ಚನ್ನಮ್ಮನ ಇತಿಹಾಸ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ

ಚನ್ನಮ್ಮನ ಇತಿಹಾಸ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ   It is our responsibility to convey the history of Channamma to the younger generation.

ಚನ್ನಮ್ಮನ ಇತಿಹಾಸ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ   

ಬೆಳಗಾವಿ, ಅ.24: ಚೆನ್ನಮ್ಮನ ಬಳಗವಾಗಿ ಇಲ್ಲಿ ಸೇರಿದ ನಾವೆಲ್ಲ ಚೆನ್ನಮ್ಮನ ಕಥೆ ಕೇಳುತ್ತಾ, ಇತಿಹಾಸವನ್ನು ತಿಳಿದುಕೊಂಡು ನಮ್ಮ ಯುವ ಪೀಳಿಗೆ ತಿಳಿಸಬೇಕಾಗಿದೆ. ತನ್ನ ಆದರ್ಶಗಳಿಂದ ಚೆನ್ನಮ್ಮ ಎಲ್ಲರ ಎದೆಯಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಅಷ್ಟೆ ಅಲ್ಲದೆ ರಾಣಿ ಚನ್ನಮ್ಮನ ಸಂಸಾರಿಕ ಜೀವನವು ಸಹಿತ ನಮಗೆ ಮಾದರಿಯಾಗಿದೆ ಎಂದು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಆಂಗ್ಲ ಭಾಷಾ ಲೇಖಕರು ಹಾಗೂ ವಿದ್ವಾಂಸರಾದ ಡಾ.ವಿಜಯಲಕ್ಷ್ಮೀ ತಿರ್ಲಾಪೂರ ಅವರು ನುಡಿದರು.  

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (ಅ.24) ಕಿತ್ತೂರು ಕೋಟೆ ಆವರಣದಲ್ಲಿ ನಡೆದ  ಕಿತ್ತೂರು ಸಂಸ್ಥಾನದ ಕುರಿತು ರಾಜ್ಯ ಮಟ್ಟದ ಮಹಿಳಾ ವಿಚಾರ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.  

ಕಿತ್ತೂರು ಉತ್ಸವ ಬಹಳಷ್ಟು ಅರ್ಥಪೂರ್ಣವಾಗಿ ನಡೆಯುತ್ತಿದೆ. ಚನ್ನಮ್ಮನ ಉತ್ಸವದ ಈ ವಿಚಾರ ಗೋಷ್ಠಿಯು  ರಾಷ್ಟ್ರ ಮಟ್ಟದ ವಿಚಾರ ಗೋಷ್ಠಿ ಆದಲ್ಲಿ ಪ್ರತಿಯೊಬ್ಬರೂ  ಹೆಮ್ಮೆ ಪಡುವಂತಾಗುತ್ತದೆ. ಚನ್ನಮ್ಮನ ರೂಪ ನಮಗೆ ಪ್ರಬುದ್ಧ ವ್ಯಕ್ತಿತ್ವದ ಹಾಗೆ ಗೋಚರಿಸುತ್ತದೆ. ಚನ್ನಮ್ಮನ ಬಾಲ್ಯ ತುಂಬಾ ಶೌರ್ಯದಿಂದ ಕೂಡಿದ್ದು ಚಿಕ್ಕವಳಿದ್ದಾಗಲೆ ಎಲ್ಲ ವಿದ್ದೆಗಳನ್ನು ತಿಳಿದುಕೊಂಡಿದ್ದಳು, ಚೆನ್ನಮ್ಮನ ಬಾಲ್ಯದ ಜೀವನ ನಮ್ಮ ಮಕ್ಕಳಿಗೆ ಆದರ್ಶ ಆಗಬೇಕು.   

