ಕನ್ನಡ ಸಾಹಿತ್ಯ ಪರಿಷತ್ತಿನ ಅವನತಿ ಬಗ್ಗೆ ಸಾಹಿತಿಗಳ ಅಸಮಾಧಾನ

ಕನ್ನಡ ಸಾಹಿತ್ಯ ಪರಿಷತ್ತಿನ ಅವನತಿ ಬಗ್ಗೆ ಸಾಹಿತಿಗಳ ಅಸಮಾಧಾನ  Writers' dissatisfaction regarding the decline of the Kannada Sahitya Parishat


ಬಳ್ಳಾರಿ, ಸೆ. 8: ಆರು ಕೋಟಿ ಕನ್ನಡಿಗರ ಅಸ್ಮಿತೆಯ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ವಿಷಾದನೀಯ ಎಂದು ಸಾಹಿತಿಗಳು ಹಾಗೂ ಕನ್ನಡಪರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಒಂದು ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ಗೌರವ, ಘನತೆ ಹೊಂದಿದ್ದು, ಅಪಾರ ಕನ್ನಡಿಗರ ಮನ್ನಣೆಗೆ ಪಾತ್ರವಾಗಿತ್ತು. ರಾಜ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳೇ ಇದಕ್ಕೆ ಸಾಕ್ಷಿಯಾಗಿವೆ.

ಪರಿಷತ್ತನ್ನು ಪ್ರತಿನಿಧಿಸುತ್ತಿದ್ದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳಿಗೆ ಸಮಾಜದಲ್ಲಿ ಮತ್ತು ಸರ್ಕಾರದಲ್ಲಿ ವಿಶೇಷ ಗೌರವವೂ ದೊರೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದ್ದು, ಪರಿಷತ್ತು ತನ್ನದೇ ಜನರ ಗಮನ ಸೆಳೆಯಲು ಪರದಾಡುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.  

ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರ ಸುತ್ತ ನಡೆಯುತ್ತಿರುವ ಬೆಳವಣಿಗೆಗಳು, ಅಧಿಕಾರದ ದುರುಪಯೋಗ ಹಾಗೂ ವೈಯಕ್ತಿಕ ರಾಜಕಾರಣದ ಆರೋಪಗಳು ಸಂಸ್ಥೆಯ ಘನತೆಗೆ ಧಕ್ಕೆ ತರುತ್ತಿವೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಸದಾ ನ್ಯಾಯಾಲಯದ ವಿಚಾರಣೆ ಹಾಗೂ ಗೊಂದಲಗಳ ನಡುವೆಯೇ ಪರಿಷತ್ತಿನ ಅವಧಿ ಮುಕ್ತಾಯಗೊಳ್ಳುತ್ತಿರುವುದು ದುರದೃಷ್ಟಕರ ಎಂದು ಕನ್ನಡಪರರು ಹೇಳಿದ್ದಾರೆ.  

ಕಳೆದ ಐದು ವರ್ಷಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಸಮ್ಮೇಳನ ಸೇರಿದಂತೆ ಪರಿಷತ್ತಿನ ಯಾವುದೇ ಕಾರ್ಯ ಚಟುವಟಿಕೆಗಳು ಸಮರ​‍್ಕವಾಗಿ ನಡೆಯಲು ಸಾಧ್ಯವಾಗದಿರುವುದಕ್ಕೆ ಜೋಶಿ ಅವರ ಕಾರ್ಯವೈಖರಿಯೇ ಕಾರಣ ಎಂದು ಹಲವರು ಆರೋಪಿಸಿದ್ದಾರೆ. .  

ಕನ್ನಡ ಸಾಹಿತ್ಯ ಪರಿಷತ್ತು ಯಾರೊಬ್ಬರ ಖಾಸಗಿ ಆಸ್ತಿಯಲ್ಲ. ತಮ್ಮಿಷ್ಟದಂತೆ ಅಧ್ಯಕ್ಷ ಸ್ಥಾನಗಳನ್ನು ಹಂಚಿಕೆ ಮಾಡುತ್ತಾ ಹೋದರೆ ಕನ್ನಡ ಸಾಹಿತ್ಯದ ಗೌರವ ಮತ್ತು ಸಂಸ್ಥೆಯ ಘನತೆ ಉಳಿಯುವುದೇ ಎಂಬ ಪ್ರಶ್ನೆ ಎದುರಾಗುತ್ತದೆ.

ತಾಲ್ಲೂಕು ಪರಿಷತ್ತಿನ ಅಧ್ಯಕ್ಷರಿಗೆ ಈ ಕುರಿತು ಅರಿವು ಇಲ್ಲದಿದ್ದಾಗ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕಿತ್ತು ಎಂದು ಕನ್ನಡಪರರು ಅಭಿಪ್ರಾಯಪಟ್ಟಿದ್ದಾರೆ.  

ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಸಿರುಗುಪ್ಪದ ಪ್ರಜ್ಞಾವಂತರು ಪ್ರಶ್ನೆಗಳನ್ನು ಎತ್ತಿದಾಗ, ಯಾವುದೇ ಸ್ಪಷ್ಟನೆ ನೀಡದೆ ಮೌನ ವಹಿಸಿರುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಸಾಧಕರಿಗೆ ಗೌರವ ನೀಡಬೇಕಾದ ಸಾಹಿತ್ಯ ಪರಿಷತ್ತಿನಲ್ಲಿ ಇಂತಹ ಬೆಳವಣಿಗೆಗಳು ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಷತ್ತಿನ ನಡೆ ಯಾವ ದಿಕ್ಕಿನತ್ತ ಸಾಗಲಿದೆ ಎಂಬ ಆತಂಕ ಕನ್ನಡಿಗರಲ್ಲಿ ಮೂಡಿದೆ.  

ಕನ್ನಡ ತಾಯಿ ಭುವನೇಶ್ವರಿಯ ಆಶಯಗಳಿಗೆ ತಕ್ಕಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ, ಘನತೆ ಹಾಗೂ ಅಸ್ತಿತ್ವವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕನ್ನಡಪರರು ಒತ್ತಾಯಿಸಿದ್ದಾರೆ.