ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ  Talent award for students who passed in first division

ಲೋಕದರ್ಶನ ವರದಿ

       ಶಿಗ್ಗಾವಿ 30 : ಪ್ರಸಕ್ತ ವರ್ಷದಲ್ಲಿ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯುವ ಮೂಲಕ ಅಗಾಧ ಬದಲಾವಣೆಗೆ ಕಾರಣವಾಗಿದ್ದು ಅದರಿಂದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆಗೆ ಮಾರ್ಗದರ್ಶನವಾಗಿದೆ, ಈ ಸಾಧನೆ ನಿರಂತರವಾಗಿ ಸಾಗಬೇಕು ಎಂದು ಶಾಸಕ ಯಾಸೀರ್ ಅಹ್ಮದಖಾನ್‌. ಪಠಾಣ ಹೇಳಿದರು. 

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್ ಸರ್ಕಾರಿ ಕಚೇರಿ ಸಭಾಭವನದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮತ್ತು ತಾಲೂಕಾ ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ನಗರ, ಪಟ್ಟಣಗಳ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ಮಕ್ಕಳು ಪ್ರತಿಭೆ ತೋರಿದ್ದಾರೆ. ಮೂಲ ಸೌಲಭ್ಯಗಳ ಕೊರತೆಯ ನಡುವೆಯೂ ಉತ್ತಮ ಸಾಧನೆ ಮಾಡಿದ್ದಾರೆ. ಹೆಣ್ಣು ಮಕ್ಕಳು ಮೇಲುಗೈ ತೋರಿದ್ದಾರೆ. ಸರ್ಕಾರ 35 ವಸತಿ ಶಾಲೆಗಳನ್ನು ತೆರೆಯುವ ಮೂಲಕ ತಲಾ ಒಂದಕ್ಕೆ ರೂ. 7ಕೋಟಿ ಅನುದಾನ ನೀಡಿದೆ. ಅದರಲ್ಲಿ ಒಂದು ಕ್ಷೇತ್ರದ ಶಿಶುವಿನಹಾಳದಲ್ಲಿ ತೆರೆಯಲು ಅವಕಾಶ ಕಲ್ಪಿಸಿದೆ ಎಂದ ಅವರು ಪ್ರತಿಭಾವಂತ ಮಕ್ಕಳಿಗೆ ಲ್ಯಾಪ್ ಟಾಪ್ ನೀಡುತ್ತೇನೆ ಎಂಬ ಭರವಸೆ ನೀಡಿದರು. 

ಹಾವೇರಿ ಡಯಟ್ ಕಾಲೇಜಿನ ಪ್ರಾಚಾರ್ಯ ಝಡ್, ಎಂ.ಖಾಜಿ ಮಾತನಾಡಿ, ಪಾಲಕ, ಶಿಕ್ಷಕ, ಮಗು ಈ ಚಕ್ರ ತಿರುವಿದಾಗ ಶಿಕ್ಷಣ ಕ್ಷೇತ್ರದ ಬೆಳವಣಿಗೆ ಕಾಣಲು ಸಾಧ್ಯವಿದೆ. ಪ್ರಸಕ್ತ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಹಾವೇರಿ ಜಿಲ್ಲೆ 7 ಸ್ಥಾನ, ಜಿಲ್ಲೆಗೆ ಶಿಗ್ಗಾವಿ ಪ್ರಥಮ ಸ್ಥಾನ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದೆ ಎಂದರು. 

ಬಿಇಓ ಎಂ ಬಿ ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಒಂದು ವರ್ಷದಿಂದ ಮುಖ್ಯ ಶಿಕ್ಷರೊಂದಿಗೆ ಸಭೆ ನಡೆಸುವ ಮೂಲಕ ಮಾರ್ಗದರ್ಶನ ನೀಡಲಾಗಿದೆ. ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳನ್ನು ಶಿಕ್ಷಕರು ದತ್ತು ಪಡೆಯುವುದು. ಯೋಗ, ಧ್ಯಾನದಿಂದ 

ಕಲಿಕೆಗೆ ಪ್ರೇರಣೆ ಮಾಡಲಾಗಿದೆ. ಅದರಿಂದ ಫಲಿತಾಂಶದಲ್ಲಿ ಯಶಸ್ವಿ ಕಾಣಲು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕಾ ಮಟ್ಟದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಮುಖ್ಯ ಶಿಕ್ಷಕ ಚನ್ನಪ್ಪ ಕೆ.ಬಿ. ಮಾತನಾಡಿದರು. 

ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಅರುಣ ಹುಡೆದಗೌಡ್ರ, ತಾ.ಪಂ. ಇಓ ಮಂಜುನಾಥ ಸಾಂಳೊಕಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸರಸ್ವತಿ ಗಜಕೋಶ, ಗ್ಯಾರಂಟಿ ಯೋಜನೆ ತಾಲೂಕಾ ಅಧ್ಯಕ್ಷ ಎಸ್‌.ಎಫ್‌.ಮಣಕಟ್ಟಿ, ಬಾಬರ ಬೊವಾಜಿ, ಪುರಸಭೆ ಸದಸ್ಯ ಗೌಸಖಾನ್ ಮುನಸಿ, ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಎಂ. ಜೆ ಮುಲ್ಲಾ, ಮುಖ್ಯ ಶಿಕ್ಷ ಬಿ.ಶ್ರೀನಿವಾಸ, ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ಗೀತಾಂಜಲಿ ತೆಪ್ಪದ, ತಾಲೂಕಾ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ನೋಡಲ್ ಅಧಿಕಾರಿ ಉಮೇಶ, ಎಸ್‌.ಆರ್‌. ಹಂಚಿನಮನಿ ಇದ್ದರು.