ಕಪ್ಪು ಮಣ್ಣಿನಲ್ಲಿ ಹಳದಿ ಕಲ್ಲಂಗಡಿ ಬೆಳೆದು ರೈತರ ಸಾಧನೆ; ರೈತರು ಸುರಕ್ಷಿತರಾಗಿದ್ದರೆ ಕೃಷಿ ಇನ್ನಷ್ಟು ಸದೃಡ: ಜಿಲ್ಲಾಧಿಕಾರಿ ದಿವ್ಯ ಪ್ರಭು.

Yellow watermelon crop field festival

ಹಳದಿ ಕಲ್ಲಂಗಡಿ ಬೆಳೆ ಕ್ಷೇತ್ರೋತ್ಸವ  

ಧಾರವಾಡ 17: ಕಲ್ಲಂಗಡಿ ಬೆಳೆಗೆ ಕೆಂಪು ಹಾಗೂ ಮಸಾರೆ ಮಣ್ಣಿನ ಭೂಮಿ ಸೂಕ್ತ. ಆದರೆ ಸುಶಿಕ್ಷಿತ ಸಾಹಸಿ ರೈತರಿಬ್ಬರೂ ಕಪ್ಪು ಜಮೀನಿನ ಭೂಮಿಯಲ್ಲಿ ಅಪರೂಪವಾದ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಸಾಧನೆ ಮಾಡಿದ್ದಾರೆ. ಸುಶಿಕ್ಷಿತ ರೈತರಿಂದ ಹೊಸ ಪ್ರಯೋಗಗಳು ಸಾಧ್ಯವಾಗಿ ಕೃಷಿ ಇನ್ನಷ್ಟು ಸದೃಡವಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.  

ಅವರು ಇಂದು ಬೆಳಿಗ್ಗೆ ಧಾರವಾಡ ತಾಲೂಕಿನ ಕುರಬಗಟ್ಟಿಯ ಪ್ರಗತಿಪರ ರೈತ ಗುಡ್ಡಪ್ಪ ಮೈಲಾರ ಅವರ ತೋಟದಲ್ಲಿ ತೋಟಗಾರಿಕೆ ಇಲಾಖೆಯ ಧಾರವಾಡ ಹಿರಿಯ ಸಹಾಯಕ ನಿರ್ದೇಶಕರ ಕಾರ್ಯಾಲಯದಿಂದ ಆಯೋಜಿಸಿದ್ದ ಹಳದಿ ಕಲ್ಲಂಗಡಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.  

ರೈತರು ಕೃಷಿ ಲಾಭದಾಯಕವಾಗಿಸಲು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು. ಸರಕಾರ ಕೃಷಿ ಲಾಭದಾಯಕ ಮಾಡಲು ಅನೇಕ ಸೌಲಭ್ಯ, ಸಹಾಯಧನ, ಸಬ್ಸಿಡಿ ನೀಡುತ್ತದೆ. ಇದನ್ನು ಉಪಯೋಗಿಸಿಕೊಳ್ಳಬೇಕು ಎಂದರು.  

ಪದವಿಧರ ಪ್ರಗತಿಪರ ರೈತರಾದ ಕುರಬಗಟ್ಟಿಯ ಗುಡ್ಡಪ್ಪ ಮೈಲಾರ ಹಾಗೂ ಬಾಡ ಗ್ರಾಮದ ಕಲ್ಲನಗೌಡ ಪಾಟೀಲ ಅವರು ಸಾಹಸಿ ರೈತರಾಗಿದ್ದು, ವಿನೂತನ ಬೆಳೆ ಬೆಳೆಯುವ ಮೂಲಕ ಇತರ ರೈತರಿಗೆ ಮಾದರಿ ಆಗಿದ್ದಾರೆ ಎಂದರು.  

