ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಆಚಾರ ವಿಚಾರ ತುಂಬಿ: ಚಂದ್ರಶೇಖರಶ್ರೀ
ರಾಯಬಾಗ 08: ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಆಚಾರ ವಿಚಾರ ತುಂಬಿ, ಅವರನ್ನು ಒಳ್ಳೆಯ ಸಂಸ್ಕಾರಯುತ ನಾಗರಿಕರನ್ನಾಗಿ ರೂಪಿಸಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.
ಶುಕ್ರವಾರ ಸಾಯಂಕಾಲ ಪಟ್ಟಣದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಆದರ್ಶ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಎಮ್.ಎನ್.ಐಹೊಳೆ ಸ್ವತಂತ್ರ ಪದವಿಪೂರ್ವ ಕಾಲೇಜ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ಮಕ್ಕಳು ದೇಶ ಕಟ್ಟುವಂತಹ ವ್ಯಕ್ತಿ ಆಗಬೇಕು. ವೃದ್ಧಾಶ್ರಮ ಕಟ್ಟುವಂತಹ ವ್ಯಕ್ತಿ ಆಗಬಾರದು ಎಂದರು.
ರಬಕವಿ ಜಾನಪದ ವಿದ್ವಾಂಸ ಶ್ರೀಕಾಂತ ಕೆಂದೋಳ್ಳಿ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ದಾರಿ ತಪ್ಪುತ್ತಿರುವ ನಮ್ಮ ಯುವ ಜನಾಂಗಕ್ಕೆ ನಮ್ಮ ಭಾರತೀಯ ಸಂಸ್ಕೃತಿ ಬಗ್ಗೆ ತಿಳಿಸುವ ಕಾರ್ಯವನ್ನು ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಮಾಡುತ್ತಿರುವ ಅತ್ಯಂತ ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆ ಕಾರ್ಯದರ್ಶಿ ಅರುಣ ಐಹೊಳೆ, ಹುಕ್ಕೇರಿ ಹಿರೇಮಠದ ಶ್ರೀಗಳ ಆಶೀರ್ವಾದದಿಂದ ಈ ಸಂಸ್ಥೆ ಯಶಸ್ವಿಯಾಗಿ ಬೆಳೆಯುತ್ತಿದೆ. ಇಂದು ದೇಶದಲ್ಲಿ ವೃದ್ಧಾಶ್ರಮ, ಅನಾಥಾಶ್ರಮ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ ವಿಷಯ. ಇದನ್ನು ತಡೆಯಲು ನಮ್ಮ ಮಕ್ಕಳಗೆ ಒಳ್ಳೆಯ ಶಿಕ್ಷಣ, ಸಂಸ್ಕಾರಕವನ್ನು ಶಿಕ್ಷಕರು ಮತ್ತು ಪಾಲಕರು ನೀಡಬೇಕೆಂದರು.
ವಿದ್ಯಾರ್ಥಿಗಳಿಂದ ತಂದೆ-ತಾಯಿಯಂದಿರ ಪಾದ ಪೂಜೆ ಮಾಡುವ ಕಾರ್ಯಕ್ರಮ ನಡೆಯಿತು.
ತಹಶೀಲ್ದಾರ ಸುರೇಶ ಮುಂಜೆ, ಸಿ.ಆರಿ್ಪ ರಾಜು ಕುರಾಡೆ, ಮಾಯವ್ವ ಐಹೊಳೆ, ಬಸವರಾಜ ಸನದಿ, ಸದಾನಂದ ಹಳಿಂಗಳಿ, ಪೃಥ್ವಿರಾಜ ಜಾಧವ, ಸದಾಶಿವ ಘೋರೆ್ಡ, ಅಣ್ಣಾಸಾಹೇಬ ಖೆಮಲಾಪೂರೆ, ಎಸ್.ಎಸ್.ಕಾಂಬಳೆ, ಸಂಗನಗೌಡ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ ಸೇರಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಇದ್ದರು.
ಮುಖ್ಯೋಪಾಧ್ಯಾಯ ಬಿ.ಬಿ.ಪೂಜಾರ ಸ್ವಾಗತಿಸಿದರು, ಪ್ರಾಚಾರ್ಯ ಎಮ್.ಎಲ್.ಗಿಜ್ಜನ್ನವರ ನಿರೂಪಿಸಿ, ವಂದಿಸಿದರು.