ಪ್ರಬುದ್ಧ ವ್ಯಕ್ತಿತ್ವ ಹೊಂದಿದ್ದ ರಾಣಿ ಚೆನ್ನಮ್ಮ, ಬರವಣಿಗೆಯಲ್ಲಿ ಪಾಂಡಿತ್ಯ ಹೊಂದಿದ್ದಳು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ನಾಲ್ಕು ಬಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಚನ್ನಮ್ಮ ಆದ್ಯಾತ್ಮ ಜೀವಿಯಾಗಿದ್ದಳು. ಚನ್ನಮ್ಮಳ ಕುರಿತು  ಎಲ್ಲ ಬಾಷೆಗಳಲ್ಲಿ ಎಲ್ಲ ಶಾಲೆಗಳಲ್ಲಿ  ಪಠ್ಯ ಬಂದಾಗ ಮಾತ್ರ ಚನ್ನಮ್ಮನ ಇತಿಹಾಸ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸುತ್ತದೆ ಎಂದು ಡಾ.ವಿಜಯಲಕ್ಷ್ಮೀ ತಿರ್ಲಾಪುರ ಅವರು ಅಭಿಪ್ರಯಾ ವ್ಯಕ್ತಪಡಿಸಿದರು.  

ಆಶಯ ನುಡಿಗಳನ್ನು ನುಡಿದ ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರಾದ ಡಾ.ನಾಗರತ್ನಾ ಪರಾಂಡೆ ಅವರು ಕಿತ್ತೂರು ಎಂದ ತಕ್ಷಣ ನಮ್ಮ ಕಣ್ಣ ಮುಂದೆ ರಾಣಿ ಚೆನ್ನಮ್ಮನ ಹೋರಾಟಗಳು, ಅವಳ ದೈರ್ಯ, ಬ್ರಿಟಿಷರನ್ನು ನಡುಗಿಸಿದ ಸಾಹಸ ಕಂಡು ಬರುತ್ತವೆ. ಒಬ್ಬ ಮಹಿಳೆ ಆಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ಸಾಮಾನ್ಯ ವಿಷಯವಲ್ಲ, ತಾಯಿ ಚನ್ನಮ್ಮನ ಸಾಹಸ ನಮಗೆಲ್ಲರಿಗು ಸ್ಪೂರ್ತಿ ನೀಡುತ್ತದೆ. ರಾಣಿ ಚೆನ್ನಮ್ಮನವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ರೂಡಿಗೊಳಿಸಿಕೊಳ್ಳಬೇಕು.  

ನಾವೆಲ್ಲರು ಇಲ್ಲಿ ಸೇರಿಕೊಂಡು ಉತ್ಸವ ಆಚರಿಸುವುದೆ ನಮಗೆ ಹೆಮ್ಮೆಯ ವಿಷಯವಾಗಿದೆ, ತಾಯಿ ಚೆನ್ನಮ್ಮನ ಇತಿಹಾಸವನ್ನು ನಾವೆಲ್ಲರು  ಕೂಡಿಕೊಂಡು ಎಲ್ಲರಿಗು ತಿಳಿಸಬೇಕು. ಚನ್ನಮ್ಮನ ಇತಿಹಾಸದ ಸರಿಯಾದ ಮಾಹಿತಿಯನ್ನು ಜನರ ಮುಂದೆ ಇಡಬೇಕು. ನಾವು ನಮ್ಮ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕು. ಸಾಕಷ್ಟು ತಪ್ಪು ಮಾಹಿತಿ ಯುವ ಜನಾಂಗಕ್ಕೆ ಹೋಗುತ್ತಿದ್ದು, ಅಂತಹ ತಪ್ಪುಗಳ ಬಗ್ಗೆ ತಿಳಿಹೇಳುವುದು ನಮ್ಮ ಯುವಜನಕ್ಕೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.  

