ಭ್ರಷ್ಟಾಚಾರ ದೊಡ್ಡ ಪಿಡುಗಾಗಿದೆ- ದುಷ್ಟರ ಸಂವಾಹರ ನನ್ನ ಸಂಕಲ್ಪ ನಾಗರಿಕ ಸೇವೆ ದೇವರ ಕೆಲಸ- ಎಲ್ಲರೂ ನ್ಯಾಯಯುತವಾಗಿ ಬದುಕಬೇಕು
Corruption is a big scourge- meeting evil people is my resolve Civil service is God's work- everyon
ಭ್ರಷ್ಟಾಚಾರ ದೊಡ್ಡ ಪಿಡುಗಾಗಿದೆ- ದುಷ್ಟರ ಸಂವಾಹರ ನನ್ನ ಸಂಕಲ್ಪ ನಾಗರಿಕ ಸೇವೆ ದೇವರ ಕೆಲಸ- ಎಲ್ಲರೂ ನ್ಯಾಯಯುತವಾಗಿ ಬದುಕಬೇಕು
ಹಾವೇರಿ 13: ಇಂದು ಭ್ರಷ್ಟಾಚಾರ ದೊಡ್ಡ ಪಿಡುಗಾಗಿದೆ. ಭ್ರಷ್ಟಾಚಾರ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಭ್ರಷ್ಟರನ್ನು ಬಿಡಲ್ಲ, ದುಷ್ಟರ ಸಂಹಾರ ನನ್ನ ಸಂಕಲ್ಪವಾಗಿದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಬಿ.ವೀರ್ಪ ಅವರು ಹೇಳಿದರು.
ನಗರದ ಜಿಲ್ಲಾ ಗುರು ಭವನದಲ್ಲಿ ಗುರುವಾರ ಹಾವೇರಿ ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಅಹವಾಲು,ಕುಂದುಕೊರತೆ, ದೂರುಗಳ ಸ್ವೀಕಾರ ಹಾಗೂ ವಿಚಾರಣೆ ಸಭೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಿಷ್ಠೆಯಿಂದ ಕೆಲಸಮಾಡಿದವರ ಕಾಲು ಮುಟ್ಟುತ್ತೇನೆ, ತಪ್ಪುಮಾಡಿದರೆ ಕುತ್ತಿಗೆ ಹಿಡಿಯುತ್ತೇನೆ ಎಂದರು.
ಪ್ರಜೆಗಳಗೋಸ್ಕರ ನಾವು-ನೀವು ಇರುವುದು, ನಿಮಗೆ ಅಧಿಕಾರ ಬಂದಿರುವುದು ಶೋಷಣೆಗಲ್ಲ, ನಾಗರಿಕರ ಸೇವೆ ಮಾಡಲು. ಜನರು ನೆಮ್ಮದಿಯಿಂದ ಇಲ್ಲ ಅಂದರೆ ಯಾವುದೇ ಅಧಿಕಾರಿ ಹಾಗು ಯಾವುದೇ ಸರ್ಕಾರ ಉಳಿಯುವುದಿಲ್ಲ. ಅದನ್ನು ಅರಿತುಕೊಳ್ಳಬೇಕು ಎಂದರು.
ಶೇ.90ರಷ್ಟು ವಿದ್ಯಾವಂತರಿಂದ ತೊಂದರೆ: ಸ್ವಾತಂತ್ರಪೂರ್ವದಲ್ಲಿ ಭಾರತದಲ್ಲಿ ಶೇ.18 ಸಾಕ್ಷರರಿದ್ದರು. ಇಂದು ಶೇ.80ಕ್ಕೆ ವಿದ್ಯಾವಂತರಿದ್ದಾರೆ. ಆದರೆ ಶೇ. 90 ರಷ್ಟು ವಿದ್ಯಾವಂತರಿಂದ ತೊಂದರೆಯಾಗುತ್ತಿದೆ. ಡಿ.ಜಿ.ಗುಂಡಪ್ಪನವರು ಹೇಳಿದಂತೆ ದೇಶದ ಅಧೋಗತಿಗೆ ವಿದ್ಯಾವಂತರು ಕಾರಣವಾಗುತ್ತಿದ್ದಾರೆ. ತನ್ನ ಸಾಮ್ರಾಜ್ಯ ಬೆಳೆಸಿಕೊಳ್ಳಲು ಮುಂದಾಗುತ್ತಿರುವುದು ವಿಷಾಧಕರ ಸಂಗತಿ ಎಂದರು.
ಲೋಕಾಯುಕ್ತ ದಾಳಿಯಲ್ಲಿ ನೋಡಿದ್ದೀರಿ ಎಂತೆಂತ ಕುಳಗಳನ್ನು ಹಿಡಿಯಲಾಗಿದೆ. ನೀವು ಆಸ್ತಿ ಮಾಡುವುದು ನಿಮ್ಮ ಪೀಳಿಗೆಯನ್ನು ಹಾಳು ಮಾಡಲು, ಅನ್ಯಾಯದ ಹಣದ ಊಟದಲ್ಲಿ ಋನಾತ್ಮಕತೆ ಇರುತ್ತದೆ. ಆದರೆ ಕಷ್ಟಪಟ್ಟು ದುಡಿದ ಹಣದಲ್ಲಿ ಧನಾತ್ಮಕತೆ ಇರುತ್ತದೆ. ನ್ಯಾಯಯುತವಾಗಿ ಜೀವನ ಮಾಡಬೇಕು ಎಂದರು.
