ಕೊಚ್ಚಿ ಹೋದ ಸಂಬರಗಿ ಆಜೂರ ಮಧ್ಯದ ಸೇತುವೆ: ಭಾರಿ ಹಾನಿ

ಕೊಚ್ಚಿ ಹೋದ ಸಂಬರಗಿ ಆಜೂರ ಮಧ್ಯದ ಸೇತುವೆ: ಭಾರಿ ಹಾನಿ The bridge between Sambaragi and Azura washed away: Heavy damage

ಸಂಬರಗಿ 30: ಕಳೆದ 15 ದಿನಗಳಿಂದ ಸಾಂಗಲಿ ಸಾತಾರಾ ಕೊಲ್ಹಾಪೂರ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಗಡಿ ಭಾಗದ ಅಗ್ರಾಣಿ ನದಿ ಉಕ್ಕಿ ಹರಿದು ಕಳೆದ 4 ದಿನದಿಂದ ಸಂಪರ್ಕ ರಸ್ತೆ ಕಡಿತಗೊಂಡಿತ್ತು. ಸಂಬರಗಿ ಆಜೂರ ಮಧ್ಯ ಇರುವ ಸೇತುವೆ ಕೊಚ್ಚಿ ಹೋಗಿ ಭಾರಿ ಹಾನಿಯಾಗಿದೆ. ನೀರಿನ ಪ್ರಮಾಣ ಕಡಿಮೆಯಾಗಿ ಸಂಪರ್ಕ ರಸ್ತೆಗಳು ಪ್ರಾರಂಭವಾಗಿವೆ. ಆಜೂರ ಸಂಬರಗಿ ರಸ್ತೆ ಮಾತ್ರ ಸ್ಥಗಿತಗೊಂಡಿದೆ. 

ಕಳೆದ 10 ವರ್ಷದಿಂದ ಅಗ್ರಾಣಿ ನದಿಗೆ ಪ್ರವಾಹ ಬಂದಿದ್ದಲ್ಲ. ಈ ವರ್ಷ ಗಡಿಭಾಗದ ಗ್ರಾಮಗಳಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದರೂ ಸಹ ಮಹಾರಾಷ್ಟ್ರದ ಮಳೆಯಿಂದ ಅಗ್ರಾಣಿ ನದಿ ಉಕ್ಕಿ ಹರಿಯುತ್ತಿದೆ. ಶಿರೂರ ಖಿಳೇಗಾಂವ, ತಾಂವಶಿ ಕಲ್ಲೋತ್ತಿ, ಮಸರಗುಪ್ಪಿ ಮದಭಾವಿ, ಈ ರಸ್ತೆಗಳು ಪ್ರಾರಂಭಗೊಂಡು ವಾಹನ ಸಂಚಾರ ಸುಗಮವಾಗಿದೆ. ಅಗ್ರಾಣಿ ತೀರದಲ್ಲಿರುವ ತೆರೆದಬಾವಿ ಕೊಳವೆ ಭಾವಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಮಳೆನೀರು ಹಾಗೂ ಬಸವೇಶ್ವರ ಏತ ನೀರಾವರಿ ನೀರು ರೈತರ ಜಮೀನಿಗೆ ತಲುಪಿ ರೈತರ ಜಮೀನುಗಳು ಜಲಾವೃತಗೊಂಡಿವೆ. 

ಸಂಬರಗಿ ಆಜೂರ ಮಧ್ಯ ಇರುವ ಸೇತುವೆ ಕಾಮಗಾರಿ 1 ವರ್ಷದಲ್ಲಿ ಮುಕ್ತಾಯಗೊಳಿಸಿದರು. ಕೆಲಸದಲ್ಲಿ ಗುಣಮಟ್ಟ ಇಲ್ಲದ ಕಾರಣ ಅಗ್ರಾಣಿ ನದಿಯಲ್ಲಿ ಸೇತುವೆ ಕೊಚ್ಚಿಹೋಗಿದೆ. ಸರಕಾರಿ ಕೆಲಸ ದೇವರ ಕೆಲಸ ಎಂಬ ಗಾದೆ ಇಲ್ಲಿ ಹುಸಿಯಾದಂತೆ ಕಾಣುತ್ತಿದೆ. ಇದುವರೆಗೆ ಯಾವುದೇ ಅಧಿಕಾರಿಗಳು ಭೇಟಿಯಾಗಿಲ್ಲ ಜನರ ಸಂಪರ್ಕ ರಸ್ತೆ ಕಡಿತವಾಗಿದೆ. ಈ ಸೇತುವೆಯ ಕಾಮಗಾರಿ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ. 

ಈ ಕುರಿತು ಚಿಕ್ಕ ನೀರಾವರಿ ಅಭಿಯಂತರು ಪ್ರವೀಣ ಪಾಟೀಲ ಇವರನ್ನು ಸಂಪರ್ಕಿಸಿದಾಗ  ಈ ಸೇತುವೆ ಕಾಮಗಾರಿ ಚಿಕ್ಕ ನೀರಾವರಿ ಇಲಾಖೆಯದ್ದು. ಇದು ಕೊಚ್ಚಿಹೋದ ಬಗ್ಗೆ ಪರೀಶೀಲನೆ ಮಾಡಿ ಕ್ರಮ ಕೈಗೊಂಡು ಸೇತುವೆ ಕಾಮಗಾರಿಯನ್ನು ಅತಿವೃಷ್ಟಿ ಅನುದಾನದಿಂದ ಕೈಗೊಳ್ಳಲಾಗುವುದೆಂದು ಹೇಳಿದರು.