ವಿಶೇಷಚೇತನ ಮಕ್ಕಳ ವಿಶ್ವ ಆರೈಕೆದಾರರ ದಿನಾಚಾರಣೆ

ವಿಶೇಷಚೇತನ ಮಕ್ಕಳ ವಿಶ್ವ ಆರೈಕೆದಾರರ ದಿನಾಚಾರಣೆ World Carers of Children with Disabilities Day

ಹುಬ್ಬಳ್ಳಿ 29: ಇಂದು ಹುಬ್ಬಳ್ಳಿಯ ಮನೋವಿಕಾಸ ಪುನರ್ವಸತಿ ಸೇವೆಗಳ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಧಾರವಾಡ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಧಾರವಾಡ ಮತ್ತು ಮನೋವಿಕಾಸ ಪುನರ್ವಸತಿ ಸಂಸ್ಥೆ ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಆರೈಕೆದಾರರ ದಿನಾಚರಣೆಯನ್ನು ಸದೃಢ ಆರೈಕೆದಾರರು ಸದೃಢ ಸಮಾಜ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು. ಜಿಲ್ಲಾ ವಿಕಲಚೇತನ ಕಲ್ಯಾಣ ಅಧಿಕಾರಿ ಸವಿತಾ ಕಾಳೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆರೈಕೆದಾರರ ಯೋಜನೆ ನಡೆದು ಬಂದ ದಾರಿ ಹಾಗೂ ಆರೈಕೆದಾರರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಬರ್ಡ್ಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಅಗಸಿ ಮಾತನಾಡಿ, ಆರೈಕೆದಾರರಿಗೆ ಇರುವ ಸಮಸ್ಯೆ , ಸ್ವಸಹಾಯ ಸಂಘಗಳ ರಚನೆ, ಆರೈಕೆದಾರರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.  

ಸಂಸ್ಥೆ ಮುಖ್ಯಸ್ಥರಾದ ವಿಜಯಕುಮಾರ ಹಿರೇಮಠ ಅವರು ಮಾತನಾಡಿ, ವಿಶೇಷಚೇತನ ಮಕ್ಕಳ ಪಾಲಕರು ಯಾವುದೇ ಕಾರಣಕ್ಕೂ ಎದೆಗುಂದದೆ ಸಮಾಜದಲ್ಲಿ ಎಲ್ಲ ಮಕ್ಕಳ ಹಾಗೆ ತಮ್ಮ ಮಕ್ಕಳನ್ನು ಲಾಲನೆ ಪಾಲನೆ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು. ಮಧುಕರ ಶೆಟ್ಟಿ ಸ್ವಾಗತಿಸಿದರು. ಸವಿತಾ ಹುಬ್ಬಳ್ಳಿ ನಿರೂಪಿಸಿದರು. ಎಂ.ಆರ್‌.ಡಬ್ಲ್ಯೂ ಮಹಾಂತೇಶ ಕುರ್ತಕೋಟಿ ವಂದಿಸಿದರು