ಉಚಲ್ಯಾ : ಶೋಷಿತ ಸಮುದಾಯದ ಆತ್ಮಕಥೆ : ಶ್ವೇತಾ ಬಾಳಿ
ಹಂಪಿ 25: ಹುಟ್ಟಿನಿಂದ ಯಾರು ಅಪರಾಧಿಗಳಾಗುವುದಿಲ್ಲ. ಸಮಾಜವು ಅವರನ್ನು ಕಾಣುವ ಹಾಗೂ ವ್ಯವಹರಿಸುವ ರೀತಿಯಿಂದ ಬೇಸತ್ತ ಬುಡಕಟ್ಟು ಸಮುದಾಯಗಳು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಅಪರಾಧಗಳಂತ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವು. ಅಂತಹವುದೇ ಒಂದು ಸಮುದಾಯ ಉಚಲ್ಯಾ ಸಮುದಾಯ. ಲಕ್ಷಣ್ ಗಾಯಕವಾಡ ಅವರು ರಚಿಸಿದ ಈ ಕೃತಿಯೂ ಕೇವಲ ಅವರ ಆತ್ಮಕಥೆ ಆಗಿರದೆ ಸಮುದಾಯದ ಆತ್ಮಕಥೆ ಆಗಿದೆ ಎಂದು ಭಾಷಾಂತರ ಅಧ್ಯಯನ ವಿಭಾಗದ ಸಂಶೋಧಕರಾದ ಶ್ವೇತಾ ಬಾಳಿ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಸಮಾಜಮುಖಿ ತಿಂಗಳ ಮಾತು-5ರ ಕಾರ್ಯಕ್ರಮದಲ್ಲಿ ಉಚಲ್ಯಾ : ಸಾಮಾಜಿಕ ಕಥನ ವಿಷಯದ ಕುರಿತು ಮಾತನಾಡಿದರು. ಹಸಿವು, ಬಡತನ, ತಮ್ಮ ಸಮುದಾಯಕ್ಕೆ ಅಂಟಿಕೊಂಡಿರುವ ಅಪರಾಧಿ ಎಂಬ ಹಣೆಪಟ್ಟಿ ಹಾಗೂ ತಮ್ಮ ಮೇಲಾಗುವ ಉಳ್ಳವರ ಶೋಷಣೆ ಬಗ್ಗೆ ಕೃತಿಯುದ್ದಕ್ಕೂ ಲೇಖಕರು ಪ್ರಶ್ನಿಸುತ್ತಾ ಹೋಗುತ್ತಾರೆ. ಶಕ್ತರಾದರೂ ಶಿಕ್ಷಣದ ಕೊರತೆಯಿಂದ ಸಮುದಾಯದ ಶೋಷಣೆ ಹೇಳಿಕೊಳ್ಳಲು ಸಾಧ್ಯವಾಗಿಲ್ಲ. ಉಚಲ್ಯಾ ಸಮುದಾಯವು ಬ್ರಿಟಿಷ್ ಆಡಳಿತದಲ್ಲಿ, ರಜಾಕಾರರ ಆಡಳತದಲ್ಲಿ ಹಲವು ಬಗೆಯಲ್ಲಿ ತೊಂದರೆಗಳನ್ನು ಅನುಭವಿಸಿದ್ದಾರೆ. ಲೇಖಕರು ಹುಟ್ಟಿನಿಂದ ಯುವಕನಾಗುವವರೆಗೆ ಒಂದು ಬಗೆಯಲ್ಲಿ ಕಾರ್ಮಿಕ ವಲಯದಲ್ಲಿ ಹಾಗೂ ಕಾರ್ಖಾನೆಯಲ್ಲಿ ಶೋಷಣೆಗೆ ಒಳಗಾಗಿದ್ದರು. ಸಮಕಾಲೀನ ಸಂಧರ್ಭದಲ್ಲಿ ಈ ಸಮುದಾಯಗಳನ್ನು ಮೇಲೆತ್ತಲು ಸರ್ಕಾರ ಮತ್ತು ಸರಕಾರೇತರ ಸಂಸ್ಥೆಗಳು ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಯರಿ್ರಸ್ವಾಮಿ ಈ., ಮುಖ್ಯಸ್ಥರು ಸಮಾಜಶಾಸ್ತ್ರ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ಮಾತನಾಡುತ್ತಾ, ತಳ ಸಮುದಾಯಗಳಿಗೆ ಶಿಕ್ಷಣ ದೊರೆತರೂ ಸ್ವಾತಂತ್ರ ದೊರೆತಿದೆ ಎನ್ನಲು ಸಂಪೂರ್ಣ ಸಾಧ್ಯವಿಲ್ಲ. ಜಾತಿ ಕಾರಣದಿಂದ ದೇಶದಲ್ಲಿ ಅಪೌಷ್ಟಿಕತೆ, ಜಾತಿ ಕಾರಣದಿಂದ ಆಹಾರ ವಿಂಗಡಣೆ ಹೀಗೆ ಆಹಾರ, ಶಿಕ್ಷಣ, ಆದಾಯ, ಸಂಪನ್ಮೂಲ ಎಲ್ಲದರಲ್ಲೂ ತಳ ಸಮುದಾಯಗಳ ಬಳಕೆಗೆ ಸ್ವತಂತ್ರ ಇಲ್ಲ ಎಂದರು.
ಕನ್ನಡ ಭಾಷಾಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಪಿ. ಮಹಾದೇವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಅಪರಾಧಿ ಬುಡಕಟ್ಟುಗಳೆಂದು ಹಣೆಪಟ್ಟಿ ಧರಿಸಿದ ಸಮುದಾಯಗಳಿಗೆ ಪ್ರಾಮಾಣಿಕವಾಗಿ ಬದುಕಬೇಕು ಎನಿಸಿದರೂ ಸಮಾಜ ಅದಕ್ಕೆ ಅವಕಾಶವನ್ನು ನೀಡಿಲ್ಲ ಎಂದರು. ಸರಿ ದಾರಿಗೆ ತರಬೇಕಾದ ವ್ಯವಸ್ಥೆಯು ಈ ಸಮುದಾಯಗಳನ್ನು ಅದೇ ಸ್ಥಾನದಲ್ಲಿರಿಸಲು ಬಯಸುತ್ತದೆ. ಈ ಬುಡಕಟ್ಟು ಸಮುದಾಯಗಳು ಅಳಿದರೆ ಲೋಕದೃಷ್ಟಿ, ತಿಳುವಳಿಕೆ ಮತ್ತು ಸಮುದಾಯದ ಅಸ್ಮಿತೆ ನಾಶವಾಗುತ್ತದೆ. ಇದನ್ನು ಉಳಿಸುವ ಕಾರ್ಯ ಆಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಮಾಜಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಹನುಮಂತ ನಿರೂಪಿಸಿದರು. ಎಸ್.ಜ್ಯೋತಿ ಸಮಾಜಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಸ್ವಾಗತಿಸಿದರು. ತಿಪ್ಪೇಸ್ವಾಮಿ ವಂದಿಸಿದರು.