ಸಿರಸಂಗಿ ಲಿಂಗರಾಜರು ಶಿಕ್ಷಣಕ್ಕಾಗಿ ಮಾಡಿದ ತ್ಯಾಗ ಚಿರಸ್ಥಾಯಿಯಾಗಿದೆ: ಡಾ.ಡಿ.ಕೆ.ಗಾಂವಕರ
The sacrifices made by Sirsangi Lingaraj for education are eternal: Dr. D.K. Gaonkar
ಬೆಳಗಾವಿ 10: ಸಮಾಜದ ಕಲ್ಯಾಣಕ್ಕೆ ಶಿಕ್ಷಣವೇ ಮೂಲವೆಂದು ತಿಳಿದ ಲಿಂಗರಾಜರು ತಮ್ಮ ಇಡೀ ಸಂಪತ್ತನ್ನು ಶಿಕ್ಷಣಕ್ಕೆ ಮೀಸಲಾಗಿಟ್ಟಿದ್ದು ಭಾರತದ ಚರಿತ್ರೆಯಲ್ಲಿಯೇ ಅಪರೂಪವೆನಿಸಿದೆ. ಸಮಾಜದ ಸುಖವೇ ತನ್ನ ಸುಖವೆಂದು ಎಲ್ಲವನ್ನೂ ಧಾರೆ ಎರೆದ ಲಿಂಗರಾಜರು ಇಂದಿಗೂ ಅಮರರೆನಿಸಿದ್ದಾರೆ ಎಂದು ಯಲ್ಲಾಪುರ ವಿಶ್ವದರ್ಶನ ಪಪೂ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಕೆ.ಗಾಂವಕರ ಹೇಳಿದರು. ಅವರು ಲಿಂಗರಾಜ ಕಾಲೇಜಿನಲ್ಲಿ ಬೆಳಗಾವಿಯ ಎಲ್ಲ ಕೆಎಲ್ಇ ಅಂಗಸಂಸ್ಥೆಯ ಆಶ್ರಯದಲ್ಲಿ ಜರುಗಿದ ಸಿರಸಂಗಿ ಲಿಂಗರಾಜರ 165ನೇ ಜಯಂತಿ ಉತ್ಸವದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಹಾಗೂ ಲಿಂಗರಾಜರು ಅಲ್ಪಾವಧಿಯಲ್ಲಿ ನಮ್ಮನ್ನಗಲಿದರೂ ಲೋಕದಲ್ಲಿ ಅಮರವಾಗಿ ಉಳಿಯುವಂತ ಕಾರ್ಯಮಾಡಿದರು. ಲಿಂಗರಾಜರು ಸಮಾಜದ ಉದಾತ್ತ ಉದ್ದೇಶಕ್ಕಾಗಿ ಮಹಾದಾನ ನೀಡಿ ಓದಾರ್ಯವನ್ನು ಮೆರೆದಿದ್ದಾರೆ. ಅವರ ಬದುಕು ಸುಖದ ಸುಪತ್ತಿಕೆಯಾಗಿರಲಿಲ್ಲ. ಕೌಟುಂಬಿಕವಾಗಿ ಬವಣೆಗಳಿಂದ ನೊಂದುಕೊಂಡರು. ನೂರೆಂಟು ಕಷ್ಟಗಳನ್ನು ಎದುರಿಸಿದರು. ಜೀವನದ ಕೊನೆಗೆ ತಮ್ಮ ಸಮಸ್ತ ಚಿರಾಸ್ಥಿಯನ್ನು ಸಮಾಜದ ಮಕ್ಕಳ ಕಲ್ಯಾಣಕ್ಕಾಗಿ ಸಮರ್ಿಸಿದರು. ಕೃಷಿ, ನೀರಾವರಿ ಮೊದಲ್ಗೊಂಡು ಹಲವಾರು ಮೌಲಿಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂತಹ ಪ್ರಾಥಃಸ್ಮರಣೀಯರು ಇಂದಿನ ಯುವ ಪೀಳಿಗೆಗೆ ಅನುಕರಣೀಯರು. ಇಂದು ಕೆಎಲ್ಇಯ ಎಲ್ಲ ಅಂಗಸಂಸ್ಥೆಗಳಲ್ಲಿ ಅವರ ಜಯಂತಿಯನ್ನು ಆಚರಿಸಿ ಮಕ್ಕಳಲ್ಲಿ ಅವರ ದಾನದ, ತ್ಯಾಗದ ಕುರಿತು ಹೇಳುತ್ತಿರುವುದು ಅಭಿನಂದನೀಯವೆನಿಸಿದೆ ಎಂದರು.
