ಬರಪೀಡಿತ ಬೈಲಹೊಂಗಲ ತಾಲೂಕು ಘೋಷಣೆಗೆ ಆಗ್ರಹ

ಬರಪೀಡಿತ ಬೈಲಹೊಂಗಲ ತಾಲೂಕು ಘೋಷಣೆಗೆ ಆಗ್ರಹ  Demand to declare Bailahongala taluk drought-hit


ಬೈಲಹೊಂಗಲ, ಸೆ.9: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಮಳೆ ಕೊರತೆಯಿಂದ ಹಾನಿಗೊಳಗಾಗಿದ್ದು, ರೈತರಿಗೆ ಪರಿಹಾರ, ಸಾಲ ಮನ್ನಾ ಸೇರಿದಂತೆ ಅಗತ್ಯ ನೆರವು ನೀಡಬೇಕು. ಬೈಲಹೊಂಗಲ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ತಾಲೂಕು ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.  

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗುರು ಮೆಟಗುಡ್ಡ ಮಾತನಾಡಿ, ಮಳೆ ಕೊರತೆಯಿಂದ ತಾಲೂಕಿನಾದ್ಯಂತ ಬರ ಪರಿಸ್ಥಿತಿ ಉಂಟಾಗಿದ್ದು, ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆಯೂ ಎದುರಾಗಿದೆ. ಕೂಡಲೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಮುಂಗಾರು ಬೆಳೆಗಾಗಿ ರೈತರು ಖರೀದಿಸಿರುವ ಬಿತ್ತನೆ ಬೀಜ ಸೇರಿದಂತೆ ಅಗತ್ಯ ಪರಿಕರಗಳನ್ನು ಹಿಂಗಾರು ಹಂಗಾಮಿಗೆ ಉಚಿತವಾಗಿ ಒದಗಿಸಬೇಕು. ಬರ ನಿರ್ವಹಣೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 10 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಬೇಕು ಎಂದು ಮನವಿ ಮಾಡಿದರು.  

ಮನವಿ ಸಲ್ಲಿಸುವ ಸಂದರ್ಭದಲ್ಲಿ ಕೃಷಿಕ ಸಮಾಜದ ಉಪಾಧ್ಯಕ್ಷ ಶಂಕರಗೌಡ ದೊಡಗೌಡ್ರ, ನಿರ್ದೇಶಕರಾದ ಶಿವಪುತ್ರ​‍್ಪ ತಟವಾಟಿ, ನಾಗನಗೌಡ ಭರಮಗೌಡರ, ಪ್ರಕಾಶ ಕಾರಿಮನಿ, ಮಹಾಂತೇಶ ಅಕ್ಕಿ, ಬಸವರಾಜ ಶಿಂತ್ರಿ, ಸೋಮನಗೌಡ ಪಾಟೀಲ, ಬಸಪ್ಪ ಕರವೀರನವರ, ಶ್ರೀಶೈಲ ಹೊಸೂರ, ಕುಮಾರ ಹೊಸಮನಿ, ವಿನಾಯಕ ಕಬ್ಬಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.