ತಳವಾರ, ಪರಿವಾರ, ಸಿದ್ಧಿ ಜನಾಂಗ ಎಸ್.ಟಿಗೆ : ಸಂಸತ್ತಿನಲ್ಲಿ ಅಂಗೀಕಾರಕ್ಕೆ ಕೇಂದ್ರ ಸಚಿವರ ಸಂತಸ

ತಳವಾರ, ಪರಿವಾರ, ಸಿದ್ಧಿ ಜನಾಂಗ ಎಸ್.ಟಿಗೆ : ಸಂಸತ್ತಿನಲ್ಲಿ ಅಂಗೀಕಾರಕ್ಕೆ ಕೇಂದ್ರ ಸಚಿವರ ಸಂತಸ

ಬೆಂಗಳೂರು, ಫೆ, 12 ,ರಾಜ್ಯದ ಬುಡಕಟ್ಟು ಸಮುದಾಯದ ಪರಿವಾರ, ತಳವಾರ ಹಾಗೂ ಸಿದ್ದಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವುದಕ್ಕೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.ಕೇಂದ್ರ ಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ಈ ಕುರಿತು ಟ್ವೀಟ್ ಮಾಡಿದ್ದು, ಇದು ಹಲವು ದಶಕಗಳ ಬೇಡಿಕೆಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಅದನ್ನು ಈಡೇರಿಸಿದೆ. ಇದಕ್ಕಾಗಿ ಪ್ರಧಾನಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. 

ಕೇಂದ್ರ ಸಚಿವ ಡಿ.ವಿ.ಸದಾನಂದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ, ಈ ಮಸೂದೆ ರಾಜ್ಯಸಭೆಯಲ್ಲಿ ಮೊದಲೇ ಅಂಗೀಕಾರಗೊಂಡಿತ್ತು. ಈಗ ಸಂಸತ್ತಿನ ಅಂಗೀಕಾರದೊಂದಿಗೆ ಈ ಸಮುದಾಯಗಳ ಮೂರುವರೆ ದಶಕಗಳ ಕನಸು ನನಸಾಗುವ ಕಾಲ ಕೂಡಿ ಬಂದಿದೆ ಎಂದು ಟ್ವಿಟ್ ಮಾಡಿದ್ದಾರೆ. 

ಮಸೂದೆಗೆ ಸಂಸತ್‌ನ ಅನುಮೋದನೆ ದೊರೆತ ನಂತರ ರಾಜ್ಯದ ಪರಿವಾರ ಮತ್ತು ತಳವಾರ ಸಮುದಾಯದ ಮುಖಂಡರು ದಿಲ್ಲಿಯಲ್ಲಿ ನಿನ್ನೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವರು, ಇದು ನಾವೆಲ್ಲ ಸೇರಿ ನಡೆಸಿದ ಸಾಂಘಿಕ ಪ್ರಯತ್ನಕ್ಕೆ ಸಿಕ್ಕ ಫಲ. ಈ ಸಂದರ್ಭದಲ್ಲಿ ನಾವು ದಿವಂಗತ ಅನಂತಕುಮಾರ್ ಅವರನ್ನು ಸ್ಮರಿಸಲೇಬೇಕು ಎಂದು ಹೇಳಿದರು.