“ಚಿಕ್ಕಮಗಳೂರಿನಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್‌ ಅಭಿವೃದ್ಧಿಗೆ ಕ್ರಮ”

“ಚಿಕ್ಕಮಗಳೂರಿನಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್‌ ಅಭಿವೃದ್ಧಿಗೆ ಕ್ರಮ”  “Steps taken for development of Spice Park in Chikkamagaluru on PPP model”

ಬೆಳಗಾವಿ, ಸುವರ್ಣ ವಿಧಾನಸೌಧ ಡಿ.12: ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್‌ ಅಭಿವೃದ್ಧಿಪಡಿಸಲು ಏಕಗವಾಕ್ಷಿ ಏಜೆನ್ಸಿ ವತಿಯಿಂದ ಅನುಮೋದನೆ ಪಡೆದು ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ವ್ಯವಹರಣಾ ಸಮಾಲೋಚಕರನ್ನಾಗಿ ನೇಮಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕ ಸಚಿವರ ಪರವಾಗಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದರು. 

ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಟಿ.ಡಿ ಇವರು ಸಾಂಬಾರು ಪದಾರ್ಥಗಳ ರಫ್ತು ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸೂಕ್ತವಾದ ಮೂಲ ಸೌಕರ್ಯಕ್ಕೆ ಸ್ಪೈಸ್ ಪಾರ್ಕ್‌ ಅಗತ್ಯವಾಗಿದ್ದು, ಆದಷ್ಟು ಬೇಗ ಸ್ಪೈಸ್ ಪಾರ್ಕ್‌ ಅಭಿವೃದ್ಧಿಪಡಿಸಬೇಕೆಂದು ವಿಧಾನಸಭೆಯಲ್ಲಿ ಮನವಿ ಮಾಡಿದರು. 

 ಸ್ಪೈಸ್ ಪಾರ್ಕ್‌ ಅಭಿವೃದ್ಧಿಗೆ ಗುರುತಿಸಲಾಗಿದ್ದ ಜಾಗದ ಭೌತಿಕ ಪರೀಶೀಲನೆಯನ್ನು ಸಾಂಬಾರು ಮಂಡಳಿ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಾಗೂ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಕೈಗೊಂಡಾಗ, ಸದರಿ ಜಾಗವು ಸ್ಪೈಸ್ ಪಾರ್ಕ್‌ ನಿರ್ಮಾಣ ಮಾಡಲು ಸೂಕ್ತವಾಗದೇ ಇರುವ ಹಿನ್ನೆಲೆಯಲ್ಲಿ ಸೂಕ್ತವಾದ ಪರ್ಯಾಯ ಜಾಗವನ್ನು ನೀಡಲು ಕೋರಲಾಗಿತ್ತು. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಬೆಟ್ಟದಮನೆ ಗ್ರಾಮದಲ್ಲಿ ಸ್ಪೈಸ್ ಪಾರ್ಕ್‌ ಅಭಿವೃದ್ಧಿ ಉದ್ದೇಶಕ್ಕಾಗಿ ತೋಟಗಾರಿಕೆ ಇಲಾಖೆಗೆ ಭೂಮಿ ವರ್ಗಾಯಿಸಿ, ದಿನಾಂಕ 30-5-2025ರಂದು ಆದೇಶ ಹೊರಡಿಸಲಾಗಿದೆ. ಜಮೀನಿನ ಹದ್ದುಬಸ್ತು ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರಸ್ತುತ ವ್ಯವಹರಣಾ ಸಮಾಲೋಚಕರನ್ನು ನೇಮಿಸಿ ವರದಿಯನ್ನು ಸಿದ್ದಪಡಿಸಲು ಸೂಚಿಸಲಾಗಿರುತ್ತದೆ. ವರದಿ ಬಂದ ಕೂಡಲೇ ಆದಷ್ಟು ಶೀಘ್ರವಾಗಿ ಸ್ಪೈಸ್ ಪಾರ್ಕ್‌ ಕಾರ್ಯಾರಂಭಗೊಳಿಸಲಾಗುವುದು ಎಂದು ವಿಧಾನಸಭೆಯಲ್ಲಿ ತಿಳಿಸಿದರು.