ಸದಪಯೋಗಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರ ಮನವಿ
Appeal from Principal District and Sessions Judge B.S. Bharathi to the Board of Trustees
ಧಾರವಾಡ 21: ರಾಷ್ಟ್ರಾದ್ಯಂತ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಲಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಲಾಗುತ್ತಿದೆ ಅದರಂತೆ ಡಿಸೆಂಬರ್ 13, 2025 ರಂದು ಧಾರವಾಡ ಜಿಲ್ಲೆಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಲಾತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಹೇಳಿದರು. ಅವರು ಇಂದು (ನ.21) ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಧಾರವಾಡ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸುವ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಮಾತನಾಡಿದರು.
ರಾಷ್ಟ್ರೀಯ ಲೋಕ ಅದಾಲತ್ದಲ್ಲಿ ಭಾಗವಹಿಸುವದರಿಂದ ಕಕ್ಷೀದಾರರಿಗೆ ಮತ್ತು ನ್ಯಾಯವಾದಿಗಳಿಗೆ, ನ್ಯಾಯಾಲಯಕ್ಕೆ ತುಂಬಾ ಅನಕೂಲವಾಗುತ್ತದೆ. ಕಾರ್ಯದ ಒತ್ತಡ ಕಡಿಮೆಯಾಗಿ, ಸಮಯ ಮತ್ತು ಆರ್ಥಿಕ ಉಳಿತಾಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಹಳೆಯ ಪ್ರಕರಣಗಳು ರಾಜಿ ಸಂಧಾನದ ಮೂಲಕ ರಾಷ್ಟ್ರೀಯ ಲೋಕ ಅದಾಲತ್ದಲ್ಲಿ ಪರಿಹಾರವಾಗುತ್ತಿರುವುದು ಅದಲಾತ್ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸುತ್ತಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಲೋಕ ಅದಾಲತ್ದಲ್ಲಿ ನ್ಯಾಯವಾದಿಗಳು ಸಕ್ರೀಯವಾಗಿ ಭಾಗವಹಿಸುತ್ತಿರುವದರಿಂದ ಸಾವಿರಾರು ಪ್ರಕರಣಗಳು ಸುಖಾಂತ್ಯವಾಗುತ್ತಿವೆ. ಇದು ಸಹಜ ನ್ಯಾಯ ಮತ್ತು ಸುಲಭ ನ್ಯಾಯದ ಆಶಯವನ್ನು ಈಡೆರಿಸುತ್ತಿದೆ. ಇದು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಮತ್ತು ಗೌರವವನ್ನು ಹೆಚ್ಚಿಸಿದೆ. ಇಂತಹ ಉತ್ತಮ ಬೆಳವಣಿಗೆಗಳು ನ್ಯಾಯಾಂಗದ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ಅವರು ಹೇಳಿದರು.
ಕಳೆದ ಸಪ್ಟೆಂಬರ್ 13 ರಂದು ಜಿಲ್ಲೆಯ ಎಲ್ಲ ನ್ಯಾಯಾಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ದಲ್ಲಿ 1,01,463 ವಿವಿಧ ಪ್ರಕಾರದ ಪ್ರಕರಣಗಳು ರಾಜಿ ಇತ್ಯರ್ಥವಾಗಿದೆ. ಬರುವ ಡಿಸೆಂಬರ್ 13 ರಂದು ಆಯೋಜಿಸಲಿರುವ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ರಾಜಿ ಸಂಧಾನಕ್ಕಾಗಿ ಲಘು ವ್ಯಾಜ್ಯ ಪ್ರಕರಣಗಳು ಸೇರಿದಂತೆ ಅರ್ಹ ಒಟ್ಟು 10,746 ಪ್ರಕರಣಗಳನ್ನು ದಿನಾಂಕ:20-11-2025 ವರೆಗೆ ಗುರುತಿಸಲಾಗಿದ್ದು, ರಾಜೀ ಸಂಧಾನಕ್ಕಾಗಿ ಅರ್ಹ ಪ್ರಕರಣಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟಾರೆ ವಿವಿಧ ರೀತಿಯ 54,739 ಪ್ರಕರಣಗಳು ವಿಚಾರಣೆಗೆ ನ್ಯಾಯಾಲಯಗಳ ಮುಂದೆ ಬಾಕಿ ಇವೆ ಎಂದು ಅವರು ತಿಳಿಸಿದರು. ರಾಜಿ ಮಾಡಲಾಗುವ ಪ್ರಕರಣಗಳಲ್ಲಿ ಚೆಕ್ ಅಮಾನ್ಯದ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಕುರಿತ ಪ್ರಕರಣಗಳು, ಸಾಲ ವಸೂಲಾತಿ ದಾವೆಗಳು ಮತ್ತು ವ್ಯಾಜ್ಯ ಪೂರ್ವ ದಾವೆಗಳು, ಕೌಟುಂಬಿಕ (ವಿಚ್ಛೇಧನ ಹೊರತುಪಡಿಸಿ) ಹಾಗೂ ಜೀವನಾಂಶ ಪ್ರಕರಣಗಳು, ರಾಜಿಯಾಗುವಂತಹ ಕ್ರೀಮಿನಲ್ ಪ್ರಕರಣಗಳು, ರಾಜಿಯಾಗುವಂತಹ ಸಿವಿಲ್ ಮತ್ತು ಎಲ್ಲಾ ರೀತಿಯ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ಇತ್ಯರ್ಥ ಮಾಡಲಾಗುತ್ತದೆ ಎಂದರು.
