ಕುತೂಹಲ ಹೆಚ್ಚಿಸಿದ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಟ್ರೇಲರ್

ಕುತೂಹಲ ಹೆಚ್ಚಿಸಿದ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಟ್ರೇಲರ್ Vijay Raghavendra comes up with another thrilling story

ಮತ್ತೊಂದು ಥ್ರಿಲ್ಲಿಂಗ್ ಕಥೆಯೊಂದಿಗೆ ಬಂದ ವಿಜಯ್ ರಾಘವೇಂದ್ರ 

ಸಸ್ಪೆನ್ಸ್‌ ಕಥೆಗಳನ್ನು ಸೊಗಸಾಗಿ ಕಟ್ಟಿಕೊಡುವ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಈಗ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಮೂಲಕ ಪ್ರೇಕ್ಷಕರ ಎದುರು ಬರ್ತಿದ್ದಾರೆ. ಅಂದಹಾಗೇ 'ಸೀತಾರಾಮ್ ಬಿನೋಯ್ ಕೇಸ್ ನಂಬರ್ 18' ಚಿತ್ರದ ಸೀಕ್ವೆಲ್ ಇದಾಗಿದ್ದು, ವಿಜಯ್ ರಾಘವೇಂದ್ರ ಅವರು ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅವರು ಮತ್ತೆ ಖಾಕಿ ತೊಟ್ಟು ಮತ್ತೊಂದು ಥ್ರಿಲ್ಲಿಂಗ್ ಕಥೆ ಭೇದಿಸಲು ಹೊರಟಿದ್ದಾರೆ. 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಜಾಲತಾಣದಲ್ಲಿ ಪ್ರಶಂಸೆ ಪಡೆಯುತ್ತಿದೆ. ಈ ವೇಳೆ ನಟ ವಿಜಯ್ ರಾಘವೇಂದ್ರ ಮಾತನಾಡಿ, 'ಸೀತಾರಾಮ್ ಬಿನೋಯ್ ನನ್ನ ವೃತ್ತಿ ಜೀವನಕ್ಕೆ ವಿಶೇಷ ಬಲ ಕೊಟ್ಟ ಸಿನಿಮಾ. ಆ ಚಿತ್ರದ ಬರವಣಿಗೆ, ಪ್ರೆಸೆಂಟೇಷನ್ ಎಲ್ಲವೂ ಶಕ್ತಿ ನೀಡಿತ್ತು. ನಂತರ ಕೇಸ್ ಆಫ್ ಕೊಂಡಾಣ ಮಾಡಿದೆವು. ಬಳಿಕ ಈ ಇನ್ನೊಂದು ಸೀತಾರಾಮ್ ಮಾಡಿದ್ದೇವೆ. ದೇವಿ ಸರ್ ಒಳ್ಳೆ ಸ್ಕ್ರಿಪ್ಟ್‌ ಬರೆದಿದ್ದಾರೆ. ಸಾತ್ವಿಕ್ ಅದಕ್ಕೆ ಸಪೋರ್ಟ್‌ ಮಾಡಿದರು. ಇಡೀ ಚಿತ್ರತಂಡ ಸೇರಿಕೊಂಡು 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರ ಮಾಡಿದೆವು. ನವನೀತ್ ಶ್ಯಾಮ್ ಸಂಗೀತ ಚಿತ್ರದ ಜೀವಾಳ. ಚಿತ್ರ ಮಾಡೋದು ಎಷ್ಟೋ ಕಷ್ಟವೋ ಬಿಡುಗಡೆ ಕೂಡ ಕಷ್ಟ. ನಮಗೆ ಈ ಚಿತ್ರಕ್ಕೆ ಪವನ್ ಸರ್ ಬೆಂಬಲವಾಗಿ ನಿಂತಿದ್ದಾರೆ. ಚಿತ್ರ ನೋಡಿ ಜೊತೆಗೆ ನಿಲ್ಲೋದಾಗಿ ಹೇಳಿದರು. ಕೆಲವೇ ದಿನಗಳಲ್ಲಿ ಸಿನಿಮಾ ರೀಲೀಸ್ ಆಗಲಿದೆ. ಅದಕ್ಕೆ ನಿಮ್ಮ ಬೆಂಬಲ ಇರಲಿ' ಎಂದು ಹೇಳಿದರು. 

