ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಮೂವರು ಸಾವು, ಇಬ್ಬರಿಗೆ ಗಾಯ

ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಮೂವರು ಸಾವು, ಇಬ್ಬರಿಗೆ ಗಾಯ Three Killed, Two Injured as Car Rams Stationary Lorry in Telangana

ಕರೀಂನಗರ, ಸೆ. 18 : ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ತೆಲಂಗಾಣದ ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ಮಂಡಲದ ತಡಿಕಲ್‌ನಲ್ಲಿ ನಡೆದಿದೆ.

ಪೊಲೀಸರ ಪ್ರಕಾರ, ಕಾರಿನಲ್ಲಿದ್ದ ಐವರು ರಾಷ್ಟ್ರೀಯ ಹೆದ್ದಾರಿ-563ರ ಮೂಲಕ ನಿಜಾಮಾಬಾದ್‌ನಿಂದ ವಾರಂಗಲ್‌ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ತಡಿಕಲ್ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ.

ಮೃತರನ್ನು ವಾರಂಗಲ್‌ನ ವಿಶ್ವೇಶ್ವರ ರಾವ್ ಹಾಗೂ ನಿಜಾಮಾಬಾದ್‌ನ ಪ್ರಭು ಮತ್ತು ಶುಧಕರ್ ಎಂದು ಗುರುತಿಸಲಾಗಿದೆ. ಇವರು ನಿಜಾಮಾಬಾದ್ ಜಿಲ್ಲೆಯ ದಿಚ್‌ಪಲ್ಲಿ ಮಂಡಲದ ಯಾನಂಪಲ್ಲಿಯ 400 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಗಾಯಗೊಂಡಿರುವ ಪ್ರವೀಣ್ ಮತ್ತು ಮುರಳ್ ಅವರನ್ನು ಚಿಕಿತ್ಸೆಗಾಗಿ ಕರೀಂನಗರ ಸರ್ಕಾರಿ ಪ್ರಧಾನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.