ನದಿ ದಾಟುವಾಗ ನದಿಗೆ ಉರುಳಿದ ಟ್ರ್ಯಾಕ್ಟರ್

ನದಿ ದಾಟುವಾಗ ನದಿಗೆ ಉರುಳಿದ ಟ್ರ್ಯಾಕ್ಟರ್ Tractor falls into river while crossing


ಜಮಖಂಡಿ 08: ತಾಲೂಕಿನ ಕಂಕಣವಾಡಿ ಗ್ರಾಮದ ಕೃಷ್ಣಾ ನದಿಯಲ್ಲಿ ಕಬ್ಬು ತುಂಬಿದ ಎರಡು ದೋಣಿಯಲ್ಲಿ ಟ್ರ್ಯಾಕ್ಟರ್ ತುಂಬಿಸಿಕೊಂಡು ನದಿಯನ್ನು ದಾಟುವ ಸಮಯದಲ್ಲಿ ದೋಣಿಯೊಂದು ನದಿಗೆ ಉರುಳಿದೆ. 

ಕಂಕಣವಾಡಿ ಗ್ರಾಮದ ಗುಹೇಶ್ವರ ನಡುಗಡ್ಡೆ ಪ್ರದೇಶದಲ್ಲಿ ಬೆಳೆದ ಕಬ್ಬಿನ ಬೆಳೆಯನ್ನು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಲು ರೈತರು ಪ್ರತಿವರ್ಷ ಹರಸಾಹಸ ಪಡಬೇಕಾಗುತ್ತದೆ. ಪರ್ಯಾಯ ಮಾರ್ಗವಿಲ್ಲದೇ ರೈತರು ಬೋಟ್ (ದೋಣಿ)ಗಳ ಸಹಾಯದಿಂದ ಕಬ್ಬನ್ನು ಸಾಗಿಸುತ್ತ ಬಂದಿದ್ದಾರೆ. ಹೀಗೆ ಸಾಗಿಸುವಾಗ ಕಬ್ಬು ತುಂಬಿದ ದೋಣಿಯೊಂದು ನದಿಗೆ ಉರುಳಿದೆ. ಇಲ್ಲಿಯ ರೈತರು ಕಬ್ಬನ್ನು ಸಾಗಿಸಲು ಎರಡು ಬೋಟ್‌ಗಳನ್ನು ಜೋಡಿಸಿಕೊಂಡು ಅದರಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಅಥವಾ ಲಾರಿಯನ್ನು ಹತ್ತಿಸಿಕೊಂಡು ನದಿಯನ್ನು ದಾಟಿಸುತ್ತಾರೆ. ರೈತರ ಪಾಲಿಗೆ ಇದೊಂದು ಹರಸಾಹಸವೇ ಆಗಿದೆ. 

ಕಬ್ಬು ತುಂಬಿದ ಟ್ಯ್ರಾಕ್ಟರನ್ನು ಸಾಗಿಸುತ್ತಿದ್ದ ಬೋಟ್ ಹಾನಿಗೊಳಗಾದ ಪರಿಣಾಮ ಕಬ್ಬು ತುಂಬಿದ ಟ್ರ್ಯಾಕ್ಟರ್ ನೀರಿನಲ್ಲಿ ಮುಳುಗಿ ಹೋಗಿದ್ದು, ಕಬ್ಬು ಬೆಳೆದ ರೈತನಿಗೆ ಸಾಕಷ್ಟು ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. 

ಕಂಕಣವಾಡಿ ಗ್ರಾಮದ ಗುಹೇಶ್ವರ ನಡುಗಡ್ಡೆ ಸಂಪರ್ಕಕ್ಕೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಕೃಷ್ಣಾ ಮೋಲ್ದಂಡೆ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸುವ ಮೂಲಕ ಮುಳುಗಡೆಯ ಪರಿಹಾರ ಸಂದಾಯ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.