ಯರಗಟ್ಟಿ: ತಾಲೂಕಿನ ಸೋಪ್ಪಡ್ಲ ಗ್ರಾಮದ ರೈತ ರವೀಂದ್ರ ಕುರುಬಗಟ್ಟಿ ಇವರ ಹೊಲದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಇಲಾಖೆ ಸವದತ್ತಿ, ಟಿಎಸ್ಪಿ ಯೋಜನೆಯ ಅಡಿಯಲ್ಲಿ ಗೋಧಿ ಬೆಳಯ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯಕ್ರಮ ಏರಿ್ಡಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಕೃವಿವಿ ವಿಸ್ತರಣಾ ನಿರ್ದೇಶಕ ಡಾ. ಆರ್. ಬಸವರಾಜಪ್ಪ ಮಾತನಾಡಿದ ಅವರು ಗೋಧಿ ಬೆಳೆಯು ಒಂದು ಪ್ರಮುಖ ಹಿಂಗಾರಿ ಬೆಳೆ. ಇದರ ಸಾಗುವಳಿ ಹೆಚ್ಚಾಗಿ ಉತ್ತರ ಕರ್ನಾಟಕ ಪ್ರದೇಶ. ನಮ್ಮ ರಾಜ್ಯದಲ್ಲಿ 2.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಲೆಯುತ್ತಿದ್ದು, ಸರಿ ಸುಮಾರು 1.47 ಲಕ್ಷ ಟನ್ ಗೋಧಿ ಉತ್ಪಾದನೆಯಾಗುತ್ತಿದೆ.
ಶೇಕಡಾ 60 ರಷ್ಟು ಮಳೆಯಾಶ್ರಿತದಲ್ಲಿ ಹಾಗೂ ಶೇಕಡಾ 40 ರಷ್ಟು ನೀರಾವರಿ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಮೂರು ತಳಿಗಳಾದ ಚಪಾತಿ, ರವೆ ಹಾಗೂ ಕಪಲಿ (ಜವೆಗೋಧಿ) ತಳಿಗಳನ್ನು ಕರ್ನಾಟಕದಲ್ಲಿ ಬೆಳೆಯುತ್ತಿರುವುದರಿಂದ ಕರ್ನಾಟಕವು ಗೋಧಿ ಬೇಸಾಯದಲ್ಲಿ ವೈವಿಧ್ಯತೆಯನ್ನು ಹೊಂದಿದೆ. ನೀರಾವರಿ ಪ್ರದೇಶದಲ್ಲಿ ಶೇಕಡಾ 70 ರಷ್ಟು ಚಪಾತಿ ತಳಿ, ಶೇಕಡಾ 20 ರಷ್ಟು ರವೆ ತಳಿ ಹಾಗೂ ಶೇಕಡಾ 10 ರಷ್ಟು ಜವೆಗೋಧಿ ತಳಿಗಳು ಕಂಡುಬರುತ್ತವೆ.
ಕೃವಿವಿ ಸಹ ಸಂಶೋಧನಾ ನಿರ್ದೇಶಕ ಡಾ. ಪಿ. ಎಸ್. ಮತ್ತಿವಾಡೆ ಮಾತನಾಡಿ ಗೋಧಿ ತಳಿಗಳಲ್ಲಿ ಯುಎಎಸ್ 347, ಯುಎಎಸ್ 345, ಯುಎಎಸ್ 446, ಯುಎಎಸ್ 478, ಡಿಡಬ್ಲೂಆರ್ 162 ಸೇರಿದಂತೆ ಅನೇಕ ಗೋಧಿ ತಳಿಗಳು ಬರುತ್ತವೆ ಈ ತಳಿಯು ಚಪಾತಿ, ಹೋಳಿಗೆ, ಮೈದಾ ಹಾಗೂ ಬೇಕರಿ ಪದಾರ್ಥಗಳನ್ನು ತಯಾರಿಸಲು ಸೂಕ್ತವಾಗಿದೆ. ಇದು ಭಂಡಾರ ಹಾಗೂ ಎಲೆಮಚ್ಚೆ ರೋಗಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಹಾಗೂ ಗೋಧಿ ತಳಿಗಳಿಗೆ ಎಲ್ಲೆ ಭಂಡಾರ ರೋಗ ಸಣ್ಣ ತತ್ತಿಯಾಕಾರದ ಕಂದು ಬಣ್ಣದ ಗುಳ್ಳೆಗಳು ಕೇವಲ ಎಲೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಇಂತಹ ಚುಕ್ಕೆಗಳು ಕ್ರಮೇಣ ಒಡೆದು ಕಿತ್ತಳೆ ಬಣ್ಣದ ದುಂಡಗಿನ ಬೀಜ ಕಣಗಳನ್ನು ಬಿಡುಗಡೆ ಮಾಡುವವು. ಕಪ್ಪು ಬಣ್ಣದ ಚುಕ್ಕೆಗಳು ಕೇವಲ ಎಲೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ ಇದರಿಂದ ಕಾಳಿನ ಗಾತ್ರ ಹಾಗೂ ಇಳುವರಿಯಲ್ಲಿ ಗಣನೀಯವಾದ ಕುಂಠಿತವನ್ನು ಕಾಣಬಹುದು ಎಂದು ಹೇಳಿದರು.
ಈ ವೇಳೆ ಕೃಷಿ ಅಧಿಕಾರಿ ಎಂ. ಜಿ. ಕಳಸಪ್ಪನ್ನವರ, ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಸತ್ಯೆವ್ವ ಗೋರಗುದ್ದಿ, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ವ್ಹಿ. ಎಸ್. ಮುಲ್ಲಾ, ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಗೋಡಿ, ವಿರೂಪಾಕ್ಷ ಕೌಜಲಗಿ, ವ್ಹಿ. ಎಂ. ಹೊಸೂರ, ಶಿಕ್ಷಕ ಆರ್. ಬಿ. ಹುಣಶ್ಯಾಳ, ರೈತರಾದ ವಿಠ್ಠಲ ಭಾಂಗಿ, ಶಿವಾನಂದ ಕರಿಗೊಣ್ಣವರ, ಮಹಾದೇವ ಯಂಡ್ರಾವಿ, ರವೀಂದ್ರ ಬೆಳವಲ, ಮಹಾರುದ್ರ್ಪ ಕಡಕೋಳ, ಬಸನಗೌಡ ಪಾಟೀಲ, ವೀರನಗೌಡ ಸರನಾಡಗೌಡ್ರ ಸೇರಿದಂತೆ ಅನೇಕ ರೈತರು ಇದ್ದರು.