ಕಿತ್ತೂರು ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ನಿರ್ಮಲಾ ಬಟ್ಟಲ ಅವರು ಮಾತನಾಡಿ ಕಿತ್ತೂರು ಇತಿಹಾಸ ಎಂದು ಮಣ್ಣಾಗುವುದಿಲ್ಲ, ಧರ್ಮ ಫಲದಿಂದೇರಿ ಕರ್ಮಫಲದಿಂದಿಳಿದು ಬದುಕಿನ ಮರ್ಮ ತಿಳಸುವಂತೆ ಸಾರುವೆವು. ಚನ್ನಮ್ಮನ ಇತಿಹಾಸ ಎಂದೆಂದಿಗೂ ಅಜರಾಮರವಾಗಿದೆ.  

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಅನಿವಾರ್ಯತೆಯಿಂದ ಸಿಕ್ಕಂತಹ ಅಧಿಕಾರವನ್ನು ಅಚ್ಚುಕಟ್ಟಾಗಿ ರಾಣಿ ಚನ್ನಮ್ಮ ಬಳಸಿದರು. ರಾಜರ ಆಡಳಿತದಲ್ಲಿ ಅನುಪಸ್ಥಿತಿಯಲ್ಲಿ ಇದ್ದಾಗ  ಆಡಳಿತ ಮಾಡುವ ಅಧಿಕಾರ ಸಿಗುತ್ತವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಅಧಿಕಾರ ದೊರೆಯುವುದು ಕಠಿಣವಿತ್ತು ಅಂತಹ ಸಂದರ್ಭದಲ್ಲಿ ಸಿಕ್ಕಂತಹ ಅಧಿಕಾರವನ್ನು ಮಲ್ಲಮ್ಮ ಮತ್ತು ಚೆನ್ನಮ್ಮ ಬಳಸಿಕೊಂಡು ಪ್ರಜೆಗಳಿಗೆ ಒಳ್ಳೆಯ ಆಡಳಿತ ನೀಡಿದ್ದಾರೆ. ಪ್ರಪಂಚದ ಇತಿಹಾಸದಲ್ಲಿ ಜೋನ ಆಫ್ ಬರ್ಗ ಬಿಟ್ಟರೆ ಯುದ್ಧ ಮಾಡಿದ ಏಕೈಕ ಮಹಿಳೆ ಎಂದರೆ ಅದು ತಾಯಿ ರಾಣಿ ಚನ್ನಮ್ಮ ಎಂದು ತಿಳಿಸಿದರು.  

ಚನ್ನಮ್ಮನ ಒಂದೇ ಮಾತಿಗೆ ತನ್ನ ಎಲ್ಲಾ ಪ್ರಜೆಗಳು ಹೋರಾಟಕ್ಕೆ ನಿಲ್ಲುತ್ತಿದ್ದರು. ಗತ್ತಿನಿಂದ ರಾಜ್ಯಭಾರ ನಡೆಸಿದರಿಂದ  ಚನ್ನಮ್ಮ ಬ್ರಿಟಿಷರನ್ನು ಎದುರಿಸಿದ್ದಾಳೆ. ಬ್ರಿಟಿಷರಲ್ಲಿ ಒತ್ತೆ ಆಳಾಗಿದ್ದ ಮಕ್ಕಳನ್ನು ರಕ್ಷಿಸಿದ್ದಾಳೆ. ಮಾನವೀಯ ಮೌಲ್ಯಗಳನ್ನು ಹೊಂದಿದ ಚನ್ನಮ್ಮ ಪ್ರೀತಿ ವಿಶ್ವಾಸ ದಿಂದ ಪ್ರಜೆಗಳೊಂದಿಗೆ ಆಡಳಿತ ಮಾಡಿದ್ದಳು. ಕಿತ್ತೂರು ನಾಡಿನ ಎಲ್ಲಾ ರಾಣಿಯರು ಒಳ್ಳೆಯ ಆಡಳಿತಗಾರರಾಗಿ ಅಧಿಕಾರ ನಡೆಸಿದ್ದಾರೆ ಎಂದು ಡಾ.ನಿರ್ಮಲಾ ಬಟ್ಟಲ ಅವರು ತಿಳಿಸಿದರು.  

ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ರಾಣಿ ಚನ್ನಮ್ಮಳ ಆದರ್ಶಗಳು ಎಂಬ ವಿಷಯದ ಬಗ್ಗೆ ಡಾ.ಅರ್ಚನಾ ಅಥಣಿ ಅವರು ಮಾತನಾಡಿ  ಚನ್ನಮ್ಮನ ಪ್ರತಿಯೊಂದು ವಿಷಯಗಳು ನಮಗೆ ಆದರ್ಶಗಳು, ಕೇವಲ ಮೂರು ದಿನ ಉತ್ಸವ ಅಷ್ಟೇ ಮಾಡದೆ, ನಿರಂತರ ಚನ್ನಮ್ಮನ ಇತಿಹಾಸ ತಿಳಿದುಕೊಂಡು ಅವರು ನಡೆದ ದಾರಿ ಪ್ರಜೆಗಳೊಂದಿಗೆ ಇಟ್ಟುಕೊಂಡ ಸಂಬಂಧ ಹಾಗೂ ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು.   

ಬಸವಾದಿ ಶರಣರ ಕ್ರಾಂತಿಯೆ ಚನ್ನಮ್ಮನಿಗೆ ಆದರ್ಶ, ಮಾದರಿ ಆದರ್ಶದ ವ್ಯಕ್ತಿತ್ವ ಹೊಂದಿದ್ದ ಚನ್ನಮ್ಮ ಅನ್ಯಾಯವಾದಾಗ ಧ್ವನಿ ಎತ್ತಿ ಎಂದು ತಿಳಿಸಿಕೊಟ್ಟಿದ್ದಾರೆ, ತನ್ನ ರಕ್ಷಣೆ ಅಷ್ಟೇ ಅಲ್ಲದೆ ನಾಡನ್ನು ರಕ್ಷಿಸಿದ ವೀರ ರಾಣಿ ಚನ್ನಮ್ಮ, ಇಂದಿನ ವಿದ್ಯಾರ್ಥಿನಿಯರು ಆಧುನಿಕ ಶಿಕ್ಷಣದ ಜೊತೆಗೆ ಸ್ವಯಂ ರಕ್ಷಣೆಗಾಗಿ ಚನ್ನಮ್ಮನ ಹಾಗೆ ವಿವಿಧ ಶೌರ್ಯ ವಿದ್ಯೆಗಳನ್ನು ಕಲಿಯಬೇಕು ಎಂದು ಹೇಳಿದರು.  

ಕಿತ್ತೂರು ಸಂಸ್ಥಾನದ ರಾಣಿಯರ ಸಮನ್ವಯತೆ ಸಂದೇಶ ವಿಷಯದ ಕುರಿತು ಜ್ಯೋತಿ ಬದಾಮಿ ಅವರು ಮಾತನಾಡಿ ಧಾರ್ಮಿಕ ಮತ್ತು ಮಾನಸಿಕ ಸಮನ್ವಯತೆಯಿಂದ ಚನ್ನಮ್ಮ ಸದೃಢಳಾಗಿದ್ದಳು. ಮಹಿಳಾ ಸಬಲೀಕರಣಕ್ಕೆ ಒಂದು ಉದಾಹರಣೆ ತಾಯಿ ಚನ್ನಮ್ಮ ಅನ್ನಬಹುದು. ಅಮಟೂರು ಬಾಳಪ್ಪ ಮತ್ತು ಸಂಗೊಳ್ಳಿ ರಾಯಣ್ಣನಂತಹ ಸೇನಾನಿಗಳೊಂದಿಗೆ ಸಮನ್ವಯತೆಯಿಂದ ಬ್ರಿಟಿಷರನ್ನು ಸೋಲಿಸಿದ್ದಾರೆ. ಕಿತ್ತೂರಿನ  ಪ್ರಜೆಗಳಿಗಾಗಿ ರುದ್ರಮ್ಮ ತನ್ನಲ್ಲಿರುವ ಒಡವೆಗಳನ್ನು ಕೊಟ್ಟಂತವಳು ಹೀಗೆ ಸಮನ್ವಯದಿಂದ ಕಿತ್ತೂರು ಸಂಸ್ಥಾನ  ಆಡಳಿತ ನಡೆಸಿದೆ ಎಂದು ತಿಳಿಸಿದರು.  

