ಗೃಹಲಕ್ಷ್ಮಿ: ಮನೆ ಯಜಮಾನಿಯರ ಸ್ವಾವಲಂಬಿ ಜೀವನಕ್ಕೆ ವರದಾನ
ಬಳ್ಳಾರಿ 05:ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಬಡ ಕುಟುಂಬಗಳ ಮನೆಯ ಯಜಮಾನಿಗೆ ಮಾಸಿಕ 2000 ರೂಪಾಯಿ ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು, ಸಂಕಷ್ಟದಲ್ಲಿದ್ದವರಿಗೆ ನೆರವಾಗುವುದು, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಯೋಜನೆಯ ಆಶಯವಾಗಿದ್ದು, ಮಹಿಳಾ ಕೂಲಿ ಕಾರ್ಮಿಕರು, ಬಡ ಕುಟುಂಬದ ಮಹಿಳೆಯರಿಗೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ಆಸರೆಯಾಗಿದೆ.
ಮಕ್ಕಳ ಶಾಲೆ ಶುಲ್ಕ, ವೈದ್ಯಕೀಯ ಖರ್ಚು, ದಿನಸಿ ಖರೀದಿ ಹೀಗೆ ನಾನಾ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡುವ ರೂ.2000 ಸದ್ಬಳಕೆಯಾಗುತ್ತಿದೆ. ಇದರೊಂದಿಗೆ ಕೆಲ ಮಹಿಳೆಯರು ಸ್ವಂತ ವ್ಯಾಪಾರ, ಹೊಲಿಗೆ ಯಂತ್ರ ಖರೀದಿ, ಬಳೆ ಅಂಗಡಿ ವ್ಯಾಪಾರ, ಬ್ಯೂಟಿ ಪಾರ್ಲರ್ ಆರಂಭಿಸಿ ಗೃಹಲಕ್ಷ್ಮಿ ಯೋಜನೆಯ ಸದುಯೋಗ ಪಡೆದುಕೊಂಡಿದ್ದಾರೆ.2023 ಆಗಸ್ಟ್ 30 ರಂದು ಯೋಜನೆಗೆ ಯುವಜನ ಸೇವೆ, ಕ್ರೀಡಾ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ನಾಗೇಂದ್ರ ಅವರು ಚಾಲನೆ ನೀಡಿದ್ದರು. ನೋಂದಾಯಿಸಿಕೊಂಡ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುತ್ತಾ ಬಂದಿತ್ತು. ಈವರೆಗೂ 13 ತಿಂಗಳ ಸಹಾಯಧನ ಫಲಾನುಭವಿಗಳಿಗೆ ತಲುಪಿದೆ. ಇಲ್ಲಿಯವರೆಗೂ ಯೋಜನೆಗೆ 67724.88 ಕೋಟಿ ರೂ. ವೆಚ್ಚವಾಗಿದೆ.ಎಷ್ಟು ಮಂದಿ ನೋಂದಣಿ?:ಈ ಯೋಜನೆಗೆ ಇಲ್ಲಿಯವರೆಗೂ ಜಿಲ್ಲೆಯಲ್ಲಿ 2,91,526 ಗೃಹಿಣಿಯರು ನೋಂದಣಿ ಮಾಡಿಸಿದ್ದಾರೆ. ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಲೂ ಅರ್ಹ ಫಲಾನುಭವಿಗಳಿಗೆ ನೋಂದಣಿಗೆ ಅವಕಾಶ ಇದೆ. ರೇಷನ್ ಕಾರ್ಡ್ ಹೊಂದಿರುವ ತೆರಿಗೆ ಪಾವತಿ ಮಾಡದ ಕುಟುಂಬದ ಯಜಮಾನಿಯರು ನೋಂದಣಿ ಮಾಡಬಹುದು.