ಗಡ್ಚಿರೋಳಿ ಆಶ್ರಮ ಶಾಲೆಯಲ್ಲಿ ಹಾವು ಕಡಿತಕ್ಕೆ ಮೂವರು ವಿದ್ಯಾರ್ಥಿನಿಯರು ಬಲಿ; ಮೂವರ ಸ್ಥಿತಿ ಗಂಭೀರ

ಗಡ್ಚಿರೋಳಿ ಆಶ್ರಮ ಶಾಲೆಯಲ್ಲಿ ಹಾವು ಕಡಿತಕ್ಕೆ ಮೂವರು ವಿದ್ಯಾರ್ಥಿನಿಯರು ಬಲಿ; ಮೂವರ ಸ್ಥಿತಿ ಗಂಭೀರ Three Tribal Girl Students Die of Snakebite at Gadchiroli Ashram School, Three Others Critical

ಗಡ್ಚಿರೋಳಿ, ಆ. 10 : ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯ ಸರ್ಕಾರಿ ಆಶ್ರಮ ಶಾಲೆಯೊಂದರಲ್ಲಿ ಹಾವು ಕಡಿತಕ್ಕೆ ಒಳಗಾಗಿ ಮೂವರು ಬುಡಕಟ್ಟು ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಧನೋರಾ ತಾಲ್ಲೂಕಿನ ಜಪ್ತಲಾಯಿ ಗ್ರಾಮದ ವಸತಿ ಆಶ್ರಮ ಶಾಲೆಯ ಹಾಸ್ಟೆಲ್‌ನಲ್ಲಿ ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಊಟದ ಬಳಿಕ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಮಲಗಿದ್ದ ವೇಳೆ ಘಟನೆ ಸಂಭವಿಸಿದೆ.

ಸುಮಾರು ಬೆಳಗಿನ ಜಾವ 2ರಿಂದ 2.30ರ ವೇಳೆಗೆ ಹಾವು ಕಡಿತಕ್ಕೊಳಗಾದ ಬಳಿಕ ವಿದ್ಯಾರ್ಥಿನಿಯರು ಅಸ್ವಸ್ಥತೆ ಕುರಿತು ದೂರು ನೀಡಿದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.

6ನೇ ತರಗತಿ ವಿದ್ಯಾರ್ಥಿನಿ ದೀಪಿಕಾ ಲಕ್ಡಾ ಹಾಗೂ 8ನೇ ತರಗತಿ ವಿದ್ಯಾರ್ಥಿನಿ ಸುಷ್ಮಿತಾ ಮಂಡಲ್ ಅವರು ಧನೋರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.

2ನೇ ತರಗತಿ ವಿದ್ಯಾರ್ಥಿನಿ ಅನು ಕೊರೇಟಿ ಅವರು ಗಡ್ಚಿರೋಳಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.

ಇನ್ನು 5ನೇ ತರಗತಿ ವಿದ್ಯಾರ್ಥಿನಿ ದೀಪಿಕಾ ಮಾದವಿ, 6ನೇ ತರಗತಿ ವಿದ್ಯಾರ್ಥಿನಿ ಕವಿತಾ ಕಿರಂಗಾ ಹಾಗೂ 8ನೇ ತರಗತಿ ವಿದ್ಯಾರ್ಥಿನಿ ಸಮೃದ್ಧಿ ಸುರೇಶ್ ನೈತಮ್ ಅವರು ಗಡ್ಚಿರೋಳಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಸಮೃದ್ಧಿ ನೈತಮ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆ ಆಶ್ರಮ ಶಾಲೆಯ ಹಾಸ್ಟೆಲ್‌ನಲ್ಲಿನ ಸುರಕ್ಷತಾ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಸ್ಟೆಲ್‌ನಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ಕೆಲವು ವಿದ್ಯಾರ್ಥಿಗಳು ನೆಲದ ಮೇಲೆಯೇ ಮಲಗಿದ್ದರು ಎಂದು ವರದಿಗಳು ತಿಳಿಸಿವೆ.

ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.