ವಿಜೃಂಭಣೆಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ

ವಿಜೃಂಭಣೆಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ Veerabhadreshwara chariot festival celebrated with grandeur

       ಯರಗಟ್ಟಿ, 04 : ಉತ್ತರ ಕರ್ನಾಟಕದ ಧರ್ಮಸ್ಥಳದ ಎಂಬ ಖ್ಯಾತಿ ಹೊಂದಿರುವ ಗೊಡಚಿ ಕ್ಷೇತ್ರದ ಶ್ರೀ ವೀರಭದ್ರೇಶ್ವರ ರಥೋತ್ಸವವು  ಹೊಸ್ತಿಲ ಹುಣ್ಣಿಮೆ ದಿನ ಗುರುವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಪ್ರತಿ ಸಲದಂತೆ ಈ ಸಲವೂ ಗುರುವಾರ ಸಂಜೆ 5ಕ್ಕೆ ವೀರಭದ್ರೇಶ್ವರನ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಈ ನಿಟ್ಟಿನಲ್ಲಿ ರಾತ್ರಿಯಿಂದಲೇ 11 ಜನ ಶಾಸ್ತ್ರಿಗಳಿಂದ ವೀರಭದ್ರ ದೇವರು, ಭದ್ರಕಾಳಿ ಮಾತೆಗೆ ಮಹಾಮಸ್ತಕಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಮ್ಮನಿಗೆ ಕುಂಕುಮಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.

      ಕಲಿಯುಗದಲ್ಲಿಯೂ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಬಲ್ಲ ದೈವಾದಿ ಪುರಷನಾಗಿ ಪ್ರಸಿದ್ದಿ ಪಡೆದು ಭಕ್ತರ ಮನದಲ್ಲಿ ಮನೆ ಮಾಡಿರುವ ವೀರಭದ್ರನ ಜಾತ್ರೆ ಈ ಭಾಗದಲ್ಲಿಯೇ ಖ್ಯಾತಿ ಪಡೆದಿದೆ. ಗೊಡಚಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಿರಂತರ ಅನ್ನದಾಸೋಹ ನಡೆಸುತ್ತ ಉತ್ತರ ಕರ್ನಾಟಕದ ಧರ್ಮಸ್ಥಳ ಎಂಬ ಹೆಗ್ಗಳಿಕೆಗೆ ಈ ದೇವಸ್ಥಾನವು ಪಾತ್ರವಾಗಿದೆ.ಈ ವೇಳೆ ನಂದಿಕೋಲು, ವೀರಗಾಸೆ ಪುರವಂತರ ಕುಣಿತ, ಸಕಲವಾದ್ಯ ಗೋಷ್ಠಿಗಳೊಂದಿಗೆ ಜರುಗಿತು.