ಕೌಟುಂಬಿಕ ಹಿಂಸೆಗೊಳಗಾದ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಿ : ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ

Give skill training to women who are victims of domestic violence: Collector K. Lakshmi Priya

ಕೌಟುಂಬಿಕ ಹಿಂಸೆಗೊಳಗಾದ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಿ : ಜಿಲ್ಲಾಧಿಕಾರಿ  ಕೆ. ಲಕ್ಷ್ಮಿಪ್ರಿಯಾ 

ಕಾರವಾರ  7 : ಕುಟುಂಬದೊಳಗೆ  ಉಂಟಾಗುವ  ಯಾವುದೇ  ರೀತಿಯ  ಹಿಂಸೆಗೊಳಗಾದ  ಮಹಿಳೆಯರಿಗೆ  ರಕ್ಷಣೆ,  ಸಾಂತ್ವನ  ಒದಗಿಸುವ ಜೊತೆಗೆ  ಆಪ್ತ  ಸಮಾಲೋಚನೆಗೆ  ಒಳಪಡಿಸಿ, ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಕೌಶಲ್ಯ ತರಬೇತಿಗಳನ್ನು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾಸೂಚಿಸಿದರು.ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ನಡೆದ,  ಮಹಿಳಾ  ಮತ್ತು  ಮಕ್ಕಳ  ಅಭಿವೃದ್ಧಿ  ಇಲಾಖೆಯ ಮಿಶನ್ ಶಕ್ತಿ ಯೋಜನೆ ಹಾಗೂ ಇತರೇ ಯೋಜನೆಗಳ ಪ್ರಗತಿ ಕುರಿತ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ  ಪ್ರಸಕ್ತ  ಸಾಲಿನಲ್ಲಿ  ಇದುವರೆಗೆ  ಕೌಟುಂಬಿಕ  ಹಿಂಸೆ  ಕುರಿತಂತೆ 261 ಪ್ರಕರಣಗಳು  ದಾಖಲಾಗಿದ್ದು, 213 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ದಾಖಲಾಗಿರುವ ಈ ಎಲ್ಲಾ  ಪ್ರಕರಣಗಳಲ್ಲಿ  ನೊಂದ  ಮಹಿಳೆಯರು ಕೌಶಲ್ಯ  ತರಬೇತಿ  ಪಡೆಯಲು  ಇಚ್ಚೆಯಿದ್ದಲ್ಲಿ ಅಗತ್ಯ  ತರಬೇತಿಗೆ ವ್ಯವಸ್ಥೆ ಮಾಡಬೇಕು. ಈ ಮೂಲಕ ಕುಟುಂಬದಲ್ಲಿ  ಸ್ವ ಉದ್ಯೋಗ ಅಥವಾ ಸ್ವಾವಲಂಬಿ  ಜೀವನ  ಸಾಗಿಸಲು  ನೆರವು  ನೀಡಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಾಂತ್ವನ  ಕೇಂದ್ರಗಳಲ್ಲಿ  ರಕ್ಷಣೆ, ಅಲ್ಪಾವಧಿ ಆಶ್ರಯ, ಸಲಹೆ,  ಮಾರ್ಗದರ್ಶನ  ಹಾಗೂ  ಜಿಲ್ಲಾ  ಕಾನೂನು ಸೇವಾ ಪ್ರಾಧಿಕಾರದ  ಸಹಯೋಗದಲ್ಲಿ  ಉಚಿತ  ಕಾನೂನು ನೆರವು ಒದಗಿಸುವಂತೆ ಮತ್ತು ಹಳಿಯಾಳದಲ್ಲಿ ಹೊಸದಾಗಿ ಸಾಂತ್ವನ ಕೇಂದ್ರ ತೆರೆಯುವ ಕುರಿತಂತೆ  ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಮಕ್ಕಳ ಗ್ರಾಮ ಸಭೆಗಳಲ್ಲಿ ಮಕ್ಕಳಿಂದ ಸ್ವೀಕಾರವಾಗುವ ಮನವಿಗಳ ಬಗ್ಗೆ ಪರೀಶೀಲಿಸಿ, ನಿರಂತರವಾಗಿ ಅವುಗಳನ್ನು ಫಾಲೋ ಅಪ್ ಮಾಡಿ ಕ್ರಮ ಕೈಗೊಳ್ಳಬೇಕು. ಎಲ್ಲಾ ತಾಲೂಕುಗಳಲ್ಲಿ  ಬಾಲ ವಿಕಾಸ ಸಮಿತಿ ಸಭೆಗಳು ನಿಯಮಿತವಾಗಿ ನಡೆಯಬೇಕು, ಶಾಲೆ  ಬಿಟ್ಟ  ಮಕ್ಕಳ  ಬಗ್ಗೆ ವಿಶೇಷ ಗಮನಹರಿಸಿ ಅವರನ್ನು ಪುನಃ ಶಾಲೆಗೆ ಸೇರೆ​‍್ಡ ಮಾಡಬೇಕು. ಶಾಲಾ ಕಾಲೇಜುಗಳಲ್ಲಿ, ಅಂಗನವಾಡಿ ಕಾರ್ಯಕರ್ತೆಯರ ಸಭೆಗಳಲ್ಲಿ, ಗ್ರಾಮ ಸಭೆ, ಮಕ್ಕಳ ಸಭೆಗಳಲ್ಲಿ ಪೋಕ್ಸೋ ಕಾಯಿದೆ,  ಬಾಲ್ಯ  ವಿವಾಹ  ನಿಷೇಧ, ಮಕ್ಕಳ ಸಹಾಯವಾಣಿ 1098 ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು ಎಂದರು . ಮಾತೃ  ವಂದನಾ ಯೋಜನೆಯಡಿ ಅರ್ಹ ಎಲ್ಲಾ ಗರ್ಭಿಣಿಯರಿಗೆ ಆರ್ಥಿಕ ನೆರವು ದೊರೆಯುವಂತೆ  ನೋಡಿಕೊಳ್ಳಬೇಕು.  ತಂತ್ರಾಂಶದಲ್ಲಿ  ಕಂಡು  ಬರುವ  ತಾಂತ್ರಿಕ ದೋಷಗಳನ್ನು  ಎನ್‌.ಐ.ಸಿ  ಗಮನಕ್ಕೆ  ತಂದು ಮತ್ತು ಆಧಾರ್ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ವ್ಯವಸ್ಥಾಪಕರನ್ನು  ಸಂಪರ್ಕಿಸಿ ಬಗೆಹರಿಸಿಕೊಳ್ಳುವಂತೆ  ತಿಳಿಸಿದರು. ಜಿಲ್ಲೆಯಲ್ಲಿ ಗೃಹಲಕ್ಷಿ ಯೋಜನೆಯಡಿ ಶೇ.98.02 ಪ್ರಗತಿ ಸಾಧಿಸಿದ್ದು, ಯೋಜನೆಗೆ ಒಳಪಡಲು ವಿವಿಧ ಕಾರಣಗಳಿಂದ ಬಾಕಿ ಇರುವ 1652 ಜನರಲ್ಲಿ, ಹಾಸಿಗೆ ಪೀಡಿತರ ಮನೆಗಳಿಗೆ ಭೇಟಿ ನೀಡಿ ಯೋಜನೆಗೆ ನೋಂದಾಯಿಸುವಂತೆ, ಆಧಾರ್ ಮತ್ತು ರೇಷನ್  ಕಾರ್ಡ್‌ ಹೊಂದಾಣಿಕೆ ಸಮಸ್ಯೆಯಿರುವವರ ಕುರಿತಂತೆ ಜಿಲ್ಲಾ ಆಧಾರ್ ಸಮಾಲೋಚಕರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಯೋಜನೆಯ ಪ್ರಗತಿಯಲ್ಲಿ ಶೀಘ್ರದಲ್ಲೇ ಶೇ.100 ಸಾಧನೆ ಮಾಡುವಂತೆ ತಿಳಿಸಿದರು.ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಎಲ್ಲಾ ತಾಲೂಕುಗಳಲ್ಲಿ ನಿವೇಶನ ಹುಡುಕುವಂತೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ನಗರ ಪ್ರದೇಶದಲ್ಲಿ ಸಿಎ ನಿವೇಶನ ಲಭ್ಯವಿದ್ದಲ್ಲಿ ಅದನ್ನು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನೀಡಲಾಗುವುದು ಎಂದರು.ಜಿಲ್ಲೆಯಲ್ಲಿ ಮಹಿಳೆಯರು ಮತ್ತು  ಮಕ್ಕಳ ರಕ್ಷಣಾ  ಕಾರ್ಯದಲ್ಲಿ  ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.  ದಿವ್ಯಶ್ರೀ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ  ವಿರೂಪಾಕ್ಷ  ಗೌಡ  ಪಾಟೀಲ್, ವಿವಿಧ ಇಲಾಖೆಯ ಅಧಿಕಾರಿಗಳು, ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.