ವಿಪತ್ತು ನಿರ್ವಹಣೆ: ಸಮುದಾಯಗಳಲ್ಲಿ ಜಾಗೃತಿ ಅಗತ್ಯ- ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ
Disaster management: Awareness is needed in communities - Deputy Commissioner Nagendra Prasad.K
ಬಳ್ಳಾರಿ 23: ವಿಪತ್ತು ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವಾಗಿದ್ದು, ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಗುರುವಾರ, ನಗರದ ನೂತನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಜ.19 ರಿಂದ 24 ರವರೆಗೆ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮ ಕುರಿತು ಹಮ್ಮಿಕೊಂಡಿರುವ ಸಮುದಾಯ ಜಾಗೃತಿ ಕಾರ್ಯಕ್ರಮಗಳ ಕುರಿತು ಚರ್ಚಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರವಾಹ ಜೊತೆಗೆ ಇತರೆ ವಿಪತ್ತುಗಳ ಬಗ್ಗೆ ಸಹ ಅರಿವು ಮೂಡಿಸುವುದು ಅವಶ್ಯವಿದ್ದು, ಜಿಲ್ಲೆಯಲ್ಲಿ ಸಂಭವಿಸಬಹುದಾದಂತಹ ಅಪಾಯಗಳನ್ನು ಗುರುತಿಸಿ, ಅವುಗಳಿಂದಾಗುವ ವಿಪತ್ತುಗಳನ್ನು ತಪ್ಪಿಸಲು ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಸಮುದಾಯಗಳಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಮುಖ ಅಪಘಾತ, ಅಪಾಯಗಳು ಮತ್ತು ಕಾರ್ಖಾನೆಗಳಲ್ಲಿ ಸಂಭವಿಸಬಹುದಾದಂತಹ ವಿಪತ್ತುಗಳ ಅಪಾಯಗಳನ್ನು ಗುರುತಿಸಿ ಪಟ್ಟಿ ಮಾಡಿ ಕಾರ್ಖಾನೆಯ ತುರ್ತು ಯೋಜನೆಯಲ್ಲಿ ಅಳವಡಿಸಲು ಸೂಚಿಸಬೇಕು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಹಾಗೂ ಎನ್ಡಿಆರ್ಎಫ್ ತಂಡದ ಸಹಾಯದೊಂದಿಗೆ ಅಣಕು ಪ್ರದರ್ಶನ ತರಬೇತಿ ನೀಡಲು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್ ಅವರು ಮಾತನಾಡಿ, ವಿಪತ್ತು ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವು ಮುಖ್ಯವಾಗಿದ್ದು, ಅವರ ಭಾಗವಹಿಸುವಿಕೆಯ ಕುರಿತು ಅರಿವು ಮೂಡಿಸುವ ತರಬೇತಿಗಳಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ವಿಪತ್ತುಗಳು ಸಂಭವಿಸಿದಾಗ ಬೇಕಾಗುವ ಅತಿ ಅವಶ್ಯವಿರುವ 2040 ಸಾಮಾಗ್ರಿಗಳ ಪಟ್ಟಿ ಐಡಿಆರ್ಎನ್ ತಂತ್ರಾಂಶದಲ್ಲಿ ಕ್ರೋಢಿಕರಿಸಲಾಗಿದ್ದು, ಅವಶ್ಯವಿರುವಾಗ ಅತೀಶೀಘ್ರವಾಗಿ ಬಳಸಿಕೊಳ್ಳಲು ಅನುಕೂಲವಾಗಲಿವೆ ಎಂದರು.
ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಪರಮೇಶ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳನ್ನು ಗುರುತಿಸಿದ್ದು, ವಿವಿಧ ವಿಪತ್ತುಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ವಿಪತ್ತು ಸಂಭವಿಸಿದಾಗ ಸನ್ನದ್ಧಗೊಳಿಸಲು ಬೇಕಾದ ಕೌಶಲ್ಯಗಳನ್ನು ಎನ್ಡಿಆರ್ಎಫ್ ತಂಡಗಳು ಅಣಕು ಪ್ರದರ್ಶನದ ಮೂಲಕ ಅಭ್ಯಾಸ ಮಾಡಿಸುವರು ಎಂದು ಸಭೆಗೆ ತಿಳಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬೆಟಾಲಿಯನ್-10 ಇನ್ಸ್ಪೆಕ್ಟರ್ ಅಜಯಕುಮಾರ್ ಅವರು ಮಾತನಾಡಿ, ಎನ್ಡಿಆರ್ಎಫ್ ತಂಡದ ಸದಸ್ಯರು, ಸಂಭವಿಸಬಹುದಾದಂತಹ ವಿವಿಧ ವಿಪತ್ತುಗಳ (ಪ್ರವಾಹ, ಭೂಕಂಪ, ಸಿಡಿಲು, ಸೈಕ್ಲೋನ್ ಮತ್ತು ಬರಗಾಲ ಇತ್ಯಾದಿ) ಬಗ್ಗೆ ಅರಿವು ಮೂಡಿಸುವುದು. ವಿಪತ್ತುಗಳು ಸಂಭವಿಸಿದಾಗ ಸನ್ನದ್ಧಗೊಳಿಸಲು ಕೌಶಲ್ಯಗಳನ್ನು ಅಣಕು ಪ್ರದರ್ಶನ ಮೂಲಕ ಅಭ್ಯಾಸ ಮಾಡಿಸುವರು ಹಾಗೂ ಪೂರ್ವದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಮತ್ತು ಸಿಪಿಆರ್ ವಿಧಾನಗಳು ತಿಳಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಜ.19 ರಿಂದ 24 ರವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಎನ್ಡಿಆರ್ಎಫ್ ತಂಡದ ಸದಸ್ಯರು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 