ಸಾಮಾನ್ಯವಾಗಿ ಕೆಂಪು ಕಲ್ಲಂಗಡಿ ಬೆಳೆಯುತ್ತಾರೆ. ಇದು ಕೆ.ಜಿ ಗೆ 10 ರಿಂದ 12 ರೂ. ದರ ಸೀಗುತ್ತದೆ. ಒಂದು ಹಣ್ಣು ಸಾಮಾನ್ಯವಾಗಿ 2 ರಿಂದ 4 ಕೆ.ಜಿ ಇರುತ್ತದೆ. ಆದರೆ ಹಳದಿ ಕಲ್ಲಂಗಡಿ ಹಣ್ಣು ಪ್ರತಿ ಕೆ.ಜಿ ಗೆ 30 ರಿಂದ 32 ದರ ಇದೆ. ಹೆಚ್ಚು ರುಚಿ, ಸಿಹಿ ಇದೆ. ಮತ್ತು 3 ರಿಂದ 5 ಕೆ.ಜಿ ತೂಕ ಇದೆ. ಜೇನು ತುಪ್ಪದ ರುಚಿ, ವಾಸನೆ ಇರುವದರಿಂದ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಹಳದಿ ಕಲ್ಲಂಗಡಿ ಬೆಳೆಯಲು ಪ್ರತಿ ಎಕರೆಗೆ 80 ಸಾವಿರದಿಂದ 1 ಲಕ್ಷ ರೂ. ಖರ್ಚಾಗುತ್ತದೆ. ಕೇವಲ 65 ದಿನಗಳ ಬೆಳೆ ಇದು. ಒಂದು ಎಕರೆಗೆ 6 ಸಾವಿರ ಸಸಿ ಬೇಕಾಗುತ್ತವೆ. ಪ್ರತಿ ಸಸಿಗೆ ರೂ. 2 ದರವಿದೆ. ಸರಕಾರದಿಂದ ಕಲ್ಲಂಗಡಿ ಬೆಳೆಯಲು ಹನಿ ನೀರಾವರಿಗಾಗಿ ರೂ. 75 ಸಾವಿರ ಸಬ್ಸಿಡಿ ಹಾಗೂ ಹೊಸ ಹೈಬ್ರಿಡ್ ಬೀಜಗಳ ಬೆಳೆಗೆ ಸರಕಾರದಿಂದ ರೂ. 8 ಸಾವಿರ ಪ್ರೋತ್ಸಾಹಧನವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. 

65 ದಿನಗಳ ಈ ಹಳದಿ ಕಲ್ಲಂಗಡಿ ಬೆಳೆಯಿಂದ ಸುಮಾರು 10 ರಿಂದ 12 ಟನ್ ಕಲ್ಲಂಗಡಿ ಹಣ್ಣು ಬರುವ ಸಾಧ್ಯತೆ ಇದ್ದು, ಮಾರುಕಟ್ಟೆಗೆ ನೇರವಾಗಿ ಮಾರಾಟ ಮಾಡುವದರಿಂದ ಅಂದಾಜು 4 ರಿಂದ 4.5 ಲಕ್ಷ ಲಾಭ ಪಡೆಯಬಹುದಾಗಿದೆ ಎಂದರು.  

ಉತ್ತರ-ಕರ್ನಾಟಕದ ಜಿಲ್ಲೆಗಳಲ್ಲಿಯೇ ಧಾರವಾಡದ ಇಬ್ಬರು ರೈತರು ಮಾತ್ರ ಈ ವಿಶೇಷವಾದ ಹಳದಿ ಕಲ್ಲಂಗಡಿ ಬೆಳೆ ಬೆಳೆದಿದ್ದಾರೆ. ಅವರು ಇತರ ರೈತರಿಗೆ, ಗ್ರಾಹಕರಿಗೆ ಹಳದಿ ಕಲ್ಲಂಗಡಿ ಪರಿಚಯಿಸಲು ಧಾರವಾಡ ನಗರದ ತೋಟಗಾರಿಕೆ ಇಲಾಖೆ ಹಾಗೂ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ತಾತ್ಕಾಲಿಕ ಮಳಿಗೆ ತೆರೆದು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸುವುದಾಗಿ ಅವರು ಹೇಳಿದರು.  

ಧಾರವಾಡ ಜಿಲ್ಲೆಯಲ್ಲಿ 87.72 ಹೆಕ್ಟೆರದಲ್ಲಿ ಕೆಂಪು ಕಲ್ಲಂಗಡಿ ಬೆಳೆಯಲಾಗುತ್ತಿದ್ದು, ಸುಮಾರು 1698.12 ಮೆಟ್ರಿಕ ಟನ್ ಕಲ್ಲಂಗಡಿ ಹಣ್ಣು ಉತ್ಪಾದಿಸಲಾಗುತ್ತಿದೆ. ಅಂದಾಜು 169.81 ಲಕ್ಷ ರೂಗಳ ವ್ಯವಹಾರ ಆಗುತ್ತದೆ. ಇದರೊಂದಿಗೆ ಹಳದಿ ಕಲ್ಲಂಗಡಿ ಬೆಳೆಯಲು ಅನೇಕ ರೈತರು ಆಸಕ್ತಿ ವ್ಯಕ್ತಪಡಿಸಿ, ಬೇಡಿಕೆ ಸಲ್ಲಿಸುತ್ತಿದ್ದಾರೆ. ಅವರಿಗೆ ಬೆಳೆ ಕ್ಷೇತ್ರೋತ್ಸವ ಮೂಲಕ ತಜ್ಞರಿಂದ ಅಗತ್ಯ ಮಾಹಿತಿ, ತರಬೇತಿ ನೀಡಿ, ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ, ಸಹಾಯಧನ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಹಳದಿ ಕಲ್ಲಂಗಡಿ ಬೆಳೆದಿರುವ ಕುರಬಗಟ್ಟಿಯ ಪ್ರಗತಿ ಪರ ರೈತ ಗುಡ್ಡಪ್ಪ ಮೇಲಾರ ಮಾತನಾಡಿ, ನಾನು ಪದವಿಧರನಾಗಿ ಸರಕಾರಿ ನೌಕರಿ ಸೇರಬೇಕೆಂದು ನಮ್ಮ ತಂದೆ ಆಸೆ ಆಗಿತ್ತು. ಆದರೆ ನಾನು ರೈತನಾಗಬೇಕೆಂದು ಬಯಸಿದ್ದೆ ಅದರಂತೆ ರೈತನಾಗಿ ಕೃಷಿಯಲ್ಲಿ ಖುಷಿ ಕಂಡಿದ್ದೇನೆ. ಹಳದಿ ಬಣ್ಣ ಕಲ್ಲಂಗಡಿ ಲಾಭದಾಯಕವಾಗಿದೆ. ರೈತರು ಆಸಕ್ತಿ ವಹಿಸಬೇಕು ಎಂದರು.  

