋಡಿನ ಕೆ.ವಿ. ರಮೇಶ ತಂಡದವರಿಂದ ಯಕ್ಷಗಾನ ಗೊಂಬೆಯಾಟ, ಜತ್ತ ಮತ್ತು ಅಕ್ಕಲಕೋಟೆಯ ವಿವಿಧ ಸ್ಥಳೀಯ ಕಲಾವಿದರಿಂದ ಕನ್ನಡ ಗೀತೆ ಹಾಗೂ ಭಾವಗೀತೆಗಳು, ವಿಜಯಪುರದ ರಂಗನಾಥ ಬತಾಸೆ ತಂಡದವರಿಂದ ನೃತ್ಯರೂಪಕ, ಸಂಗೀತಾ ಕಟ್ಟಿ ಅವರಿಂದ ಕನ್ನಡ ಗೀತಗಾಯನ, ಪ್ರಕಾಶ ಮಲ್ಲಿಗವಾಡ ಮತ್ತು ಲಲಿತಾ ಚಾಕಲಬ್ಬಿ ತಂಡದವರಿಂದ ಜಾನಪದ ನೃತ್ಯಗಳು, ಹೇಮಾ ಪಾಟೀಲ ಅವರಿಂದ ದಾರದಿಂದ ಬರೆಯುವ ಚಿತ್ರ ಪ್ರದರ್ಶನ, ಗಂಗಾವತಿ ಪ್ರಾಣೇಶ್ ಅವರ ತಂಡದಿಂದ ಕನ್ನಡ ನಗೆ ಹಬ್ಬ ಸೇರಿದಂತೆ ಅನೇಕ ಕನ್ನಡ ಕಲೆಯ ಅನಾವರಣಗೊಂಡವು. ನಾಡಿನ ವಿವಿಧ ಮೂಲೆ ಮೂಲೆಗಳಿಂದ ಆಗಮಿಸಿದ ಕಲಾವಿದರು ತಮ್ಮ ಕಲೆಯ ಪ್ರದರ್ಶನ ನೀಡಿದರು.