ಗುರುವಿನ ಕೃಪೆಯಿಂದ ಸಾಧನೆ ಸಾಧ್ಯ: ಯಲಬುರ್ಗಾ ಶ್ರೀ
ಕುಕನೂರ 12 : ಮನುಷ್ಯ ತನ್ನ ಜೀವನದಲ್ಲಿ ಗುರುವಿನ ಕೃಪೆಯಿಂದ ಮಾತ್ರ ಎತ್ತರಕ್ಕೆ ಬೆಳೆಯಲು ಸಾದ್ಯ ಎಂದು ಯಲಬುರ್ಗಾದ ಶ್ರ ಷ ಬ್ರ ಬಸವಲಿಂಗೇಶ್ವರ ಸ್ವಾಮೀಜೀ ಹೇಳಿದರು.
ಅವರು ಕುಕನೂರ ತಾಲ್ಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ ಅನ್ನದಾನೀಶ್ವರರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡುತ್ತಾ ಶ್ರೀಮಠದ 9 ನೇ ಜಗದ್ಗುರುಗಳು ಪಂಡಿತರಾಗಿ, ಭವರೋಗ ವೈದ್ಯರಾಗಿ ಜೀವನ ನಡೆಸಿದವರು ತಮ್ಮ ಬದುಕಿನುದ್ದಕ್ಕೂ ಹಲವಾರು ಪವಾಡಗಳನ್ನ ಮಾಡುತ್ತಾ ಲೀಲಾಮೂರ್ತಿಯಾಗಿ ಅಪಾರ ಭಕ್ತರನ್ನ ಸಂಪಾದಿಸಿದವರು ಎಂದರು.
ನಂತರ ಮಾತನಾಡಿದ ಶ್ರೀಮಠದ ಪೂಜ್ಯ ಮಹಾದೇವ ಸ್ವಾಮೀಜಿ ನಮ್ಮ ಮಠದ ಗುರುಗಳು ತಳಕಲ್ ಗ್ರಾಮದ ಜನರಿಗೆ 4 ಎಕರೆ ಭೂಮಿ ನೀಡಿದ ಭೂ ದಾನಿಗಳು, ಅವರ ಕಾಲದಲ್ಲಿ ಶ್ರೀಮಠ ಹಲವಾರು ಧರ್ಮಪರ ಕಾರ್ಯಗಳಿಗೆ ದಾನ ಧರ್ಮ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ, ಹಲವಾರು ಮಠ ಮಂದಿರಗಳ ಕಲ್ಯಾಣಕ್ಕೆ ಶ್ರೀಮಠದ ಗುರುಗಳು ಶ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುರುಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ರುದ್ರಾಬಿಷೇಕ, ಮಹಾದಾಸೋಹ ನಡೆಸಲಾಯಿತು. ಮಲ್ಲಪ್ಪ ಗೋರಿ, ಮುದಿಯಪ್ಪ ಯೋಗೆಮ್ಮನವರ, ರಾಮಣ್ಣ ನಿಟ್ಟಲಿ, ಸೋಮಣ್ಣ ಕರ್ಜಗಿ, ಬಸವರಾಜ ಬ್ಯಾಳಿ, ಸುರೇಶ, ಪಕ್ಕಪ್ಪ ಅಳವಂಡಿ, ಮಂಜುನಾಥ, ನವೀನಕುಮಾರ, ಹನುಮಂತ, ಕಲ್ಲಯ್ಯ ಸೇರಿದಂತೆ ಹಲವಾರು ಭಕ್ತರು ಇದ್ದರು.