ಕುಪಕಡ್ಡಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ನೂತನ ಕಛೇರಿ ಕಟ್ಟಡದ ಉದ್ಘಾಟನೆ
ವಿಜಯಪುರ 29: ವಿಜಯಪುರ ಜಿಲ್ಲೆಯ ಸಹಕಾರ ರಂಗದ ಅಭಿವೃದ್ಧಿಗೆ ಹಾಗೂ ಕೇಂದ್ರ ಸಹಕಾರಿ ಬ್ಯಾಂಕ್ ಸದೃಢವಾಗಿ, ಸಮರ್ಥ ಹಾಗೂ ದಕ್ಷತೆಯಿಂದ ಆಡಳಿತ ನಡೆಸುವಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕೃಷಿ ಮಾರುಕಟ್ಟೆ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಜವಳಿ ಸಚಿವರಾದ ಶಿವಾನಂದ ಎಸ್ ಪಾಟೀಲ ಅವರ ಕೊಡುಗೆ ಅನನ್ಯವಾಗಿದೆ. ಅವರ ಅವಿರತ ಪರಿಶ್ರಮ, ದೂರ ದೃಷ್ಠಿ, ಕಾಳಜಿ, ಸಕಾಲಿಕ ಕ್ರಮಗಳೇ ಬ್ಯಾಂಕ್ ಅಭ್ಯುದಯಕ್ಕೆ ಕಾರಣ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ರಾಜಶೇಖರ ಬ. ಗುಡದಿನ್ನಿ ಬಣ್ಣಿಸಿದರು.
ಬಸವನಬಾಗೇವಾಡಿ ತಾಲೂಕಿನ ಕುಪಕಡ್ಡಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಛೇರಿ ಕಟ್ಟಡ ಲೋಕಾರೆ್ಣ ಮಾಡಿ ಮಾತನಾಡಿದ ಅವರು, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆರ್ಥಿಕವಾಗಿ ಸದೃಢತೆ ಹೊಂದಿದ್ದು, ಜಿಲ್ಲೆಯ 2.54 ಲಕ್ಷ ರೈತರಿಗೆ ಕೃಷಿಗಾಗಿಯೇ 2008 ಕೋಟಿ ರೂ. ಸಾಲ ನೀಡುವಲ್ಲಿ ಅಧ್ಯಕ್ಷರಾದ ಸಚಿವ ಶಿವಾನಂದ ಪಾಟೀಲ ಅವರ ಇಚ್ಛಾಶಕ್ತಿಯೇ ಪ್ರಮುಖ ಕಾರಣ ಎಂದರು.
ಸಹಕಾರಿ ಸಂಘಗಳು ಗ್ರಾಮೀಣ ಜನರ ಅದರಲ್ಲೂ ಅನ್ನದಾತನ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಕೊಡುಗೆ ನೀಡಿವೆ. ಗ್ರಾಮೀಣ ಸಹಕಾರಿ ವ್ಯವಸ್ಥೆ ರೈತರಿಗೆ ಅದರಲ್ಲೂ ಕೃಷಿ ಸಂಬಂಧಿ ಸೇವೆಗಳಿಗೆ ಹಳ್ಳಿಗಳಲ್ಲೇ ರೈತಾಪಿ ವರ್ಗದವರಿಗೆ ಸ್ಥಾನಿಕವಾಗಿ ಆರ್ಥಿಕ ಹಾಗೂ ಕೃಷಿಗೆ ಸಂಬಂಧಿತ ಸೇವೆಗಳನ್ನು ನೀಡುತ್ತಲಿವೆ. ಸಂಘದ ಸದಸ್ಯರು ಪಾರದರ್ಶಕ ಆಡಳಿತದ ಮೂಲಕ ಗ್ರಾಹಕರು ವಿಶ್ವಾಸವಿರಿಸಿ ವ್ಯವಹರಿಸುವ ರೀತಿಯಲ್ಲಿ ಸೇವೆ ನೀಡಿದಾಗಲೇ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ ಎಂದು ವಿವರಿಸಿದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿದ್ದ ದಿ. ಬಿ.ಎಸ್.ಪಾಟೀಲ ಕುಪ್ಪಕಡಿ ಇವರು ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ್ದನ್ನು ಸ್ಮರಿಸಿದ ರಾಜಶೇಖರ ಅವರು, ಸದರಿ ಸಂಘದ ನೂತನ ಕಟ್ಟಡದಲ್ಲಿ ಹೆಚ್ಚಿನ ಅಭಿವೃದ್ದಿ ಪರ ಕೇಲಸಗಳನ್ನು ಕೈಕೊಂಡು ಉತ್ತರೊತ್ತರವಾಗಿ ಬೆಳೆಯಲ್ಲಿ ಎಂದು ಆಶಯ ವ್ಯಕ್ತಪಡಿಸಿದರು.
