ಮಲೆನಾಡ ಸೊಗಡಿನ 'ಉಗ್ರ ತಾಂಡವ' ಟೀಸರ್ ಬಿಡುಗಡೆ
ಯುವ ಪ್ರತಿಭೆಗಳ ಆ್ಯಕ್ಷನ್, ಡ್ರಾಮಾ ಚಿತ್ರಕ್ಕೆ ಸಮಾಜ ಸೇವಕ, ಡಾ.ಎನ್. ನರಸಿಂಹಮೂರ್ತಿ ನಿರ್ಮಾಪಕರಾಗಿ ಎಂಟ್ರಿ.
ಸುರಭಿ ಫಿಲ್ಮಸ್ ಬ್ಯಾನರ್ನಲ್ಲಿ ಸಮಾಜ ಸೇವಕ, ರಿಯಲ್ ಎಸ್ಟೇಟ್ ಉದ್ಯಮಿ ಡಾಕ್ಟರ್ ಎನ್. ನರಸಿಂಹಮೂರ್ತಿ ನಿರ್ಮಾಣ ಮಾಡುತ್ತಿರುವ 'ಉಗ್ರ ತಾಂಡವ' ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಗೌತಮ ಸೂರ್ಯ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕನಾಗಿ ಚಿರಂತ್ ನಟಿಸುತ್ತಿದ್ದಾರೆ. ಮಲೆನಾಡ ಸೊಗಡಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಶೂಟಿಂಗ್ ಇನ್ನಷ್ಟೇ ಶುರುವಾಗಬೇಕಾಗಿದೆ. ಕರಾವಳಿಯಲ್ಲಿ ನಡೆಯುವ ರಾಜಕೀಯ, ಮಾಫಿಯಾ ಹಾಗೂ ಜಮೀನ್ದಾರ-ಕಾರ್ಮಿಕರ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ.
ಟೀಸರ್ ಬಿಡುಗಡೆ ನಂತರ ಮಾತನಾಡಿದ ನಿರ್ಮಾಪಕ ನರಸಿಂಹಮೂರ್ತಿ, 'ಟೀಸರ್ ನೋಡಿದಾಗ ರಿಸಲ್ಟ್ ಸಿಕ್ಕಿತು. ತುಂಬಾ ಚೆನ್ನಾಗಿ ಟೀಸರ್ ಶೂಟ್ ಮಾಡಿದ್ದಾರೆ. ಹಾಗಾಗಿ ಸಿನಿಮಾ ಕೂಡ ಚೆನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಇದು ಹಳ್ಳಿಯಲ್ಲಿ ನಡೆಯುವ ಕತೆ. ಅಲ್ಲಿಯ ಮೇಲು, ಕೀಳು, ರಾಜಕೀಯ ಹಾಗೂ ಒಬ್ಬ ವ್ಯಕ್ತಿಗೆ ಅನ್ಯಾಯ ಆದಾಗ ಹೇಗೆ ಸಿಡಿದೆದ್ದು ನಿಲ್ಲುತ್ತಾನೆ ಎಂಬುದು ಸಿನಿಮಾದ ಸಾರಾಂಶ. ಈ ತಂಡ ಶ್ರಮದಿಂದ ಸಿನಿಮಾ ಮಾಡುತ್ತಿದ್ದಾರೆ' ಎನ್ನುವರು. 'ನನಗೆ ಸಿನಿಮಾ ನಂಟಿನ ಬಗ್ಗೆ ಹೇಳುವುದಾದರೆ 80-90ರ ದಶಕದಲ್ಲಿ ಸಮುದಾಯ ನಾಟಕ ಕಲಾವಿದನಾಗಿ ನಟಿಸಿದ್ದೆ. ಆ ನಂಟಿನಿಂದ ಈಗ ಮತ್ತೆ ಸಿನಿಮಾ ಮಾಡುವಂತೆ ಆಯ್ತು. ಇದು ನನ್ನ ನಿರ್ಮಾಣದ ಎರಡನೇ ಸಿನಿಮಾ. ಈ ಮೊದಲು ಒಂದು ಚಿತ್ರ ಮಾಡಲು ಹೋಗಿ ಕಾರಣಾಂತರಗಳಿಂದ ಅರ್ಧಕ್ಕೆ ನಿಂತಿದೆ. ಮುಂದಿನ ದಿನಗಳಲ್ಲೂ ಒಳ್ಳೆಯ ಸಿನಿಮಾಗಳನ್ನು ಮಾಡುವ ಪ್ಲ್ಯಾನ್ ಇದೆ. ಹಲವು ವಿಭಾಗದಲ್ಲಿ ಸಾಧನೆ ಮಾಡಿದ್ದು, ಈಗ ಚಿತ್ರರಂಗಕ್ಕೆ ಸಾಧನೆ ಮಾಡಲು ಬಂದಿದ್ದೇನೆ' ಎಂದು ನರಸಿಂಹಮೂರ್ತಿ ತಿಳಿಸಿದರು.