ದಿವ್ಯ ಸಾನ್ನಿಧ್ಯವಹಿಸಿದ್ದ ಶೇಗುಣಸಿ ವಿರಕ್ತಮಠದ ಪೂಜ್ಯ ಮಹಾಂತಪ್ರಭು ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಲಿಂಗರಾಜರಂತಹ ಪುಣ್ಯಾತ್ಮರನ್ನು ಸ್ಮರಿಸುವುದು ನಿಜಮುಕ್ತಿ ಇದ್ದಂತೆ. ಲಿಂಗರಾಜರು ತಮ್ಮ ಜನಮುಖಿಯಾದ ಸೇವೆಗಳಿಂದ ಅಮರತ್ವವನ್ನು ಪಡೆದರು. ಸಮಸ್ತ ನಾಡಿಗೆ ಅವರು ನೀಡಿದ ಕೊಡುಗೆ ಅನನ್ಯ ಅನುಪಮ. ಅವರಂತಹ ದಾನಿಗಳು ಯುಗಯುಗಳು ಕಳೆದರೂ ಬರುವುದು ದುರ್ಲಭ. ಲಿಂಗರಾಜರು ದಾನ ಅಷ್ಟೇ ಅಲ್ಲದೆ ಬದುಕಿನುದ್ದಕ್ಕೂ ಅನೇಕ ಜನೋಪಯೋಗಿ ಕಾರ್ಯಗಳನ್ನು ನಿರ್ವಹಿಸಿದರು. ಲಿಂಗರಾಜರ ತ್ಯಾಗದಲ್ಲಿ ಒಂದು ವೈಶಿಷ್ಟ್ಯವುಂಟು, ಅವರು ಸ್ವಾರ್ಥವನ್ನು ಸಂಪೂರ್ಣವಾಗಿ ಮರೆತು ತಮ್ಮ ಇಡಿಯ ಆಸ್ತಿಯನ್ನು ಸಮಾಜದ ಶಿಕ್ಷಣಕ್ಕಾಗಿ ಧಾರೆಯೆರೆದರು. ಅಂತಹ ಮಹಾತ್ಮರನ್ನು ಇಂದಿನ ಯುವಪೀಳಿಗೆ ತಿಳಿದುಕೊಳ್ಳುವುದು ಅಗತ್ಯವಿದೆ. ಇಂದು ಎಐ ಯುಗ, ಕ್ರಿಯೆಟಿವ್ಹಿಡಿ ಬಹುಮುಖ್ಯ. ನಮ್ಮ ಬದುಕನ್ನು ಹೊಸತನಕ್ಕೆ ತೆರೆದುಕೊಳ್ಳಬೇಕು. ಕ್ರಿಯಾತ್ಮಕವಾದ ಬದುಕು ಹೊಸತನವನ್ನು ಕಲಿಸುತ್ತದೆ ಎಂದು ನುಡಿದರು.