ಸಂಘದ ನೂತನ ಉಗ್ರಾಣ ಲೋಕಾರೆ್ಣ ಮಾಡಿದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶೇಖರ ಅ ದಳವಾಯಿ ಮಾತನಾಡಿ, ರೈತರಿಗೆ ಜಿಲ್ಲಾ ಬ್ಯಾಂಕು ಸಹಕಾರ ಸಂಘಗಳ ಮೂಲಕ ಸರ್ಕಾರದ ಬಡ್ಡಿ ಸಹಾಯಧನ ಯೋಜನೆಯಡಿ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡುತ್ತಿದೆ. ಶೇ.3 ರ ರಿಯಾಯತಿ ಬಡ್ಡಿದರದಲ್ಲಿ ಮಧ್ಯಮಾವಧಿ ಸಾಲ ನೀಡುತ್ತಿದ್ದು, ಹೆಚ್ಚಿನ ರೈತರು ಪ್ರಯೊಜನೆ ಪಡೆಯುವಂತೆ ಕಿವಿ ಮಾತು ಹೇಳಿದರು.
ಕುಪ್ಪಕಡಿ ಸಹಕಾರ ಸಂಘವು ಕಡಿಮೆ ಜಾಗದಲ್ಲೇ ಉಗ್ರಾಣ ಹಾಗೂ ಕಛೇರಿ ಕಟ್ಟಡವನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಿರುವದು ಸಂತೋಷ ಹಾಗೂ ಮಾದರಿ ಸಂಗತಿ ಎಂದರು.
ಸಮಾರಂಭಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಮಾತನಾಡಿ ಜಿಲ್ಲೆಯ ಜನತೆ ಪ್ಯಾಕ್ಸುಗಳೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ವ್ಯವಹರಿಸುತ್ತಿವೆ. ಸದಸ್ಯರು ಪ್ಯಾಕ್ಸುಗಳಲ್ಲಿ 1039 ಕೋಟಿ ರೂ. ಠೇವಣಿ ಇರಿಸಿದ್ದಾರೆ. ಇದು ಸಂಘಗಳ ಉತ್ತಮ ಕಾರ್ಯನಿರ್ವಹಣೆಗೆ ಸಾಕ್ಷಿಯಾಗಿದೆ ಎಂದರು.
ಅಲ್ಲದೆ 214 ಸಂಘಗಳು ಲಾಭದಲ್ಲಿದ್ದು 58 ಸಂಘಗಳು ಹಾನಿಯಲ್ಲಿವೆ ಇಂತಹ ಸಂಘಗಳ ಅಭಿವೃದ್ದಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ತೀವ್ರವಾಗಿ ಶ್ರಮಿಸುತ್ತಲಿದೆ ಎಂದು ತಿಳಿಸಿದರು.
ಸಮಾರಂಭದ ದಿವ್ಯ ಸಾನಿದ್ಯ ವಹಿಸಿದ್ದ ಆಲಗೂರು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಡಾ.ಮಹಾದೇವ ಶ್ರೀಗಳು ಮಾತನಾಡಿ, ಸಹಕಾರ ಸಂಘಗಳು ಗ್ರಾಮಿಣ ಸಂಸ್ಥೆಗಳಾಗಿದ್ದು ಗ್ರಾಮಸ್ಥರಿಂದಲೆ ಸ್ಥಾಪಿತಗೊಂಡಿವೆ. ಸದರಿ ಸಂಸ್ಥೆಗಳು ಸಹಕಾರ ತತ್ವಗಳಿಗೆ ಅನುಗುಣವಾಗಿ ವಿಸ್ವಾಸ, ನಂಬಿಕೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಹೆಚ್ಚಿನ ಪ್ರಗತಿ ಹೊಂದಲಿ ಆಶಿಸಿದರು.
ಸಂಘದ ಅಧ್ಯಕ್ಷೆ ಕಸ್ತೂರಿಬಾಯಿ ಸಂ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ತಾನಾಜಿ ನಾಗರಾಳ, ಸಿದ್ದನಗೌಡ ಬ. ಪಾಟಿಲ, ಬಾವುರಾವ ಕುಲಕರ್ಣಿ, ಗುರನಗೌಡ ಬಿರಾದಾರ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಡಿಜಿಎಂ ಪಿ.ವಾಯ್.ಡಿಂಗಿ, ಎಸ್.ಬಿ.ಹೊಸಮನಿ, ಸಹಕಾರ ಅಭಿವೃದ್ದಿ ಅಧಿಕಾರಿ ಶ್ರೀಶೈಲ ಹಂಗರಗಿ ವೇದಿಕೆ ಮೇಲಿದ್ದರು.
ಗುರನಗೌಡ ಬಿರಾದಾರ ಪ್ರಾಸ್ಥಾವಿಕ ಮಾತನಾಡಿದರೆ, ಸಂಗನಗೌಡ ಬಿರಾದಾರ ಸ್ವಾಗತಿಸಿದರು.