ರಕ್ತದರ್ಣ ಮರೆಯಬಾರದು: ಸ್ವಾತಂತ್ರ್ಯ ಪೂರ್ವದಲ್ಲಿ 78 ವರ್ಷಗಳ ಹಿಂದೆ ನಮ್ಮ ಪೂರ್ವಜರ ತ್ಯಾಗ, ಬಲಿದಾನ, ರಕ್ತಹರಿಸಿದ ಫಲವಾಗಿ ನಾವು ಇಲ್ಲಿ ಕುಳಿತ್ತಿದ್ದೇವೆ. ನಾವು ರಕ್ತದರ್ಣ ಮರೆಯಬಾರದು, ಭಾರತ ಸೇನೆಯಲ್ಲಿ ಭೂ ಸೇನೆ, ವಾಯು ಸೇವೆ, ನೌಕಾ ಸೇನೆಯಲ್ಲಿ ಸಹೋದರ ಸಹೋದರಿಯರು ದಿನದ 24 ಗಂಟೆಗಳಕಾಲ ಕೈಯಲ್ಲಿ ಬಂದುಕು ಹಿಡಿದು ನಮ್ಮ ಗಡಿಯಲ್ಲಿ ಸಿಂಹದಂತೆ ಘರ್ಜಿಸುತ್ತಿದ್ದಾರೆ. ಆದರೆ ದೇಶದ ಒಳಗೆ ರಕ್ಷಕರು ಭಕ್ಷರಾಗುತ್ತಿದ್ದಾರೆ. ಸಂವಿಧಾನದ ಆಶಯದಂತೆ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಮರೆಯಬಾರದು, ದೇಶಭಕ್ತಿ, ರಾಷ್ಟ್ರೇ್ರಮ ಇರಬೇಕು. ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ ಮಹನೀಯರನ್ನು ಪ್ರತಿದಿನ ಸ್ಮರಿಸಬೇಕು ಎಂದರು.
ಲೇಖನಿ ಮೊಂಡಾಗಿದೆ: ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಸರಿಯಾಗಿ ಕಾರ್ಯನಿರ್ವಹಿಸಯುತ್ತಿಲ್ಲ. ಪತ್ರಿಕಾರಂಗ ಬಲಿಷ್ಠವಾಗಿತ್ತು, ಕತ್ತಿಗಿಂತ ಲೇಖನಿ ಹರಿತ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಲೇಖನಿ ಮೊಂಡಾಗಿದೆ. ಪತ್ರಕರ್ತರು ನಿರ್ಧಾಕ್ಷಿಣ್ಯವಾಗಿ ಬರೆಯಬೇಕು, ಎಲ್ಲರನ್ನೂ ಹೆದರಿಸಬೇಕು. ಆದರೆ ಇಂದು ಪತ್ರಿಕಾ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದೆ, ಎಲ್ಲ ರಂಗಗಳಲ್ಲಿ ಭ್ರಷ್ಟಾಚಾರ ತುಂಬಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಕೆಲಸದಲ್ಲಿ ರಾಮರಾಜ್ಯ: ಗಾಂಧೀಜಿ ಅವರು ರಾಮರಾಜ್ಯದ ಕನಸು ಕಂಡಿದ್ದರು. ರಾಮರಾಜ್ಯ ದೇವಸ್ಥಾನಕ್ಕೆ ಹೋಗುವುದಲ್ಲ, ನಮ್ಮ ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುವುದು ರಾಮರಾಜ್ಯವಾಗಿದೆ. ನಾವು ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ನಿಸ್ವಾರ್ಥದಿಂದ ಬದುಕಬೇಕು. ಶಿಸ್ತು ರೂಢಿಸಿಕೊಳ್ಳಬೇಕು, ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಭ್ರಷ್ಟಾಚಾರ ತೊಡೆದುಹಾಕಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಬಲಿಷ್ಠ ಸಂಸ್ಥೆ: ಪ್ರಪಂಚದಲ್ಲೇ ಲೋಕಾಯುಕ್ತ ಸಂಸ್ಥೆ ಬಲಿಷ್ಠವಾಗಿದೆ. ಲೋಕಾಯುಕ್ತ ಏನು ಮಾಡುತ್ತದೆ ಎಂದು ಕೇಳಿದವರು ಮನೆಗೆ ಹೋಗಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಿಗೆ ನಾಗರಿಕರ ಸಹಕಾರ ಅಗತ್ಯವಾಗಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹಾಳು ಮಾಡಬೇಡಿ: ಕೆಲವು ಸಂಘ-ಸಂಸ್ಥೆಗಳು ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ವಿವಿಧ ಮಹನೀಯರ ಹೆಸರು ಹಾಗೂ ಫೋಟೋ ಹಾಕಿಕೊಂಡು ವ್ಯವಹಾರ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ, ಅವರ ಮೇಲೆ ಅಷ್ಟು ಭಕ್ತಿ ಇದ್ದರೆ ದೇವರ ಫೋಟೋ ಪಕ್ಕ ಇಟ್ಟು ಪೂಜೆ ಮಾಡಿ, ಆದರೆ ಹೆಸರಿಗೆ ಮಸಿಬಳೆಯುವ ಕೆಲಸಮಾಡಬೇಕು ಎಂದು ಹೇಳಿದರು.
