ದೇವಿಯರ ಜಾತ್ರೆ ಎಂದರೆ ಸಂಭ್ರಮ, ಸಡಗರದ ಹಬ್ಬ: ಮಲ್ಲಿಕಾರ್ಜುನ ಸ್ವಾಮೀಜಿ

ದೇವಿಯರ ಜಾತ್ರೆ ಎಂದರೆ ಸಂಭ್ರಮ, ಸಡಗರದ ಹಬ್ಬ: ಮಲ್ಲಿಕಾರ್ಜುನ ಸ್ವಾಮೀಜಿ  The festival of the Goddesses is a celebration marked by joy and enthusiasm: Mallikarjuna Swamiji

ಗದಗ, ಆ.22: ಜಾತ್ರೆಗಳು ಪರಸ್ಪರ ಪ್ರೀತಿ, ಸೌಹಾರ್ದತೆ ಹಾಗೂ ಏಕತೆಯನ್ನು ಬೆಸೆಯುವ ಹಬ್ಬಗಳಾಗಿವೆ. ವಿಶೇಷವಾಗಿ ಗ್ರಾಮ ದೇವತೆಗಳ ಜಾತ್ರೆಗಳು ಸಡಗರ-ಸಂಭ್ರಮದಿಂದ ಕೂಡಿದ್ದು, ಸದ್ಗುಣಗಳ ಬೆಳವಣಿಗೆ ಹಾಗೂ ದುರ್ಗುಣಗಳ ಅವನತಿಯೇ ಜಾತ್ರೆಗಳ ಪ್ರಮುಖ ಉದ್ದೇಶವಾಗಿದೆ ಎಂದು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  

ನಗರದ ಒಕ್ಕಲಗೇರಿ ಓಣಿಯ ಉಸುಗಿನಕಟ್ಟಿ ಬಳಿ ನಡೆಯುತ್ತಿರುವ ಗದಗ-ಬೆಟಗೇರಿ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರುಗಮ್ಮ ದೇವಿಯರ ಹರಿಜಾತ್ರೋತ್ಸವದ ನಾಲ್ಕನೇ ದಿನದ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.  

ಗ್ರಾಮಗಳ ರಕ್ಷಣೆ, ಕಳ್ಳಕಾಕರ ಹಾವಳಿ ತಡೆ ಹಾಗೂ ರೋಗ-ರುಜಿನಗಳಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಹಿಂದಿನ ಕಾಲದಲ್ಲಿ ಜಾತ್ರೆಗಳು ಆರಂಭಗೊಂಡವು. ಆಧುನಿಕ ಕಾಲದಲ್ಲಿ ಜಾತ್ರೆಗಳಿಗೆ ವೈಚಾರಿಕ ಹಾಗೂ ವೈಜ್ಞಾನಿಕ ದೃಷ್ಟಿಕೋನ ದೊರೆತಿದ್ದು, ಅವುಗಳಿಗೆ ಹೊಸ ಸ್ವರೂಪ ಬಂದಿದೆ ಎಂದು ಹೇಳಿದರು.  

ಜಾತ್ರೆಗಳು ಭಕ್ತಿ, ಮಾನವೀಯ ಮೌಲ್ಯ, ಸಡಗರ ಹಾಗೂ ಸಂಭ್ರಮಕ್ಕೆ ಕಾರಣವಾಗುತ್ತವೆ. ಎಲ್ಲರ ಒಗ್ಗಟ್ಟು ಮತ್ತು ಸಹಭಾಗಿತ್ವವೇ ಜಾತ್ರೆಗಳ ಯಶಸ್ಸಿಗೆ ಕಾರಣವಾಗಿದ್ದು, ಭಕ್ತರು ಜಾತ್ರೆಗಳ ಹಿಂದಿರುವ ಮಹತ್ವವನ್ನು ಅರಿತು ನಡೆದುಕೊಳ್ಳಬೇಕು ಎಂದರು.  

ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರ​‍್ಪ ಹೆಬಸೂರ ಮಾತನಾಡಿ, ಎಂಟು ದಿನಗಳ ಕಾಲ ನಡೆಯುವ ಹರಿಜಾತ್ರೆಯಲ್ಲಿ ಸದ್ಭಕ್ತರು, ಮಹಿಳೆಯರು ಹಾಗೂ ಯುವಕರ ಸಕ್ರಿಯ ಸಹಭಾಗಿತ್ವವಿದೆ. ಮುಂದಿನ ದಿನಗಳಲ್ಲಿ ಜಾತ್ರೆಯನ್ನು ಇನ್ನಷ್ಟು ವಿಜೃಂಭಣೆಯಿಂದ ನಡೆಸಲಾಗುವುದು ಎಂದರು.  ಶ್ರೀ ಫಕ್ಕೀರೇಶ್ವರ ಮಹಾಸ್ವಾಮಿಗಳು, ಗದಗ ಆಧ್ಯಾತ್ಮ ವಿದ್ಯಾಶ್ರಮದ ಶ್ರೀ ನೀಲಮ್ಮತಾಯಿ ಅಸುಂಡಿ ಉಪಸ್ಥಿತರಿದ್ದರು. ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕೊಟ್ರ​‍್ಪ ಕಮತರ ಅಧ್ಯಕ್ಷತೆ ವಹಿಸಿದ್ದರು.  

ಮುಖ್ಯ ಅತಿಥಿಗಳಾದ ಶಂಕ್ರ​‍್ಪ ಕನೋಜ, ಐ.ಎಸ್‌. ಪೂಜಾರ, ವಸಂತ ಪಡಗದ, ಕೃಷ್ಣಾಪರಾಪೂರ, ಅಬ್ದುಲ್ ಮುನಾಫ ಮುಲ್ಲಾ, ನಗರಸಭಾ ಸದಸ್ಯ ಮಹಾಂತೇಶ ನಲವಡಿ ಸೇರಿದಂತೆ ಹಲವು ಗಣ್ಯರು ಮಾತನಾಡಿ, ದ್ಯಾಮವ್ವ ಹಾಗೂ ದುರುಗಮ್ಮ ದೇವಿಯರ ಹರಿಜಾತ್ರೋತ್ಸವದಿಂದ ಗದುಗಿನ ಕೀರ್ತಿ ಹೆಚ್ಚಾಗಿದೆ. ಜಾತ್ರೆಯ ಒಗ್ಗಟ್ಟು ಹಾಗೂ ಸಾಮಾಜಿಕ ಚಟುವಟಿಕೆಗಳು ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಲಿವೆ ಎಂದರು.  

ವಾಣಿ ಅಸುಂಡಿ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ನಂತರ ಶಂಕ್ರಣ್ಣ ಸಂಕಣ್ಣವರ ನೇತೃತ್ವದ ಅರುಣೋದಯ ಕಲಾತಂಡದಿಂದ ಜೋಗತಿ ನೃತ್ಯ ಪ್ರದರ್ಶನ ನಡೆಯಿತು. ಹಲವು ದಾನಿಗಳು, ಯುವಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.