ಗ್ರಾಮೀಣ ಜೀವನೋಪಾಯಕ್ಕೆ ಸಂಜೀವಿನಿ ಯೋಜನೆ ಸಹಕಾರಿ

ಗ್ರಾಮೀಣ ಜೀವನೋಪಾಯಕ್ಕೆ ಸಂಜೀವಿನಿ ಯೋಜನೆ ಸಹಕಾರಿ  The Sanjeevini scheme supports rural livelihoods


ಗದಗ, ಆ.17: ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಮಹಿಳೆಯರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ ಹಾರೋಗೇರಿ ಹೇಳಿದರು.  

ತಾಲೂಕಿನ ಹುಲಕೋಟಿಯ ಸ್ವಯಂಸಿದ್ಧಿ ಭವನದಲ್ಲಿ ಶನಿವಾರ ನಡೆದ ತಾಲೂಕು ಜೀವನೋಪಾಯ ಸೇವಾ ಕೇಂದ್ರದ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಜೊತೆಗೆ ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.  

ಮಹಿಳೆಯರ ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ, ಉಳಿತಾಯ, ಸಾಲ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆಗೆ ಸಂಜೀವಿನಿ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಗ್ರಾಮೀಣ ಮಹಿಳೆಯರಿಗೆ ವಿವಿಧ ಜೀವನೋಪಾಯ ಚಟುವಟಿಕೆಗಳ ಕುರಿತು ಹೆಚ್ಚಿನ ಅವಕಾಶ ಮತ್ತು ಸಲಹೆಗಳನ್ನು ನೀಡಲು ಜೀವನೋಪಾಯ ಸೇವಾ ಕೇಂದ್ರ ಸಹಕಾರಿಯಾಗಲಿದೆ ಎಂದು ಹೇಳಿದರು.  

ತಾಲೂಕು ಪಂಚಾಯಿತಿ ಸಂಜೀವಿನಿ ಯೋಜನೆ ವಲಯ ಮೇಲ್ವಿಚಾರಕ ಎಸ್‌.ಬಿ. ಸತ್ಯಣ್ಣವರ ಮಾತನಾಡಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಚಟುವಟಿಕೆಗಳಿಗೆ ಮಹಿಳೆಯರು ಕೇಂದ್ರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯದ ಚೆಕ್ಗಳನ್ನು ವಿತರಿಸಲಾಯಿತು.  ಕಾರ್ಯಕ್ರಮದಲ್ಲಿ ಸಹನಾ ಕೋಟೆಕಲ್ಲ, ಸುಬದ್ರಾ ಪದದಣ್ಣವರ, ಹೇಮಾ ರೊಳ್ಳಿ, ಅನ್ನಪೂರ್ಣ ಬಂಡಿವಡ್ಡರ, ಜಯಶ್ರೀ ಕುಂಬಾರ, ಲಕ್ಷ್ಮೀ ಬಟ್ಟೂರ, ಸಾವಿತ್ರಿ ಹರಕಲ್, ಅಕ್ಕಮ್ಮ ಬಿನ್ನಾಳ ಸೇರಿದಂತೆ ಹಲವರು ಭಾಗವಹಿಸಿದ್ದರು.