ಭಾರತೀಯ ಸಂಪ್ರದಾಯಕ್ಕೆ ವಿದೇಶಿಗರು ಮಾರು ಹೋಗಿದ್ದಾರೆ. ಸ್ವಾಮಿ ವಿವೇಕಾನಂದರು ಭಾತರ ಸಂಸ್ಕೃತಿ ಪರಂಪರೆಯನ್ನು ವಿದೇಶಗರಿಗೆ ತೋರಿಸಿಕೊಟ್ಟಿದ್ದಾರೆ. ಇಂತಹ ಹಿರಿದಾದ ಶ್ರೀಮಂತ ಸಂಸ್ಕೃತಿ, ಪರಂಪರೆ ನಮ್ಮದಾಗಿದೆ, ಈ ಸಂಸ್ಕೃತಿ ಹಾಗೂ ಪರಂಪರೆ ಚುತಿಬಾರದಂತೆ ನಡೆದುಕೊಳ್ಳಬೇಕು ಎಂದರು.
ಸುಳ್ಳು ದೂರು ನೀಡಿದರೆ ಶಿಕ್ಷೆ: ಇಲ್ಲಿ ನೀಡುವ ದೂರುಗಳು ನಿಖರವಾಗಿರಬೇಕು. ಒಂದು ವೇಳೆ ಸುಳ್ಳು ಎಂದು ಗೊತ್ತಾದರೆ ಮೂರು ತಿಂಗಳ ಜೈಲು ಶಿಕ್ಷೆ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಭ್ರಷ್ಟಾಚಾರ ಸರ್ಕಾರಿ ಹಾಗೂ ಖಾಸಗಿ ವಲಯ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರದಲ್ಲಿ ವ್ಯಾಪಿಸಿದೆ. ಲಂಚ, ವಂಚನೆ, ದುರುಪಯೋಗ, ದುರ್ನಡತೆ, ಸೃಜನಪಕ್ಷಪಾತ ಹೀಗೆ ವ್ಯಾಖ್ಯಾನಿಸಲಾಗುತ್ತದೆ. ಶೇ.51 ರಷ್ಟು ಸರ್ಕಾರಿ ನೌಕರರು ಲಂಚ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಶೇ.77 ರಷ್ಟು ಜನರು ತಮ್ಮ ಕೆಲಸಕ್ಕೆ ತೊಂದರೆಯಾಗಬಾರದು ಎಂದು ಹಣ ನೀಡುತ್ತಾರೆ. ಭ್ರಷ್ಟಾಚಾರ ತಡೆಗೆ ಕರ್ನಾಟಕ ಲೋಕಾಯುಕ್ತ ಹುಟ್ಟುಹಾಕಲಾಗಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
2001 ರಿಂದ 2006ರವರೆಗೆ ಹಾಗೂ ನಿವೃತ್ತ ನ್ಯಾಯಮೂರ್ತಿಗಳಾದ ಎನ್.ವೆಂಕಟಾಚಲ ಅವರ ಹಾಗೂ 2006 ರಿಂದ 2011ರವರೆಗೆ ಡಾ.ಸಂತೋಷ ಹೆಗಡೆ ಅವರ ಲೋಕಾಯುಕ್ತ ಕಾರ್ಯವೈಖರಿ ಎಲ್ಲರ ಮೆಚ್ಚುಗೆಗೆ ಮಾತ್ರವಾಗಿತ್ತು. ಈಗ ಮತ್ತೆ ಲೋಕಾಯುಕ್ತ ಗತವೈಭವ ಮರುಕಳಿಸಿದಂತಾಗಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಜಿ.ಎಲ್.ಲಕ್ಷ್ಮೀನಾರಾಯಣ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ, ಪಿ.ಶ್ರೀನಿವಾಸ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್.ಮುತಾಲಿಕದೇಸಾಯಿ ಹಾಗೂ ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕರಾದ ಅರವಿಂದ ಎನ್.ವಿ., ಕರ್ನಾಟಕ ಲೋಕಾಯುಕ್ತ ದಾವಣಗೆರೆ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಲೋಕಾಯುಕ್ತ ಡಿಎಸ್ಪಿ ಬಿ.ಪಿ.ಚಂದ್ರಶೇಖರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 