ಫಲಾನುಭವಿಗಳ ಯಶೋಗಾಥೆ: ಗೃಹಲಕ್ಷ್ಮಿ ಹಣದಿಂದ ಬಳೆ ಅಂಗಡಿ ಪ್ರಾರಂಭಿಸಿದ ಮಹಿಳೆ:ಸಂಡೂರು ತಾಲ್ಲೂಕಿನ ಹೊಸ ದರೋಜಿ ಗ್ರಾಮದ ನಿವಾಸಿಯಾದ ಲಕ್ಷ್ಮಿ ಅವರು ತಮ್ಮ ಕಷ್ಟಕರ ಜೀವನದಲ್ಲಿ ಸಣ್ಣ ವ್ಯಾಪಾರ ಆರಂಭಿಸಬೇಕೆಂಬ ಆಸೆ ಗೃಹಲಕ್ಷ್ಮಿ ಯೋಜನೆಯು ಈಡೇರಿಸಿದ್ದು, ವ್ಯಾಪಾರವು ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ನೆರವಾಗಿದೆ. ಕುಟುಂಬದ ನಿರ್ವಹಣೆಗಾಗಿ ಬಳೆ ಅಂಗಡಿಯನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದು, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ವ್ಯಾಪಾರವು ತುಂಬಾ ಅನುಕೂಲಕರವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೊಲಿಗೆಯಂತ್ರ ಖರೀದಿ:ಕುರುಗೋಡು ಪಟ್ಟಣದ ನಿವಾಸಿ ಭಾಗ್ಯಶ್ರೀ ಅವರು, ಏನಾದರೂ ಉದ್ಯೋಗ ಮಾಡಿ ಹಣ ಸಂಪಾದನೆ ಮಾಡಬೇಕು, ನನ್ನ ವೈಯಕ್ತಿಕ ಖರ್ಚು, ಮಕ್ಕಳ ವಿದ್ಯಾಭ್ಯಾಸ, ಬಟ್ಟೆ, ಪುಸ್ತಕ, ಕುಟುಂಬ ನಿರ್ವಹಣೆ ಸೇರಿದಂತೆ ಗಂಡನಿಗೆ ಹೆಗಲಾಗಿ ನಾನೂ ನಿಲ್ಲಬೇಕೆಂಬ ಅವರ ಹಂಬಲ ಹೊಂದಿದ್ದರು. ಟೈಲರಿಂಗ್ ತರಬೇತಿ ಪಡೆದುಕೊಂಡಿದ್ದ ಅವರು, ಗೃಹಲಕ್ಷ್ಮಿ ಹಣದಿಂದ ಕಳೆದ ಅಕ್ಟೋಬರ್ ತಿಂಗಳಲ್ಲಿ ಟೈಲರಿಂಗ್ ಮಿಷನ್ ಖರೀದಿ ಮಾಡಿದ್ದಾರೆ.
‘ಪ್ರತಿದಿನ ಕುಟುಂಬ, ಲಾಲನೆ-ಪಾಲನೆಯ ಜೊತೆಗೆ ಉಳಿದ ಸಮಯದಲ್ಲಿ ಪ್ರತಿದಿನ ಬಟ್ಟೆ ಹೊಲೆಯುವುದು, ಜಿಗ್-ಜಾಗ್ ಮಾಡುವುದು, ಸೀರೆಗಳಿಗೆ ಕುಚ್ಚು ಹಾಕುವುದು ಸೇರಿದಂತೆ ಇನ್ನಿತರೆ ಚಟುವಟಿಕೆ ಮಾಡುತ್ತಾ, ದಿನಕ್ಕೆ ಕನಿಷ್ಠ ರೂ.300 ರಿಂದ 500/-ಗಳ ಸಂಪಾದನೆ ಮಾಡುತ್ತಿದ್ದೇನೆ. ನನ್ನ ಜೀವನದಲ್ಲಿ ವರದಾನವಾಗಿ ಮತ್ತು ದೀವೀಗೆಯಾಗಿ ಬಂದ ‘ಗೃಹಲಕ್ಷ್ಮಿ’ ಜಾರಿಗೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.’