ಬಾಡ ಗ್ರಾಮದಲ್ಲಿ ಹಳದಿ ಕಲ್ಲಂಗಡಿ ಬೆಳೆದಿರುವ ಪ್ರಗತಿಪರ ರೈತ ಕಲ್ಲನಗೌಡ ಪಾಟೀಲ ಅವರು ಮಾತನಾಡಿ, ಹಳದಿ ಕಲ್ಲಂಗಡಿ ಬೆಳೆ ಮಲೆನಾಡಿನ ಬೆಳೆ ಆಗಬೇಕು. ನಮ್ಮ ರೈತರು ಸಾಂಪ್ರದಾಯಿಕ ಕೃಷಿ ಪದ್ದತಿ, ಬೆಳೆಗಳಿಂದ ಲಾಭಗಳಿಸಲು ಸಾಧ್ಯವಾಗುತ್ತಿಲ್ಲ. ಹೊಸ ಪ್ರಯೋಗಗಳನ್ನು ಮಾಡಬೇಕು. ನಾನು ಹಳದಿ ಕಲ್ಲಂಗಡಿ ಬೆಳೆದು ಯಶಸ್ವಿ ಆಗಿದ್ದಕ್ಕೆ ಅನೇಕರು ಹಳದಿ ಕಲ್ಲಂಗಡಿ ಬೆಳೆಯಲು ಆಸಕ್ತಿ ತೊರಿದ್ದಾರೆ. ಸರಕಾರದ ತೋಟಗಾರಿಗೆ ಇಲಾಖೆ, ಹಳದಿ ಕಲ್ಲಂಗಡಿ ಬೀಜ, ಜೌಷಧೊಪಚಾರ ಹಾಗೂ ಮಾರುಕಟ್ಟೆಗೆ ಸಹಾಯ ಮಾಡುತ್ತಿದೆ. ಸಹಾಯಧನ, ಸಬ್ಸಿಡಿ ನೀಡಿ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.  

ವೇದಿಕೆಯಲ್ಲಿ ಧಾರವಾಡ ತಹಶೀಲ್ದಾರ ಡಿ.ಎಚ್‌.ಹೂಗಾರ, ಜಿಲ್ಲಾ ಪಂಚಾಯತ ಮಾಜಿ ಉಪಾದ್ಯಕ್ಷ  ನೀಜನಗೌಡ ಪಾಟೀಲ, ತಾಲೂಕಾ ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ, ಗ್ರಾಮ ಪಂಚಾಯತ ಉಪಾಧ್ಯಕ್ಷೆ ಸಂಗವ್ವ ಹೂಗಾರ, ಕೃಷಿ ವಿಶ್ವವಿದ್ಯಾಲಯ ತೋಟಗಾರಿಕೆ ಬೆಳೆ ತಜ್ಞೆ ಸಹಾಯಕ ಪ್ರಾಧ್ಯಾಪಕಿ ಡಾ. ನಮಿತಾ ರಾವುತ್, ಕೃಷಿಕ ಸಮಾಜದ ಅಧ್ಯಕ್ಷ ತಮ್ಮಣ್ಣ ಗುಂಡ್ಗೋವಿ ಇದ್ದರು.  

ಕುರಬಗಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗವ್ವ ಮಾಳ್ಗಿಮನಿ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ಸಿ.ಭದ್ರಣ್ಣವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಹಾಯಕ ನಿರ್ದೇಶಕ ಇಮ್ತಿಯಾಜ್ ಚಂಗಾಪುರಿ ಅವರು ವಂದಿಸಿದರು. ಮಹೇಶ ಪಟ್ಟಣಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.  

