ಸುಕ್ರಿ ಬೊಮ್ಮಗೌಡ ನಿಧನ: ಸಂತಾಪ ಸೂಚಕ ಸಭೆ
ಹಂಪಿ 13: ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ ಅವರು ಫೆ.13ರಂದು ನಿಧನ ಹೊಂದಿದ್ದು ಅವರ ಗೌರವಾರ್ಥವಾಗಿ ಸಂತಾಪ ಸೂಚಕ ಸಭೆಯನ್ನು ಕ್ರಿಯಾಶಕ್ತಿ ಕಟ್ಟಡದ ಸಿಂಡಿಕೇಟ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯವರಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಮಾತನಾಡುತ್ತ, ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಮೂಲತಃ ಮಾತೃಪ್ರದಾನ ಸಮಾಜವಾಗಿದೆ. ಅತ್ಯಂತ ಪ್ರತಿಭಾವಂತ ಕಲಾವಿದೆಯಾದ ಸುಕ್ರಿಯವರು ಪರಿಸರ ಚಳುವಳಿ, ಮಧ್ಯಪಾನ ವಿರೋಧಿ ಚಳುವಳಿಗಳಲ್ಲಿ ನಾಯಕಿಯಾಗಿ ಹೋರಾಟ ನಡೆಸಿದ್ದಾರೆ. ಸುಕ್ರಿಯವರು ನಾಡಿನ ಶೋಷಿತರನ್ನು ಪ್ರತಿನಿಧಿಸುತ್ತ ಬಂದಿದ್ದಾರೆ. ಹಾಲಕ್ಕಿಗಳ ಪಾರಂಪರಿಕ ತಿಳುವಳಿಕೆ ತನ್ನ ತಲೆಮಾರಿಗೆ ಮುಗಿದು ಹೋಗಬಾರದೆಂದು ಸುಕ್ರಿಯವರು ಹಾಲಕ್ಕಿ ಮಹಿಳೆಯರನ್ನು ಒಂದುಗೂಡಿಸಿ ತನ್ನ ಸಮುದಾಯದ ಪ್ರಾಚೀನ ಕುಣಿತಗಳಾದ ತಾರ್ಲೆ, ಪಗಡೆ, ಬಿದರಂಡೆ ಮುಂತಾದ ನೃತ್ಯ ಪ್ರಕಾರಗಳನ್ನು ಕಲಿಸುವುದರ ಜೊತೆಗೆ ಅನೇಕ ಕಡೆ ತಾವೇ ತಮ್ಮ ತಂಡಗಳನ್ನು ಕರೆದುಕೊಂಡು ಹೋಗಿ ಹಾಲಕ್ಕಿಗಳ ಪರಂಪರೆಯನ್ನು ಜೀವಂತವಾಗಿಡಲು ಅವಿರತವಾಗಿ ಶ್ರಮಿಸಿದ್ದಾರೆ. ಸುಕ್ರಿಬೊಮ್ಮಗೌಡ ಅವರು ಸ್ವತಃ ಮಾದೇವರಾಯ, ಚಂದನರಾಯ, ರಾಮ ಲಕ್ಷ್ಮಣ, ಐರಾವತ, ಕುಂತಿ ಕಥೆ, ಸಿರಿಕವುಲಿ ಮುಂತಾದ ಕಥನ ಕಾವ್ಯಗಳನ್ನು ಮತ್ತು ಬಲೀಂದ್ರರಾಯ, ಗೋವಿಂದರಾಯ ಹಾಗು ಕರಿದೇವರ ಕುರಿತ ಮಹಾಕಥನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಇವರಿಗೆ ಕನ್ನಡ ವಿಶ್ವವಿದ್ಯಾಲಯವು 2008ರಲ್ಲಿ ನಡೆದ 16ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ಪ್ರದಾನ ಮಾಡಿದೆ. ಸುಕ್ರಿಯವರ ನಿಧನದಿಂದ ಜಾನಪದ ಲೋಕವು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದು ಸುಕ್ರಿಯವರ ವ್ಯಕ್ತಿತ್ವವನ್ನು ಬಣ್ಣಿಸಿದರು.
ಸಂತಾಪ ಸೂಚಕ ಸಭೆಯಲ್ಲಿ ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅವರು, ಉಪಕುಲಸಚಿವರಾದ ಡಾ.ಎ.ವೆಂಕಟೇಶ, ಸಹಾಯಕ ಕುಲಸಚಿವರಾದ ಗುರುಬಸಪ್ಪ, ಸಹಾಯಕ ನಿರ್ದೇಶಕರಾದ ಎಸ್.ಕೆ. ವಿಜಯೇಂದ್ರ, ಅಧ್ಯಾಪಕರಾದ ಡಾ.ಎಲ್.ಶ್ರೀನಿವಾಸ, ಡಾ.ಮೋಹನ ಪಂಚಾಳ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.