ಕಿತ್ತೂರು ಸಂಸ್ಥಾನದ ದತ್ತಕ ಪ್ರಕ್ರಿಯೆಯಲ್ಲಿ ರಾಣಿಯರ ಪಾತ್ರ ಎಂಬ ವಿಷಯದ ಕುರಿತು ನಿವೃತ್ತ ಪ್ರಾಚಾರ್ಯರಾದ ಡಾ.ಸರಸ್ವತಿ ಕಳಸದ ಅವರು ಮಾತನಾಡಿ ಈ ಭೂಮಿಯಲ್ಲಿ ಬಡತನ ಮುಖ್ಯವಲ್ಲಾ, ಭಾವನೆಗಳಿಗೆ ಕೊರತೆಯಿಲ್ಲ. ಧೈರ್ಯಂ ಸರ್ವತ್ರ ಸಾಧನಂ ಎಂಬ ತತ್ವ ಇಲ್ಲದೆ, ಸಾಂಸ್ಕೃತಿಕ ಶ್ರೀಮಂತಿಕೆ ಇಲ್ಲಿದೆ. ನಾನು ನನ್ನ ಗಂಡನ ರಾಜ್ಯ ಕಾಯ್ದುಕೊಳ್ಳಬೇಕು ನನ್ನ ಸಂಸ್ಥಾನದಲ್ಲಿ ಎಲ್ಲ ಪ್ರಜೆಗಳು ನನ್ನ ಮಕ್ಕಳನ್ನು ಕಾಯಬೇಕು ಎಂಬ ಪ್ರತಿಜ್ಞೆ ಹೊಂದಿರುತ್ತಾಳೆ. ತಾಯಿ ಚನ್ನಮ್ಮ ತನ್ನ ಮಗನಿಗೆ ಭೈರವಿ ಕಂಕಣ ಕಟ್ಟಿ ತನ್ನ ಅಕ್ಕಳಾದ ರುದ್ರಮ್ಮನ ಮಗ ಶಿವಲಿಂಗ ರುದ್ರ ಸರ್ಜನನ್ನು ಪಟ್ಟಾಭಿಷೇಕ ಮಾಡುತ್ತಾಳೆ. ಹೀಗೆ ಸಮರ್ಥ ನಾಯಕಿಯಾಗಿ ಪ್ರತಿಯೊಂದು ಕಾರ್ಯದಲ್ಲಿಯು ಸಹ ಮುಂದೆ ನಿಲ್ಲುತ್ತಾಳೆ ತಾಯಿ ಚನ್ನಮ್ಮಾ.   

ಚನ್ನಮ್ಮ ದೂರದೃಷ್ಟಿಯ ದಿಟ್ಟ, ದೀರ ಮಹಿಳೆ ಆಗಲೆ ಮುಂದಿನದನ್ನು ಯೋಚನೆ ಮಾಡಿ ನನ್ನ ದೇಶಕ್ಕಾಗಿ ನನ್ನ ದೇಶದ ಜನತೆಗಾಗಿ, ನನ್ನ ದೇಶದ ಸಮೃದ್ಧಿಗಾಗಿ ತಾಯಿ ಚನ್ನಮ್ಮ ಹೋರಾಡಿದ್ದಾಳೆ ಎಂದು ತಿಳಿಸಿದರು.