ರೈಲು ಮಾರ್ಗ ಮಂಜೂರಿಗೆ ಆಗ್ರಹ ಮಾಜಿ ಶಾಸಕ ಭೂಸನೂರ ನೇತೃತ್ವದ ನಿಯೋಗದಿಂದ ಮನವಿ

ರೈಲು ಮಾರ್ಗ ಮಂಜೂರಿಗೆ ಆಗ್ರಹ ಮಾಜಿ ಶಾಸಕ ಭೂಸನೂರ ನೇತೃತ್ವದ ನಿಯೋಗದಿಂದ ಮನವಿ Delegation led by former MLA Bhusanura demands sanction of railway line

ರೈಲು ಮಾರ್ಗ ಮಂಜೂರಿಗೆ ಆಗ್ರಹ ಮಾಜಿ ಶಾಸಕ ಭೂಸನೂರ ನೇತೃತ್ವದ ನಿಯೋಗದಿಂದ ಮನವಿ 

ಸಿಂದಗಿ 11: ಶೇಡಬಾಳ-ವಾಡಿ ಸಿಂದಗಿ ಮಾರ್ಗವಾಗಿ ರೈಲು ಮಾರ್ಗ ಮಂಜೂರಾತಿಗಾಗಿ ಒತ್ತಾಯಿಸಿ ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವದ ನಿಯೋಗ ನವದೆಹಲಿಯಲ್ಲಿ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು. 

ನಿಯೋಗದಲ್ಲಿ ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಬಾಳು ಮುಳಜಿ, ಪ್ರಭು ಹೊಸಮನಿ ಇದ್ದರು.  

ಮನವಿ ಸಲ್ಲಿಸಿದ ರಮೇಶ ಭೂಸನೂರ, ಸ್ವಾತಂತ್ರ್ಯಪೂರ್ವದಲ್ಲಿ ಈ ಮಾರ್ಗದ ರೈಲ್ವೆ ಸಮೀಕ್ಷೆ ಕಾರ್ಯ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ವಾಣಿಜ್ಯ ಮತ್ತು ವ್ಯಾವಹಾರಿಕವಾಗಿ ವೇಗದಲ್ಲಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಇಲ್ಲಿಯ ಜನತೆ, ರೈತರು ಬೆಂಗಳೂರಿಗೆ ವ್ಯವಹಾರಿಕ ಸಂಪರ್ಕ ಹೊಂದಿದ್ದರಿಂದ ಸಾರಿಗೆ ವ್ಯವಸ್ಥೆ ತೊಂದರೆ ಇದೆ. ಜಿಲ್ಲೆಯ ಇಂಡಿ, ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲ್ಲೂಕುಗಳಿಗೆ ರೈಲು ಸಂಪರ್ಕ ಕಲ್ಪಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಪ್ರಮುಖ ಪಟ್ಟಣವೆನಿಸಿರುವ ಸಿಂದಗಿಗೆ ರೈಲು ಸಂಚಾರ ಇಲ್ಲದಿರುವುದು ವಿಷಾದನೀಯ. ಜಿಲ್ಲೆಯ ಮತ್ತು ಉತ್ತರಕರ್ನಾಟಕದ ಜನಪ್ರತಿನಿಧಿಗಳು ಕೇಂದ್ರದ ರೈಲ್ವೆ ಸಚಿವರಾಗಿದ್ದರೂ ಯಾರೊಬ್ಬರೂ ಈ ಬಗ್ಗೆ ಗಂಭೀರತೆ ತೋರದೆ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ದೂರಿದ್ದಾರೆ. 

1935ರಲ್ಲಿ ಸಮೀಕ್ಷೆ ನಡೆದ ಶೇಡಬಾಳ-ವಾಡಿ ರೈಲು ಮಾರ್ಗ ಯೋಜನೆಯನ್ನು ಜಾರಿಗೊಳಿಸಿದರೆ ಸಿಂದಗಿ ಪಟ್ಟಣ ಒಳಗೊಂಡು ಬೆಳಗಾವಿ, ವಿಜಯಪುರ, ಕಲಬುರಗಿ ಭಾಗದ ಜನರಿಗೆ ಅನುಕೂಲವಾಗಲಿದೆ. ಹೀಗಾಗಿ ರೈಲ್ವೆ ಸಚಿವರು ಈ ರೈಲು ಮಾರ್ಗ ಯೋಜನೆಯನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬಹು ವರ್ಷಗಳ ಬೇಡಿಕೆ ಈಡೇರಿಕೆ ಆಗಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. 

ಇಂಡಿ ರೈಲ್ವೆ ನಿಲ್ದಾಣದಲ್ಲಿ ಗದಗ-ಮುಂಬೈ ರೈಲು ನಿಲುಗಡೆಯಾಗಬೇಕು ಎಂದು ಅವರು ಕೇಳಿಕೊಂಡಿದ್ದಾರೆ. ರೈಲ್ವೆ ಸಚಿವ ವಿ.ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ‘ಪತ್ರಿಕೆಯ ಪ್ರತಿನಿಧಿ’ ಗೆ ದೂರವಾಣಿ ಮುಖಾಂತರ ತಿಳಿಸಿದ್ದಾರೆ.