126 ದಿನಗಳ ಚಿತ್ರೀಕರಣ ಮುಗಿಸಿದ ‘ಮೆಜೆಸ್ಟಿಕ್ -2'

ಈಗಿನ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾ ಹೇಗಿದೆ, ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳು ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಯುವ ಪ್ರತಿಭೆ ರಾಮು 'ಮೆಜೆಸ್ಟಿಕ್‌-2' ಚಿತ್ರದ ಮೂಲಕ ಹೇಳ ಹೇಳಹೊರಟಿದ್ದಾರೆ. ಹೀಗೆ ಸಾಮಾನ್ಯ ಜನರಿಗೆ ಗೊತ್ತಿಲ್ಲದಂಥ ಅನೇಕ ಚಟುವಟಿಕೆಗಳನ್ನು 'ಮೆಜೆಸ್ಟಿಕ್‌-2' ಸಿನಿಮಾ ನಿರ್ದೇಶನ ಮಾಡಿ ಹೇಳುತ್ತಿದ್ದಾರೆ ರಾಮು. ಇದೀಗ ಈ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ. ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್‌.ಆನಂದಪ್ಪ ಅವರ ನಿರ್ಮಾಣದ ಈ ಚಿತ್ರಕ್ಕೆ ರಾಮು ಅವರೇ ಕಥೆ, ಚಿತ್ರಕಥೆ ಬರೆದು ಆಕ್ಷನ್‌-ಕಟ್ ಹೇಳಿದ್ದಾರೆ. ಯುವನಟ ಭರತ್, ಸಂಹಿತಾ ವಿನ್ಯಾ ನಾಯಕ, ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಮೋಷನ್ ಪೋಸ್ಟರ್ ಬಿಡುಗಡೆಯ ಜೊತೆ ಶೂಟಿಂಗ್ ಅನುಭವಗಳ ಹೇಳಿಕೊಳ್ಳಲು ಇಡೀ ಚಿತ್ರತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಮೊದಲಿಗೆ ಮಾತನಾಡಿದ ನಿರ್ಮಾಪಕ ಹೆಚ್‌. ಆನಂದಪ್ಪ, 'ಮಾರ್ಚ್‌ 31ಕ್ಕೆ ನಮ್ಮ ಚಿತ್ರದ ಶೂಟಿಂಗ್ ಆರಂಭಿಸಿ, ಬೆಂಗಳೂರು ಸುತ್ತಮುತ್ತ ನಿರಂತರವಾಗಿ, ಅಲ್ಲದೆ ಮರುಘಾ ಮಠದಲ್ಲಿ ಡ್ಯುಯೆಟ್ ಸಾಂಗ್ ಚಿತ್ರೀಕರಣ ಮಾಡಿದ್ದು, ಅಂದುಕೊಂಡಂತೆಯೇ ಮುಗಿದಿದೆ. ಇಡೀ ಸಿನಿಮಾ ಶೂಟಿಂಗ್ನಲ್ಲಿ ನಾನೇ ಜೊತೆ ಇದ್ದು ನೋಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ' ಎಂದರು. 