ನಂತರ ಚಿತ್ರದ ನಾಯಕ ಚಿರಂತ್ ಮಾತನಾಡಿ, 'ನಾನು ಈ ಮೊದಲು ಆತ್ಮ ಸಿನಿಮಾ ಮಾಡಿದ್ದೆ. ಇದು ಎರಡನೇ ಸಿನಿಮಾ. ಕಥೆ ಮಾಡುವಾಗ ರಾಜಕೀಯ ಬ್ಯಾಗರೌಂಡ್ ನಲ್ಲಿ ಮಾಡಬೇಕು ಎಂದು ಹೊರಟಿದ್ದೇವೆ. ನಂತರ ಜಾತಿಯ ಒಂದು ಎಳೆ ಇಟ್ಟುಕೊಂಡು ಕಥೆ ಮಾಡಿದ್ವಿ. ನಮ್ಮ ಸಮಾಜದಲ್ಲಿ ನಡೆಯುವ ಕಥೆಯೇ ಚಿತ್ರದಲ್ಲಿ ಇರಲಿದೆ. ಅದರಲ್ಲೂ ಮಲೆನಾಡಿನಲ್ಲಿ ನಡೆವ ಜಮೀನ್ದಾರರ ಹಾಗೂ ಕಾರ್ಮಿಕರ ನಡುವೆ ನಡೆಯುವ ಕಥೆಯನ್ನು ಆ್ಯಕ್ಷನ್, ಡ್ರಾಮಾ ಮೂಲಕ ಹೇಳ ಹೊರಟಿದ್ದೇವೆ. ಇದೇ ನವೆಂಬರ್ ನಿಂದ ಶೂಟಿಂಗ್ ಶುರು ಮಾಡುತ್ತೇವೆ' ಎಂದರು. ರಾಣೆಬೆನ್ನೂರು ಮೂಲದ ಜಾಯಕಿ ಸೋನಾ ಲಾದ್ವಾ, 'ನಂಗೆ ಚಿಕ್ಕ ವಯಸ್ಸಿನಿಂದ ನಟಿ ಆಗಬೇಕು ಎಂಬ ಆಸೆ. ಈಗ ನರಸಿಂಹಮೂರ್ತಿ ಅವರ ಸಹಕಾರದಿಂದ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದೇನೆ. ಜೊತೆಗೆ ನಿರ್ಮಾಪಕರ ಮುಂದಿನ ಎರಡು ಸಿನಿಮಾಗಳಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ' ಎಂದರು. ಮತ್ತೋರ್ವ ನಟಿಯಾಗಿ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿದ್ದಾರೆ ಮಧುಬಾಲಾ. ಜೊತೆಗೆ ಹುಬ್ಬಳ್ಳಿ ಮೂಲದ ಅಶ್ವಿನಿ ಎಸ್. ರೀಲ್ಸ್ ಮಾಡುವ ಮಾಡೆಲ್ ಹುಡುಗಿ ಪಾತ್ರ ಮಾಡುತ್ತಿದ್ದಾರೆ. ಇವರ ಜೊತೆ ಕಿರಣ್ ಕೂಡ ತಾರಾಗಣದಲ್ಲಿ ಇದ್ದಾರೆ. ಹಿರಿಯ ನಿರ್ದೇಶಕರಾದ ದಿನೇಶ್ ಬಾಬು, ಪಿ. ವಾಸು ಮುಂತಾದವರ ಜೊತೆ ಕೆಲಸ ಮಾಡಿರುವ ಗೌತಮ್ ಸೂರ್ಯ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಶ್ರೀ ಸುರೇಶ್ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರದ ಸಹ ನಿರ್ಮಾಪಕರಾಗಿ ಸಂಜಯ್ ಹಾಗೂ ಭುವನ್ ಸಾಥ್ ನೀಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 