ಭಾಗ್ಯಶ್ರೀ, ಗೃಹಿಣಿ, ಕುರುಗೋಡು ಪಟ್ಟಣ; ಬ್ಯೂಟಿ ಪಾರ್ಲರ್ ಕನಸು ನನಸು:ಕುರುಗೋಡು ಪಟ್ಟಣದ ನಿವಾಸಿಯಾದ ಜೀವಿತಾ ಅವರು, ಬ್ಯೂಟಿಷಿಯನ್ ತರಬೇತಿ ಹೊಂದಿದ್ದರು. ಬ್ಯೂಟಿಪಾರ್ಲರ್ ಆರಂಭಿಸಬೇಕೆಂಬ ಹಂಬಲ ತುಂಬಾ ಇತ್ತು. ಅದರೆ ಹಣದ ಕೊರತೆಯಿಂದ ಕನಸು ಕಮರಿತ್ತು. ಗೃಹಲಕ್ಷ್ಮಿ ಯೋಜನೆಯು ಜೀವಕಳೆ ತುಂಬಿದ್ದು, ಸದ್ಯ ಮಕ್ಕಳ ವಿಧ್ಯಾಬ್ಯಾಸ, ಬಟ್ಟೆ, ಪುಸ್ತಕ ಕುಟುಂಬ ನಿರ್ವಹಣೆ ಸೇರಿದಂತೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.‘ಇಲ್ಲಿಯವರೆಗೆ ಗೃಹಲಕ್ಷ್ಮಿ ಹಣದಿಂದ ಒಟ್ಟು ರೂ.30 ಸಾವಿರ ಪಡೆದಿದ್ದು, ಈ ಹಣವನ್ನೆ ನಾನು ಬಂಡವಾಳವಾಗಿ ಬಳಿಸಿಕೊಂಡು, ಟಚ್ ಆಂಡ್ ಗ್ಲೋ ಎಂಬ ಹೆಸರಿನಲ್ಲಿ ಸ್ವಂತ ಬ್ಯೂಟಿಪಾರ್ಲರ್ ತೆರೆದಿದ್ದೇನೆ. ಉತ್ತಮ ಆದಾಯದ ನೀರೀಕ್ಷೆ ಇಟ್ಟುಕೊಂಡಿದ್ದೇನೆ. ನನ್ನ ಕನಸನ್ನು ನನಸು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಹೇಳುತ್ತಾರೆ ಜೀವಿತಾ ಅವರು.
ಹೊಲಿಗೆಯಂತ್ರ ಖರೀದಿಸಿ ಸಂತಸಪಟ್ಟ ಮಹಿಳೆ:ಸಂಡೂರು ತಾಲ್ಲೂಕಿನ ವಿಠಲಾಪುರ ಗ್ರಾಮದ ನಿವಾಸಿಯಾದ ಸಾವಿತ್ರಿ ಅವರು ಪ್ರತಿ ತಿಂಗಳು ಬರುತ್ತಿದ್ದ ಗೃಹಲಕ್ಷಿ ಯೋಜನೆಯ 2000 ಸಾವಿರ ರೂ.ಗಳನ್ನು ಕೂಡಿಸಿಟ್ಟುಕೊಂಡು, ಸ್ವಂತಕ್ಕೆ ಹೊಲಿಗೆ ಯಂತ್ರ ಖರೀದಿಸಿದ್ದು, ಮನೆಯ ಬದುಕಿಗೆ ದಾರೀದೀಪವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಕುಟುಂಬಗಳಿಗೆ ಮುಖ್ಯ ಆಧಾರ ಸ್ತಂಭವಾಗಿದ್ದು, ಬಡ ಕುಟುಂಬದ ನಿರ್ವಹಣೆಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಠಾನಗೊಳಿಸಿ ಮಹಿಳೆಯರನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ.ಬಡತನದ ಬೇಗೆಯಲ್ಲಿ ನೊಂದಿರುವಂತಹ ಮಹಿಳೆಯರಿಗೆ ಮತ್ತು ಒಂದಿಲ್ಲ ಒಂದು ರೀತಿಯಲ್ಲಿ ಕುಟುಂಬದ ಸದಸ್ಯರ ಆರ್ಥಿಕ ಹೊರೆ ಸರಿತೂಗಿಸಲು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯು ತುಂಬಾ ಅನುಕೂಲವಾಗಿದೆ ಎಂದು ಹೇಳುತ್ತಿದ್ದಾರೆ ಸೌಲಭ್ಯ ಪಡೆಯುತ್ತಿರುವ ಮಹಿಳೆಯರು.