ನಂತರ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿರುವ ಪವನ್ ಒಡೆಯರ್ ಮಾತನಾಡಿ, 'ಸೀತಾರಾಮ್ ಬಿನೋಯ್ ಟ್ರೆಂಡ್ ಸೆಟ್ ಮಾಡಿದ ಚಿತ್ರ. ಬರವಣಿಗೆ, ಟೇಕಿಂಗ್, ಪ್ರೆಸೆಂಟೆಷನ್ ಎಲ್ಲವೂ ಚೆನ್ನಾಗಿತ್ತು. ಅದರ ಮುಂದುವರೆದ ಭಾಗ ಸೆಕೆಂಡ್ ಕೇಸ್ ಆಫ್ ಸೀತಾರಾಮ್‌. ನಿರ್ದೇಶಕರು ಹಾಗೂ ನಿರ್ಮಾಪಕರು ಇಬ್ಬರು ಫ್ಷಾನೇಟೆಡ್‌. ಸಿನಿಮಾವನ್ನು ಹೋಮ್ ವರ್ಕ್‌ ಮಾಡಿದ ರೀತಿ ಮಾಡಿ ಕೆಲಸ ಮಾಡಿದ್ದಾರೆ. ಸಿನಿಮಾ ಮೇಲೆ ಇಡೀ ತಂಡಕ್ಕೆ ತುಡಿತ ಇದೆ. ರಫ್ ಕಟ್ ನೋಡಿದಾಗ ಬಹಳ ಇಷ್ಟವಾಯ್ತು. ಈ ಚಿತ್ರವನ್ನು ಪ್ರೆಸೆಂಟ್ ಮಾಡಲು ತುಂಬಾ ಖುಷಿ ಇದೆ. ಬೇರೆ ಭಾಷೆಗಳ ಸಸ್ಪೆನ್ಸ್‌ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ಈ ಚಿತ್ರ ಒಂದು ಹೆಜ್ಜೆ ಮುಂದೆ ಇದೆ. ಈ ಸಿನಿಮಾದ ಬಗ್ಗೆ ಹೇಳುವ ಬದಲು ಎಕ್ಸ್‌ ಪಿರಿಯನ್ಸ್‌ ಮಾಡಬೇಕು' ಎಂದು ಅನುಭವ ಹಂಚಿಕೊಂಡರು. 

'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಗೋಪಾಲ್ ಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಪವನ್ ಒಡೆಯರ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 'ಫ್ಲೈಯಿಂಗ್ ಎಲಿಫಂಟ್ ಸ್ಟೋರಿ ಟೆಲ್ಲರ್ಸ್‌' ಸಿನಿಮಾ ಮೂಲಕ ದೇವಿ ಪ್ರಸಾದ್ ಶೆಟ್ಟಿ ಹಾಗೂ ಸಾತ್ವಿಕ್ ಹೆಬ್ಬಾರ್ ಈ ಚಿತ್ರ ನಿರ್ಮಿಸಿದ್ದಾರೆ. ಫೆಬ್ರವರಿ 20ರಂದು 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಹೇಮಂತ್ ಆಚಾರ್ಯ ಛಾಯಾಗ್ರಹಣ ಹಾಗೂ ನವನೀತ ಶಾಮ್ ಸಂಗೀತ, ಶಶಾಂಕ್ ಸಂಕಲನ ಚಿತ್ರಕ್ಕಿದೆ. ಪ್ರೇಕ್ಷಕರನ್ನು ಸೀಟಿನ ತುದಿಗೆ ಕೂರಿಸುವ ಕಥೆಯೊಂದಿಗೆ ಇಡೀ ತಂಡ ಹಾಜರಾತಿ ಹಾಕಿದೆ.