ಆದ್ಯ ಪತ್ರಕರ್ತ ದೇವರ್ಷಿ ನಾರದ ಜಯಂತಿ
ಯರಗಟ್ಟಿ 08: ಸಮೀಪದ ಮುನವಳ್ಳಿ ಪಟ್ಟಣದ ಸೋಮಶೇಖರ ಮಠದಲ್ಲಿ ಆವರಣದಲ್ಲಿ ಜನ ಕಲ್ಯಾಣ ಟ್ರಸ್ಟ್ ಬೆಳಗಾವಿ ಇವರ ಆಶ್ರಯದಲ್ಲಿ ಆದ್ಯ ಪತ್ರಕರ್ತ ದೇವರ್ಷಿ ನಾರದ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮ ವಿಶೇಷ ಉಪನ್ಯಾಸಕರಾದ ಡಾ. ಅರುಣ ಹೊಸಮಠ ಅವರು ಮಾತನಾಡಿ ವಿಷ್ಣುವಿನ ಪರಮ ಭಕ್ತನಾದ ದೇವರ್ಷಿ ನಾರದರಿಲ್ಲದೆ ಹಿಂದೂ ಪುರಾಣಗಳು ಸಂಪೂರ್ಣಗೊಳ್ಳುವುದಿಲ್ಲ. ಸಂಚಾರಿ ಸಂಗೀತಗಾರನಾಗಿ, ಕಥೆ ಹೇಳುವವನಾಗಿ, ಜ್ಞಾನೋದಯ ನೀಡುವವನಾಗಿ ನಾರದರು ನಮಗೆ ಪುರಾಣಗಳಲ್ಲಿ ಕಾಣಿಸುತ್ತಾರೆ. ಅವರನ್ನು ವಿಶ್ವದ ಮೊದಲ ಪತ್ರಕರ್ತನೆಂದು ಪರಿಗಣಿಸಬಹುದು.ದೇವರಿಗೆ ವರದಿ ಒಪ್ಪಿಸುವ ಕರ್ತವ್ಯ ಅವರದ್ದಾಗಿತ್ತು, ದೇವರು ಮತ್ತು ರಾಕ್ಷಸರೊಂದಿಗೆ ಉತ್ತಮ ಸಂವಹನ ಮತ್ತು ಸಂಪರ್ಕವನ್ನು ಅವರು ಇಟ್ಟುಕೊಂಡಿದ್ದರು. ಪ್ರತಿ ಆಗು ಹೋಗುಗಳ ಬಗೆಗಿನ ಸ್ಪಷ್ಟವಾದ ಜ್ಞಾನ, ಮಾಹಿತಿ ಅವರಿಗಿತ್ತು. ನಾರದರು ಹಾಸ್ಯ ಪ್ರಜ್ಞೆವುಳ್ಳವರು ಮತ್ತು ಪಂಡಿತರು ಎಂಬುದು ಕಥೆಗಳಿಂದ ತಿಳಿದು ಬರುತ್ತದೆ. ವಿಷ್ಣುವನ್ನು ತನ್ನ ಭಕ್ತಿ ಗೀತೆಗಳ ಮೂಲಕ ವೈಭವೀಕರಿಸುವ ಪವಿತ್ರಾತ್ಮರು ಎಂದು ನಾರದರನ್ನು ಪರಿಗಣಿಸಲಾಗುತ್ತದೆ.
ಸದಾ ಹರಿ ಮತ್ತು ನಾರಾಯಣ ಭಜನೆಯನ್ನೇ ಉಸಿರಾಡುತ್ತಿದ್ದ ಅವರು, ಭಕ್ತಿ ಯೋಗವನ್ನು ಪ್ರತಿಬಿಂಬಿಸುತ್ತಾರೆ. ನಾರದ ಭಕ್ತಿ ಯೋಗವು ಅವರನ್ನು ಒಳಗೊಂಡದ್ದಾಗಿದೆ. ಅವರ ಬಗೆಗಿನ ಇತರ ಕೃತಿಗಳೆಂದರೆ-ನಾರದಾ ಪುರಾಣ, ನಾರದಾಸ್ಮೃತಿ. ಇದು ನ್ಯಾಯವನ್ನು ಪ್ರತಿಪಾದಿಸುತ್ತವೆ. ನಾರದರ ಆಧ್ಯಾತ್ಮಿಕ ಜ್ಞಾನೋದಯದ ಕಥೆಯನ್ನು ಭಾಗವತ ಪುರಾಣ ಸಾರಿ ಹೇಳುತ್ತದೆ. ನಾರದರು ದೇವತೆಗಳಿಗೆ ಮಾಹಿತಿ ಒದಗಿಸುವ ಪ್ರಾಥಮಿಕ ಮೂಲವಾಗಿದ್ದರು ಮತ್ತು ಭೂಮಿ ಮೇಲಿನ ಮೊದಲ ಪತ್ರಕರ್ತರಾಗಿದ್ದರು ಎಂಬುದು ಇಲ್ಲಿ ತಿಳಿದು ಬರುತ್ತದೆ ಎಂದು ಹೇಳಿದರು. ನಂತರ ಸೋಮಶೇಖರ ಮಠದ ಪೂಜ್ಯ ಮುರುಘೇಂದ್ರ ಮಹಾಸ್ವಾಮಿಜಿ ಮಾತನಾಡಿದ ಅವರು ನಾರದ ಮುನಿಗಳ ಪ್ರಸ್ತುತತೆಯು ಸುರಾಜ್ಯ, ಪತ್ರಿಕೋದ್ಯಮ, ಸಂವಹನ, ಸಂಪರ್ಕ ಇವುಗಳ ಸಂಬಂಧಿತ ಚರ್ಚೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ವಸಾಹತು ಮನಃಸ್ಥಿತಿಯಿಂದ ಹೊರಬರಲು, ಅವ್ಯವಸ್ಥೆಯ ರಾಜ್ಯ ವ್ಯವಸ್ಥೆಯನ್ನು ಸರಿಪಡಿಸಲು, ಪತ್ರಿಕಾ ಧರ್ಮವನ್ನು ಪುನಃ ಸ್ಥಾಪಿಸಲು ನಾರದ ಮುನಿಗಳು ಇಂದು ಎಂದಿಗಿಂತಲೂ ಪ್ರಸ್ತುತವಾಗಿದ್ದಾರೆ. ಸಮಾಜದಲ್ಲಿ ಪತ್ರಕರ್ತರ ಸೇವೆ ಮಹತ್ವದ್ದಾಗಿದೆ ಸಾಮಾಜದ ಅಂಕುಡೊಂಕು ತಿದ್ದುವ ಕೆಲಸ ಪ್ರತಿಯೊಬ್ಬ ಪತ್ರಕರ್ತನ ಕರ್ತವ್ಯ ಎಂದು ಹೇಳಿದರು.ಈ ವೇಳೆ ಚನ್ನಗೌಡ ದೊಡಗೌಡರ, ನರಸಿಂಹ ಜಿ ಕುಲಕರ್ಣಿ, ಸೋಮು ಗರಗ, ಶ್ರೀನಿವಾಸ ಕಮ್ಮಾರ್, ರವಿ ಕಾಸರ, ಪಂಚು ತಾಂದಳೆ,ಗಂಗಪ್ಪ ಅಲಮನ್ನವರ,ಆಕಾಶ ನಡನಳ್ಳಿ,ಜಗದಿಶ ನಂದಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.