ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ

ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ Honorary program for senior citizens

ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ 

ಬೆಳಗಾವಿ : ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಸಮರ​‍್ಿತವಾದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮವನ್ನು  ನಗರದ ದೇವರಾಜ ಅರಸ್ ಕಾಲೋನಿಯ ವೃದ್ದಾಶ್ರಮದಲ್ಲಿ ಆಯೋಜಿಸಲಾಗಿತ್ತು. ಈ  ಸಮಾರಂಭವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ, ನಾಗನೂರಿನ ಶ್ರೀ ಶಿವಬಸವೇಶ್ವರ ಟ್ರಸ್ಟ್‌ ವೃದ್ಧಾಶ್ರಮ, ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಶ್ರೀ ಮಲ್ಲಿಕಾರ್ಜುನ ಫೌಂಡೇಶನ್ ಮುಂತಾದ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ದೇವರಾಜ ಅರಸ ಕಾಲೋನಿಯಲ್ಲಿರುವ ಶ್ರೀ ಚೆನ್ನಮ್ಮ ಬಿ. ಹಿರೇಮಠ ವೃದ್ಧಾಶ್ರಮದಲ್ಲಿ ಈ ಕಾರ್ಯಕ್ರಮ ಜರುಗಿದ್ದು, ಹಿರಿಯ ನಾಗರಿಕರಿಗೆ ಕಾನೂನು ವಿಷಯಕ ಮಾಹಿತಿ ನೀಡುವ ಜೊತೆಗೆ ಅವರ ಕೊಡುಗೆಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದ ಭಾಗವಾಗಿ ಶ್ರೀ ಮಲ್ಲಿಕಾರ್ಜುನ ಫೌಂಡೇಶನ್ ವತಿಯಿಂದ ಶುದ್ಧ ಕುಡಿಯುವ ನೀರಿನ ಯಂತ್ರವೊಂದನ್ನು ವೃದ್ಧಾಶ್ರಮದಲ್ಲಿ ಉದ್ಘಾಟಿಸಲಾಯಿತು. 

ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸಂದೀಪ್ ಪಾಟೀಲ್ ಉದ್ಘಾಟಿಸಿ ಮಾತನಾಡುತ್ತಾ, "ಇಂದು ನಾವು ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೇವೆ. ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮತ್ತು ಮನೆ ಆಸ್ತಿಯಾದ ಹಿರಿಯರನ್ನ ಉಳಿಸಿಕೊಳ್ಳುವಲ್ಲಿ ನಮ್ಮ ಹಿರಿಯರು ಹಾಗೂ ಅವರ ಮಕ್ಕಳು ಇಬ್ಬರೂ ವಿಫಲರಾಗಿದ್ದಾರೆ. ಇದರಿಂದಾಗಿ ಹಿರಿಯರು ತಮ್ಮ ಜೀವನದ ಕೊನೆಯ ಹಂತದಲ್ಲಿ ನಿರ್ಗತಿಕರಾಗುತ್ತಿದ್ದಾರೆ," ಎಂದು ವಿಷಾದ ವ್ಯಕ್ತಪಡಿಸಿದರು. 

ಆನಂತರ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚೇತನ್ ಕುಮಾರ್ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ ಅವರು, "ಹಿರಿಯರ ಮನಸ್ಸು ಮಗುವಿನಂತೆಯೇ ಶುದ್ಧ. ಅವರಿಗೆ ದೊರೆಯುವ ಯಾವುದೇ ಉಪಯುಕ್ತ ವಸ್ತುವನ್ನೂ ತಮ್ಮ ಮನೆಯವರಿಗೆ ಕೊಡಲು ಇಚ್ಛಿಸುವ ಪ್ರವೃತ್ತಿಯು ಅವರ ನಿಸ್ವಾರ್ಥತೆಗೆ ಸಾಕ್ಷಿಯಾಗಿದೆ. ತಮ್ಮ ಇಲಾಖೆಯಿಂದ ಸರ್ಕಾರದ ಸಹಾಯ ಸಹಕಾರ ಸದಾ ಅವರಿಗೆ ಲಭ್ಯವಿದೆ," ಎಂದು ಭರವಸೆ ನೀಡಿದರು. 

ತದನಂತರ, ಶ್ರೀಮತಿ ನಿರ್ಮಲಾ ಮ. ಪಾಟೀಲ್, ಅಧ್ಯಕ್ಷರು, ಶ್ರೀ ಮಲ್ಲಿಕಾರ್ಜುನ ಫೌಂಡೇಶನ್ ಅವರು ಮಾತನಾಡಿ, "ನಾನು ಬದುಕಿನಲ್ಲಿ ಅನುಭವಿಸಿದ ನೋವನ್ನ ಇತರ ಮಹಿಳೆಯರು ಅನುಭವಿಸಬಾರದು ಎಂಬ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆ ಈ ಫೌಂಡೇಶನ್ ಸ್ಥಾಪಿಸಲಾಗಿದೆ. ಇಂದು ನಿಮ್ಮ ನಗು, ಧೈರ್ಯ ನಮ್ಮಲ್ಲೂ ಹೊಸ ಉತ್ಸಾಹವನ್ನ ಹುಟ್ಟುಹಾಕುತ್ತದೆ," ಎಂದು ಅವರು ತಮ್ಮ ಭಾವನೆ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ವೃದ್ಧಾಶ್ರಮದ ಹಿರಿಯ ನಾಗರಿಕರು ಹಾಡು, ನೃತ್ಯ ಹಾಗೂ ಏಕಪಾತ್ರಾಭಿನಯದ ಮೂಲಕ ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿ ಅತೀಥಿಗಳ ಹಾಗೂ  ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. 

      ಈ ವೇಳೆ, ಗೌರವಾನ್ವಿತ ಸಂದೀಪ ಪಾಟೀಲ್ (ಹಿರಿಯ ಸಿವಿಲ್ ನ್ಯಾಯಾಧೀಶರು, ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ), ಶ್ರೀಮತಿ ನಿರ್ಮಲಾ ಮ. ಪಾಟೀಲ್ (ಅಧ್ಯಕ್ಷರು, ಶ್ರೀ ಮಲ್ಲಿಕಾರ್ಜುನ ಫೌಂಡೇಶನ್ ಬೆಳಗಾವಿ), ಚೇತನ್ ಕುಮಾರ್ (ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ), ಎಂ. ಎಸ್ ಚೌಗಲಾ (ಸಂಸ್ಥಾಪಕರು, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ), ಶ್ರೀಮತಿ ವೈಜಯಂತಿ ಚೌಗಲಾ (ಗೌರವ ಕಾರ್ಯದರ್ಶಿ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ) ಅವರು ಮತ್ತು ಮಹಿಳಾ ಕಲ್ಯಾಣ ಸಂಸ್ಥೆಯ ಸಿಬ್ಬಂದಿ ವರ್ಗ, ವೃದ್ಧಾಶ್ರಮದ ಹಿರಿಯರು ಉಪಸ್ಥಿತರಿದ್ದರು