ಹಿಪ್ಪರಗಿ ಬ್ಯಾರೇಜ್‌ನಿಂದ ಶ್ರಮಬಿಂದು ಸಾಗರ ವ್ಯಾಪ್ತಿಗೆ ನೀರು: ರೈತರಲ್ಲಿ ಹರ್ಷ

ಹಿಪ್ಪರಗಿ ಬ್ಯಾರೇಜ್‌ನಿಂದ ಶ್ರಮಬಿಂದು ಸಾಗರ ವ್ಯಾಪ್ತಿಗೆ ನೀರು: ರೈತರಲ್ಲಿ ಹರ್ಷ Water from Hipparagi Barrage to Shramabindu Sagar: Farmers are happy

ಲೋಕದರ್ಶನ ವರದಿ 

ಜಮಖಂಡಿ 03: ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನಿಂದ ಶ್ರಮಬಿಂದು ಸಾಗರ ವ್ಯಾಪ್ತಿಗೆ 0.10 ಟಿಎಂಸಿ ನೀರು ಹರಿಸಲಾಗುತ್ತಿದ್ದು, ಇದು ನದಿ ತೀರದ ಗ್ರಾಮಸ್ಥರಲ್ಲಿ ಮತ್ತು ರೈತರಲ್ಲಿ ಹರ್ಷ ಮೂಡಿಸಿದೆ. 

ಕಳೆದ ಕೆಲವು ದಿನಗಳಿಂದ ಶ್ರಮಬಿಂದು ಸಾಗರ ನದಿ ಒಡಲು ಸಂಪೂರ್ಣ ಬತ್ತಿ ಬರಿದಾಗಿತ್ತು. ಇದರಿಂದಾಗಿ ನದಿ ತೀರದ ವಿವಿಧ ಗ್ರಾಮಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ತೀವ್ರ ಸಂಕಷ್ಟ ಎದುರಾಗಿತ್ತು. ಹನಿ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು. 

ಅಥಣಿ ತಾಲೂಕಿನ ಶಿರಹಟ್ಟಿ, ಝುಂಜರವಾಡ ಸೇರಿದಂತೆ ಹಲವು ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳು ಇದೇ ನದಿಯನ್ನೇ ನಂಬಿಕೊಂಡಿವೆ. ನೀರಿನ ಅಭಾವದಿಂದ ಈ ಯೋಜನೆ ಸ್ಥಗಿತಗೊಂಡಿತ್ತು, ಅಥಣಿ ಶಾಸಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ನದಿ ತೀರದ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರು. 

ಶಾಸಕರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು 0.10 ಟಿಎಂಸಿ ನೀರನ್ನು ನದಿ ಪಾತ್ರಕ್ಕೆ ಹರಿಸಲು ಆದೇಶ ಹೊರಡಿಸಿದ್ದರು. ಅದರಂತೆ ಬ್ಯಾರೇಜಿನ ಒಂದು ಗೇಟ್ ಮೂಲಕ ನೀರನ್ನು ಕೆಳಹಂತಕ್ಕೆ ಬಿಡಲಾಗುತ್ತಿದೆ. 

ನದಿಗೆ ಹರಿಸಲಾಗುತ್ತಿರುವ ಈ ನೀರು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಮೀಸಲಾಗಿದೆ. ಯಾವುದೇ ಕಾರಣಕ್ಕೂ ರೈತರು ಇದನ್ನು ಕೃಷಿ ಬೆಳೆಗಳಿಗೆ ಬಳಸಬಾರದು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.