ಕೆಎಲ್ಇ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿಯವರು ಅಧ್ಯಕ್ಷೀಯ ನುಡಿಗಳನ್ನಾಡಿ ಜನತೆಯ ಹಿತಕ್ಕಾಗಿ ಬದುಕಿದ ಮಹಾಚೇತನ ಸಿರಸಂಗಿ ಲಿಂಗರಾಜರು. ಸಮಾಜದ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು, ಮುಂದೆ ಬರಬೇಕು, ಬದುಕಿನ ಕಷ್ಟಗಳನ್ನು ತೊಡೆದುಹಾಕಬೇಕೆಂಬ ಸಂಕಲ್ಪದೊಂದಿಗೆ ಶಿಕ್ಷಣ ರಂಗಕ್ಕೆ ಆರ್ಥಿಕ ಮತ್ತು ಜ್ಞಾನದ ಶಕ್ತಿಯನ್ನು ತುಂಬಿದರು. ವ್ಯಕ್ತಿಯೊಬ್ಬನಿಗೆ ಕೊಡುವ ದಾನಕ್ಕಿಂತಲೂ ಶಿಕ್ಷಣ ಸಂಘ ಸಂಸ್ಥೆಗಳಿಗೆ ಕೊಡುವ ದಾನ ಶ್ರೇಷ್ಠವೆಂದು ತಿಳಿದರು. ಸಮಾಜಕ್ಕೆ ಪ್ರೇರಕರಾದರು. ಅವರ ಇಚ್ಛೆಯಂತೆ ಪ್ರಾರಂಭವಾದ ‘ಸಿರಸಂಗಿ ನವಲಗುಂದ ಟ್ರಸ್ಟ್’ ಸಾವಿರಾರೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನಸಹಾಯ ಇಂದಿಗೂ ನೀಡುತ್ತಿದೆ. ಇಂತಹ ತ್ಯಾಗವೀರ ಸಿರಸಂಗಿ ಲಿಂಗರಾಜರ ವ್ಯಕ್ತಿತ್ವಕ್ಕೆ ಮಾರುಹೋದ ನಮ್ಮ ಕೆಎಲ್ಇ ಸಂಸ್ಥೆಯ ಏಳು ಜನ ಶಿಕ್ಷಕರು ಅವರ ಆದರ್ಶವನ್ನೇ ಇಟ್ಟುಕೊಂಡು 1916 ರಲ್ಲಿ ಕೆಎಲ್ಇ ಸಂಸ್ಥೆಯನ್ನು ಹುಟ್ಟುಹಾಕಿದರು. 1933ರಲ್ಲಿ ಪ್ರಥಮ ಪದವಿ ಕಾಲೇಜಿಗೆ ಲಿಂಗರಾಜರ ಮೇಲಿನ ಅಭಿಮಾನದಿಂದಾಗಿ ‘ಲಿಂಗರಾಜ ಮಹಾವಿದ್ಯಾಲಯ’ವೆಂದು ನಾಮಕರಣ ಮಾಡಿದರು ಎಂದು ಹೇಳಿದರು.
ಕೆಎಲ್ಇ ಉಪಾಧ್ಯಕ್ಷರಾದ ಬಸವರಾಜ ತಟವಟಿಯವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಎಚ್.ಎಂ. ಚೆನ್ನಪ್ಪಗೋಳ ವಂದಿಸಿದರು. ಡಾ.ಮಹೇಶ ಗುರನಗೌಡರ ಹಾಗೂ ಪ್ರೊ.ಸಿದ್ಧನಗೌಡ ಪಾಟೀಲ ನಿರೂಪಿಸಿದರು. ಪ್ರಾಚಾರ್ಯ ಡಾ.ಎಚ್.ಎಸ್. ಮೇಲಿನಮನಿ ವೇದಿಕೆಯ ಮೇಲಿದ್ದರು. ಮಾಹೇಶ್ವರ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಯಂತಿ ಉತ್ಸವದ ನಿಮಿತ್ತ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಕ್ತಭಂಡಾರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. 50ಕ್ಕೂ ಹೆಚ್ಚು ಯುನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು. ಡಾ.ಎಚ್.ಬಿ.ರಾಜಶೇಖರ, ಡಾ.ಮಹಾಂತೇಶ ರಾಮಣ್ಣವರ, ಪ್ರೊ.ಕರಡಿಗುದ್ದಿ, ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷೆ ಸುಧಾ ಉಪ್ಪಿನ, ಸದಸ್ಯರಾದ ರಾಜೇಶ್ವರಿ ಸಂಬರಗಿಮಠ, ಶ್ರೀಮತಿ ಎಫ್.ಎಂ.ಮಹಾಂತಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಲಿಂಗರಾಜ ಜಯಂತಿ ಉತ್ಸವದ ಅಂಗವಾಗಿ ಜರುಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಾಥಮಿಕ, ಮಾಧ್ಯಮಿಕ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 