ನಿರ್ದೇಶಕ ರಾಮು ಮಾತನಾಡಿ 'ಸತತವಾಗಿ 126 ದಿನ ಶೂಟಿಂಗ್ ಮಾಡಿದ್ದೇವೆ. ನನ್ನ ಸಬ್ಜೆಕ್ಟ್‌ ಕೇಳಿ ಅವಕಾಶ ಕೊಟ್ಟಿದ್ದು ಆನಂದಪ್ಪ ಅವರು. ನಾನು ಏನು ಕೇಳಿದೆನೋ ಅದೆಲ್ಲವನ್ನೂ ಒದಗಿಸಿಕೊಟ್ಟು ಸಹಕರಿಸಿದ್ದಾರೆ. ಮೊದಲ ಚಿತ್ರಕ್ಕೇ ಇಂಥ ನಿರ್ಮಾಪಕರು ಸಿಕ್ಕಿದ್ದು ನನ್ನ ಅದೃಷ್ಟ. ಈಗ ಡಬ್ಬಿಂಗ್ ಆರಂಭಿಸಬೇಕಿದೆ. ಚಿತ್ರವನ್ನು ಡಿಸೆಂಬರ್ 26ಕ್ಕೆ ರೀಲೀಸ್ ಮಾಡಬೇಕೆಂಬ ಪ್ಲಾನಿದೆ. ನಾನು, ಭರತ್ ಇಬ್ಬರೂ ದರ್ಶನ್ ಅಭಿಮಾನಿಗಳು. ರೀಲೀಸ್ ಟೈಮಲ್ಲಿ ಮೈಸೂರಿನಿಂದ ಬೆಂಗಳೂರುವರೆಗೆ 101 ಸ್ಟಾರ್ಸ್‌ ಮೆರವಣಿಗೆ ಮಾಡಿಸಬೇಕು, ದರ್ಶನ್ ಅವರ 101 ಅಡಿ ಕಟೌಟ್ ಹಾಕಬೇಕು ಎಂಬ ಪ್ಲಾನಿದೆ' ಎಂದರು. ವೇದಿಕೆಯಲ್ಲಿ ನಾಯಕ ಭರತ್ ಮಾತನಾಡಿ 'ಇದು 2024ರ ಮೆಜೆಸ್ಟಿಕ್ ಕಥೆ. ಬೆಂಗಳೂರಲ್ಲಿ ಏನೇನೆಲ್ಲ ನಡೀತಿದೆ ಅಂತ ತೋರಿಸಿದ್ದೇವೆ. ನಾವೆಲ್ಲ ತುಂಬಾ ಎಫರ್ಟ್‌ ಹಾಕಿ ಸಿನಿಮಾ ಮಾಡಿದ್ದೇವೆ. 6 ಫೈಟ್ ಅದ್ಭುತವಾಗಿ ಮೂಡಿಬಂದಿವೆ. ಮೆಜೆಸ್ಟಿಕ್ ನಲ್ಲೇ ಹುಟ್ಟಿಬೆಳೆದ ಹುಡುಗನ ಕಥೆ. ನನ್ನ ಪಾತ್ರಕ್ಕೆ 2 ಶೇಡ್ಸ್‌ ಇದೆ. ನಿರ್ಮಾಪಕನ ಕಷ್ಟ ಏನೆಂದು ನನಗೆ ಗೊತ್ತು. ನಿರ್ಮಾಪಕರು ಯಾವುದಕ್ಕೂ ಕೊರತೆ ಮಾಡದೆ ಒದಗಿಸಿಕೊಟ್ಟಿದ್ದಾರೆ. ಮೆಜೆಸ್ಟಿಕ್ ಅಂಡರ್ ಪಾಸ್, ಬಸ್ ಸ್ಟಾಪ್ ನಲ್ಲೂ ಶೂಟ್ ಮಾಡಿದ್ದೇವೆ. ಈ ಸಿನಿಮಾ ಮುಗಿಯುವ ಮುನ್ನವೇ ನನಗೆ ಮತ್ತೊಂದು ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಹೆವಿ ಆಕ್ಷನ್, ಫನ್, ರೊಮ್ಯಾನ್ಸ್‌ ಸೆಂಟಿಮೆಂಟ್ ಎಲ್ಲವೂ ಚಿತ್ರದಲ್ಲಿದೆ' ಎಂದು ಹೇಳಿದರು. 

ನಂತರ ನಾಯಕಿ ಸಂಹಿತಾ ವಿನ್ಯಾ ಮಾತನಾಡಿ 'ತುಂಬಾ ದಿನಗಳ ಶ್ರಮ. ಸಿನಿಮಾಗೆ ಎಲ್ಲರೂ ಸಪೋರ್ಟ್‌ ಮಾಡಿದ್ದಾರೆ. ಮಿಡಲ್ ಕ್ಲಾಸ್ ಹುಡುಗಿ ಪಾತ್ರ ನನ್ನದು' ಎನ್ನುವರು. ಛಾಯಾಗ್ರಾಹಕ ವೀನಸ್ ಮೂರ್ತಿ, ಅಸೋಸಿಯೇಟ್ ಡೈರೆಕ್ಟರ್ ವಿಜಯಕುಮಾರ್ ಎಲ್ಲರೂ ಚಿತ್ರದ ಕುರಿತಂತೆ ಮಾತನಾಡಿದರು. ಈ ಚಿತ್ರಕ್ಕೆ ರಾಮೋಹಳ್ಳಿ, ಹೆಚ್‌.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್‌.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಹಿರಿಯನಟಿ ಶೃತಿ ಅವರು ತಾಯಿ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೆ ಮಾಲಾಶ್ರೀ ಅವರು ಕೂಡ ಹೀರೋ ಇಂಟ್ರಡಕ್ಷನ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದೆ.