ಅಧಿಕಾರಿಗಳು ಮತ್ತು ವಿರೋಧಿಗಳು ವ್ಯವಸ್ಥಿತ ಷಡ್ಯಂತ್ರ

ಅಧಿಕಾರಿಗಳು ಮತ್ತು ವಿರೋಧಿಗಳು ವ್ಯವಸ್ಥಿತ ಷಡ್ಯಂತ್ರ A systematic conspiracy between authorities and opponents


ಜಮಖಂಡಿ   21: ಅಬಕಾರಿ ಇಲಾಖೆ ಸಚಿವ, ಜಿಲ್ಲಾ ಉಸ್ತುವಾರಿ ಆರ್,ಬಿ, ತಿಮ್ಮಾಪೂರ ಅವರ ರಾಜಕೀಯ ವರ್ಚಸ್ಸು ಕುಗ್ಗಿಸಲು ಅಧಿಕಾರಿಗಳು ಮತ್ತು ವಿರೋಧಿಗಳು ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮುತ್ತಣ್ಣ ಮೇತ್ರಿ ಆರೋಪಿಸಿದ್ದಾರೆ  

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ತಿಮ್ಮಾಪೂರ ಅವರ ವಿರುದ್ಧ ನಡೆಯುತ್ತಿರುವ ರಾಜಕೀಯ ಪಿತೂರಿಗಳನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತಿದೆ ಎಂದರು. 

ಸಚಿವರಿಗೆ ವಹಿಸಿದ ಇಲಾಖೆಯಲ್ಲಿ ಅವರು ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ  ಸಾಕಷ್ಟು ಬದಲಾವಣೆ ಮಾಡಿದ್ದಾರೆ ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಅವರ ಜನಪ್ರಿಯತೆಯನ್ನು ಸಹಿಸದ ರಾಜಕೀಯ ವಿರೋಧಿಗಳು ಹಾಗೂ ಪಟ್ಟಭದ್ರ ಹಿತಾಶಕ್ತಿಗಳು ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿವೆ ಎಂದರು. 

ಆರ್, ಬಿ, ತಿಮ್ಮಾಪೂರ ಅವರು ಹುಟ್ಟು ಹೋರಾಟಗಾರರು, ದಲಿತ ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವರ್ಗಗಳಿಗಾಗಿ  ಹಗಲಿರುಳು ಸಮಿಸಿದ ವ್ಯಕ್ತಿ. ಯಾವುದೇ ಆಸೆ-ಆಮಿಷಗಳಿಗೆ ಬಲಿಯಾದವರಲ್ಲ. ಇಂತಹ ಪ್ರಾಮಾಣಿಕ ನಾಯಕನ ವಿರುದ್ಧ ಯಾವುದೇ ಕುತಂತ್ರಗಳು ಫಲಿಸುವುದಿಲ್ಲ ಎಂದರು. 

ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ನೇರವಾಗಿ ತಿಮ್ಮಾಪೂರ ಅವರ ವಿರುದ್ಧ ಆರೋಪ ಮಾಡಿದ್ದರು ಅದು ಸುಳ್ಳಾಯಿತು. ಒಬ್ಬ ದೇಶದ ಪ್ರಧಾನ ಮಂತ್ರಿ ಅವರೇ ರಾಜಕೀಯ ಷಡ್ಯಂತರಕ್ಕಾಗಿ   ಗಾಳಿಯಲ್ಲಿ ಗುಂಡು ಹೊಡೆಯುತಿದ್ದಾರೆ, ಕೇವಲ ದಲಿತ ನಾಯಕ ಅಬಕಾರಿ ಸಚಿವ ತಿಮ್ಮಪೂರ ಇವರೊಬ್ಬರನ್ನೇ ಗುರಿಯಾಗಿಸಿಕೊಂಡು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮುತ್ತಣ್ಣ ಮೇತ್ರಿ ಪ್ರಶ್ನಿಸಿದರು. 

ವಿನಾಕಾರಣ ಸುಳ್ಳು ಆರೋಪಗಳನ್ನು ಹರಡುತ್ತಿರುವವರ ವಿರುದ್ಧ ಮುಂದಿನ ದಿನಗಳಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ವರ್ಗಗಳಿಂದ ಉಗ್ರವಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಿಮ್ಮಾಪುರವರ ವಿರೋಧಿಗಳಿಗೆ ಎಚ್ಚರಿಕೆಯನ್ನು ನೀಡಿದರು.  ದಲಿತ ಮುಖಂಡರಾದ ಪರಶುರಾಮ ಮಾಂಗ, ಸಂಜು ಮುಂಡಗನೂರ, ರಮೇಶ ಪೂಜಾರಿ, ನಾಗಪ್ಪ ಹೆಗಡೆ, ರಾಜು ಮೇತ್ರಿ, ಚಂದ್ರು ಹರಿಜನ, ಲಕ್ಷ್ಮಣ ಹರಿಜನ, ಬಸವರಾಜ ಜಮಖಂಡಿ ಇದ್ದರು.