ಶೇ. 50 ರಷ್ಟು ದಂಡ ರಿಯಾಯಿತಿ: ರಾಜ್ಯ ಸರ್ಕಾರವು ವಿವಿಧ ರೀತಿಯ ಸಂಚಾರ ವಾಹನಗಳ ನಿಯಮ ಉಲ್ಲಂಘನೆ ಕುರಿತ ಪ್ರಕರಣಗಳಲ್ಲಿ ವಿಧಿಸಿದ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ, ಅಧಿಸೂಚನೆ ಹೊರಡಿಸಿದೆ. ಇಂತಹ ಪ್ರಕರಣಗಳನ್ನು ಇತ್ಯರ್ಥಕ್ಕೆ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವಿಶೇಷವಾಗಿ ಪರಿಗಣಿಸಿ, ಪರಿಹರಿಸಲಾಗುತ್ತದೆ. ಸಾರ್ವಜನಿಕರು, ವಿಶೇಷವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವವರಿಗೆ ಪೊಲೀಸ್ ಇಲಾಖೆಯ ಸಂಚಾರಿ ಈ ಚಲನಗಳಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ. ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ನಲ್ಲಿ ದಿನಾಂಕ: 11/02/2023ರ ಒಳಗಾಗಿ ದಾಖಲಾಗಿರುವ ಪ್ರಕರಣಗಳಲ್ಲಿ ಹಾಗೂ ಸಾರಿಗೆ ಇಲಾಖೆಯಲ್ಲಿ 1991 ರಿಂದ 2020 ರವರೆಗೆ ದಾಖಲಾದ ಪ್ರಕರಣಗಳಲ್ಲಿ ಶೇ.50 ರಷ್ಟು ವಿನಾಯಿತಿಯನ್ನು ನೀಡಿದೆ. ಸಂಬಂಧಪಟ್ಟ ವಾಹನದ ಮಾಲೀಕರು ನವೆಂಬರ್ 21 ರಿಂದ 2025 ರಿಂದ ಡಿಸೆಂಬರ್ 12, 2025 ರವರೆಗೆ ದಂಡವನ್ನು ಭರಣ ಮಾಡಿ ಸದರಿ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಹೇಳಿದರು.
ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ ಅವರು ಮಾತನಾಡಿ, ಲೋಕ ಅದಾಲತ್ ಕಾರ್ಯಕ್ರಮವು ಕಕ್ಷಿದಾರರಿಗೆ ಹಾಗೂ ವಕೀಲರುಗಳಿಗೆ ಇದು ಅತ್ಯಂತ ಅನುಕೂಲಕರವಾಗುತ್ತದೆ. ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡಮನಿ ಅವರು ಸ್ವಾಗತಿಸಿ, ಮಾತನಾಡಿ, ರಾಷ್ಟ್ರೀಯ ಲೋಕ ಅದಾಲತ್ ಎನ್ನುವುದು ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಕಕ್ಷಿಗಾರರ ನೈಜತೆಯನ್ನು ಪರೀಕ್ಷಿಸಿ, ರಾಜಿ ಸಂಧಾನ ಮಾಡಲಾಗುವುದು ಹಾಗೂ ಇದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 