ಹಳದಿ ಬಣ್ಣದ ಕಲ್ಲಂಗಡಿ ಬೆಳೆ: ಬೇಸಿಗೆ ಕಾಲದ ಮುಖ್ಯವಾದ ಬೆಳೆ ಎಂದರೆ ಅದು ಕಲ್ಲಂಗಡಿ ಕಾಯಿ ಹಣ್ಣಾಗುವಾಗ ಬಣ್ಣ ಹವೆಯ ವಾತಾವರಣ ಇದ್ದರೆ, ಸಕ್ಕರೆ ಅಂಶ ಹೆಚ್ಚಾಗುತ್ತದೆ. ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡ್ಡು ಮಣ್ಣು ತುಂಬಾ ಉತ್ತಮ. ಹೆಚ್ಚು ಹುಳಿ ಮತ್ತು ಕ್ಷಾರದ ಮಣ್ಣು ಸೂಕ್ತವಲ್ಲ.  

ಈ ಹಿಂದೆ ನದಿ ತೀರದ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಆದರೆ ಈಗ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲಿ ಕಲ್ಲಂಗಡಿಯನ್ನು ಬೆಳೆಯಲಾಗುತ್ತಿದೆ.  

ತಳಿಗಳು: ಸದ್ಯದ ಮಾರುಕಟ್ಟೆಯಲ್ಲಿ ಐಸ್ ಬಾಕ್ಸ್‌ ತಳಿ ಮತ್ತು ಸಾಂಪ್ರದಾಯಕ ತಳಿಗಳು ಪ್ರಚಲಿತವಾಗಿವೆ. ಹೊಸದಾಗಿ ಮಾರುಕಟ್ಟೆಗಳಲ್ಲಿ ಹಳದಿ ಬಣ್ಣದ ತಿರುಳನ್ನು ಹೊಂದಿರುವ ತಳಿಗಳು ದೊರೆಯುತ್ತಿವೆ.  

ಹಳದಿ ಬಣ್ಣದ ತಳಿಗಳು: ಲೈಕೋಪಿನ್‌ನ ಅಂಶ ಕಡಿಮೆ ಇರುವುದರಿಂದ ಹಳದಿ ಬಣ್ಣಕ್ಕೆ ಕಾರಣವಾಗುತ್ತದೆ. ಹಣ್ಣುಗಳು ಕೆಂಪು ಬಣ್ಣದ ಕಲ್ಲಂಗಡಿ ಹಣ್ಣಿಗಿಂತ ಸಿಹಿಯಾಗಿದ್ದು, ಏಪ್ರಿಕಾಟ್ ಹಣ್ಣನಂತಹ ಸುವಾಸನೆಯನ್ನು ಹೊಂದಿರುತ್ತವೆ.  

ಹಳದಿ ಕಲ್ಲಂಗಡಿಯ ಪೌಷ್ಠಿಕಾಂಶದ ಮೌಲ್ಯ: ಕೆಂಪು ಕಲ್ಲಂಗಡಿಯಂತೆ ಆರೋಗ್ಯಕ್ಕೆ ಪ್ರಯೋಜನಗಳನ್ನು ಹೊಂದಿದೆ ವಿಟಮಿನ್ ಎ ಮತ್ತು ಸಿ, ಬೀಟಾ-ಕ್ಯಾರೋಡಿನ್ ಮತ್ತು ಪೊಟ್ಯಾಸಿಯಂ ನಂತಹ ಅಂಶಗಳ ದೇಹಕ್ಕೆ ಪ್ರತಿ ರಕ್ಷಣೆಯನ್ನು ಒದಗಿಸುತ್ತವೆ.  

ವಿಟಮಿನ್ ಎ ಮತ್ತು ಸಿ: ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ.  

ಬೀಟಾ-ಕ್ಯಾರೋಡಿನ್‌: ಹಳದಿ ಕಲ್ಲಂಗಡಿಯಲ್ಲಿ ಹೇರಳವಾಗಿ ದೊರೆಯುತ್ತದೆ. ಕ್ಯಾನ್ಸರ್ ಮತ್ತು ಕಣ್ಣಿನ ಕಾಯಿಲೆಗಳಿಂದ ರಕ್ಷಿಸುತ್ತದೆ.  

ಪೊಟ್ಯಾಸಿಯಂ: ರಕ್ತದೊತ್ತಡ ಮತ್ತು ನರಗಳ ಕಾರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  

ಹೆಚ್ಚಿನ ನೀರಿನ ಅಂಶ: ಬಿಸಿ ವಾತಾವರಣದಲ್ಲಿ ದೇಹವನ್ನು ರಿಪ್ರೇಶ್ ಆಗಿ ಇಡುತ್ತದೆ.