ಮಹಾಲಿಂಗಪುರ 28: ಮಹಿಳೆಯರು ಸಂಘಟಿತರಾದರೆ ಸರ್ಕಾರದ ಸಕಲ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.
ಸ್ಥಳೀಯ ಸಿದ್ದಾರೂಢ ಬೃಹ್ಮವಿದ್ಯಾಶ್ರಮದಲ್ಲಿ ಜಿಲ್ಲಾಡಳಿತ ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆ, ಹಾಗೂ ಪುರಸಭೆ ಕಾರ್ಯಾಲಯದ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ದೀಪ ಹಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರ ಪ್ರತಿವರ್ಷ ಮಹಿಳೆಯರಿಗಾಗಿಯೇ ಸಾಕಷ್ಟು ಯೋಜನೆಗಳನ್ನು ತರುತ್ತಿದ್ದು, ಅದರ ಸದುಪಯೋಗವನ್ನು ಎಲ್ಲ ಬಡ ಮಹಿಳೆಯರು ಪಡೆದು ಆರ್ಥಿಕವಾಗಿ ಮುಂದೆ ಬರಬೇಕು ಎನ್ನುವುದೆ ಸರ್ಕಾರದ ಉದ್ದೇಶವಾಗಿದೆ. ಕಾರಣ ಎಲ್ಲ ಸಂಘಟಿತರಾಗಬೇಕು, ಒಬ್ಬರಿಂದಾಗದ ಕೆಲಸವನ್ನು ಸಂಘಟನೆಯಿಂದ ಪಡೆಯಬಹುದು ಎಂದರು.
ಪುರಸಭೆ ಸದಸ್ಯ ಶೇಖರ ಅಂಗಡಿ ಮಾತನಾಡಿ ಮಹಿಳಾ ಸಂಘಗಳಿಗೆ ಪ್ರತಿವರ್ಷ ಹತ್ತು ಹಲವಾರು ಯೋಜನೆಗಳು ಸರ್ಕಾರದಿಂದ ಬರುತ್ತಲೆ ಇವೆ, ಕಾರಣ ಸರಿಯಾದ ಫಲಾನುಭವಿಗಳು ಮಾತ್ರ ಸರ್ಕಾರ ಯೋಜನೆಗಳ ಪ್ರಯೋಜನೆ ಪಡೆಯಬೇಕು. ಅಲ್ಲದೆ ಮಹಿಳಾ ಸಂಘಗಳಿಗೆ ಒಂದು ಸಮೂದಾಯ ಭವನದ ಅವಶ್ಯಕತೆ ಇದ್ದು ಪುರಸಭೆ ಅಧ್ಯಕ್ಷರು ಮನಸ್ಸು ಮಾಡಿ ಇವರಿಗೆ ಒಂದು ಸಮುಧಾಯ ಭವನವನ್ನು ಸರ್ಕಾರದಿಂದ ಮಂಜೂರಿಮಾಡಿಸಿ ಮಹಿಳೆಯರು ಸಭೆ, ಸಮಾರಂಭಗಳನ್ನುಮಾಡುವ ಮೂಲಕ ಅವರ ಬೇಕು ಬೇಡಗಳ ಬಗ್ಗೆ ಚರ್ಚಿಸಿ, ಒಟ್ಟಿನಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಬಂದು ಸ್ವತಂತ್ರ ಬದುಕು ನಡೆಸುವಂತಾದರೆ ಸಾಕು ಎಂದರು.
ಉಪನ್ಯಾಸಕ ಆಯ್.ಆರ್.ಡಿ ಸಂಸ್ಥೆಯ ಸಿ.ಇಓ ಡಾ. ಬಾಬು ಸಜ್ಜನ ಮಾತನಾಡಿ ಬೀದಿ ಬದಿ ವ್ಯಾಪಾರಿಗಳ ರಕ್ಷಣಾ ಕಾನೂನುಗಳ ಬಗ್ಗೆ ವಿವರಿಸಿದ ಅವರು ಬೀದಿ ಬದಿ ವ್ಯಾಪಾರಿಗಳು ಬ್ಯಾಂಕುಗಳ ಜೊತೆ ಸರಿಯಾದ ಸಂಬಂಧ ಹೊಂದಿರಬೇಕು ಅಂದರೆ ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ಒಳ್ಳೆಯ ಗ್ರಾಹಕರಾಗಿ ನಡೆದುಕೊಳ್ಳಬೇಕು ಎಂದರು.
ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಸಿದ್ದಾನಂದ ಭಾರತಿ ಶ್ರೀಗಳು ಮಾತನಾಡಿ ಮಹಿಳೆ ಮನಸ್ಸು ಮಾಡಿದರೆ ಎನನ್ನಾದರೂ ಸಾಧಿಸಬಲ್ಲಳು, ಎಂತ ಕಷ್ಟದ ಸಮಯದಲ್ಲಿಯೂ ಸಹ ಸಮಚಿತ್ತದಲ್ಲಿ ಯೋಚಿಸಿ, ಸರಿಯಾದ ಮಾರ್ಗದಿಂದ ಸಂಸಾರ ನಡೆಸುವ ಜಾಣ್ಮೆ ಮಹಿಳೆಯರಿಗೆ ಇದೆ. ಮಹಿಳೆಯರು ವಿವಿಧ ಚಿಕ್ಕ ಚಿಕ್ಕ ಉದ್ಯೋಗಗಳಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜದ ಕಟ್ಟ ಕಡೆಯ ಮಹಿಳೆಯರು ಸಹ ಆರ್ಥಿಕವಾಗಿ ಮುಂದೆ ಬರಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಲಕ್ಷ್ಮಣ ಮಾಂಗ, ತರಬೇತುದಾರರಾದ ಸುಮಿತ್ರಾ ಬೊರಗಿ,ಸುಮಿತ್ರಾ ಜಗದಾಳ, ಬೀದಿ ವ್ಯಾಪಾರಸ್ಥರ ಸಂಗದ ಜಿಲ್ಲಾ ಅಧ್ಯಕ್ಷ ಮನೋಹರ ಕಲಾಲ, ವರ್ಷಾ ಜಗದಾಳ, ಮೀನಾಕ್ಷೀ ಹಿರೇಮಠ, ಬಿ.ವಾಯ ಮರ್ಧಿ, ಮಾನಿಂಗ ಕಿರಿಕರಿ, ಶಿವಾನಂದ ಬಾಡನವರ ಸೇರಿದಂತೆ ಹಲವರು ಇದ್ದರು. ಸಿ.ಎಓ ಚಿದಾನಂದ ಮಠಪತಿ ಸ್ವಾಗತಿ ವಂದಿಸಿದರು.