ನಾಗಪಟ್ಟಿಣಂ/ ಚೆನ್ನೈ 16, ಗಜ ಚಂಡಮಾರುತ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಪ್ರಾಂತ್ಯಗಳ ಮೇಲೆ ಅಪ್ಪಳಿಸಿದ್ದು ಭಾರೀ ಮಳೆ ರೌದ್ರಾವತಾರದಿಂದ 15ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಹಲವರು ಕಣ್ಮರೆಯಾಗಿದ್ದಾರೆ.
ಚಂಡಮಾರುತದ ಆರ್ಭಟಕ್ಕೆ ಎಂಟು ಜಿಲ್ಲೆಗಳ ಅನೇಕ ಮನೆಗಳಿಗೆ ಹಾನಿಯಾಗಿವೆ. ಹಲವು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಕೆಲವೆಡೆ ಮನೆಗಳು ಭಾಗಶಃ ಕುಸಿದಿವೆ. ಭೂ ಕುಸಿತದಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಗ್ಗು ಪ್ರದೇಶಗಳಿಂದ 82,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಇಂದು ಮುಂಜಾನೆ ನಾಗಪಟ್ಟಿಣಂ ಮತ್ತು ವೆಡರಣಿಯಂ ನಡುವೆ ಕರಾವಳಿ ಪ್ರದೇಶದ ಮೂಲಕ ಗಂಟೆಗೆ 120ಕಿಮೀ ವೇಗದಲ್ಲಿ ಅಪ್ಪಳಿಸಿದ ಗಜ ಚಂಡಮಾರುತ ತಮಿಳುನಾಡು ಕರಾವಳಿ ಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ.
ನಾಗಪಟ್ಟಿಣಂ, ಕಡಲೂರು, ಪುದುಕೊಟ್ಟೆ , ತಂಜಾವೂರು, ರಾಮನಾಥಪುರಂ ತಿರುವರೂರು, ಥೋಂಡಿ ಮತ್ತು ಪಂಬನ್ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಗಾಳಿ ಮತ್ತು ಧಾರಾಕಾರ ಮಳೆಯಾಗಿದೆ. ಈ ಪ್ರದೇಶಗಳ ಕೆಲವೆಡೆ ಸಾವು-ನೋವು ಹಾಗೂ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಪುದುಚೇರಿ ಮತ್ತು ಕರೈಕ್ಕಲ್ ಪ್ರದೇಶಗಳಲ್ಲೂ ವ್ಯಾಪಕ ಮಳೆ ಸುರಿದಿದೆ. ಈ ಪ್ರದೇಶಗಳಲ್ಲಿ 3 ಸೆಂಮೀ ನಿಂದ 8 ಸೆಂಮೀ ವರೆಗೆ ಭಾರೀ ವರ್ಷಧಾರೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತ ಆರ್ಭಟದಿಂದ ಕೆಲವೆಡೆ ಸಾವು ನೋವು ಸಂಭವಿಸಿದ್ದು, ಈವರೆಗೆ 15ಕ್ಕೂ ಹೆಚ್ಚು ಜನ ಬಲಿಯಾಗಿ, ಅನೇಕರು ಗಾಯಗೊಂಡಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಮುಂದುವರಿದಿದೆ. ಗಜ ಚಂಡಮಾರುತದ ಆರ್ಭಟದಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ತಂಜಾವೂರಿನಲ್ಲಿ ಮನೆಯೊಂದರ ಮೇಲೆ ಭಾರೀ ಗಾತ್ರದ ಮರ ಉರುಳಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಕಡಲೂರು ಮತ್ತು ನಾಗಪಟ್ಟಿಣಂ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಾವು-ನೋವು ಸಂಭವಿಸಿದೆ.ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಯಡಪ್ಪಾಡಿ ಪಳನಿಸ್ವಾಮಿ ತಲಾ 10 ಲಕ್ಷ ರೂ.ಗಳ ಪರಿಹಾರ ಪ್ರಕಟಿಸಿದ್ದಾರೆ.
ತಮಿಳುನಾಡಿನ ಎಂಟು ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ಅಪಾಯದಲ್ಲಿ ಸಿಲುಕಿದ್ದ 82,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳಾಂತರಗೊಂಡವರಿಗೆ ಈ ಜಿಲ್ಲೆಗಳ 471 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆರು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ಎದುರಿಸಲು ರಕ್ಷಣಾ ಪಡೆಗಳು ಕಾಯರ್ೊನ್ಮುಖವಾಗಿದ್ದು, ಯುದ್ಧೋಪಾದಿಯಲ್ಲಿ ಪರಿಹಾರ ಕಾಯರ್ಾಚರಣೆ ಮುಂದುವರಿದಿದೆ.