ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ: ಕೊಪ್ಪಳ ಜಿಲ್ಲೆಯ ಪತ್ರಕರ್ತ ಪ್ರಮೋದ ಕುಲಕರ್ಣಿಗೆ ಪ್ರದಾನ
ಕೊಪ್ಪಳ 06: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಮತ್ತು ಬಿಜಾಪೂರ ಜಿಲ್ಲಾ ಘಟಕದಿಂದ ಮೊದಲ ಬಾರಿಗೆ ಕೊಡಮಾಡಿದ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಯನ್ನು ಇಲ್ಲಿನ ಹಿರಿಯ ಪತ್ರಕರ್ತ ಪ್ರಮೋದ ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಯಿತು.
ಜಿಲ್ಲೆಯ ಗಂಗಾವತಿ ಮೂಲದ ಪ್ರಮೋದ ಕುಲಕರ್ಣಿ ಅವರು 15 ವರ್ಷಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ವಿಶೇಷವಾದ ಛಾಪನ್ನು ಮೂಡಿಸಿದ್ದು, ಇವರ ಪ್ರಗತಿಪರ ಮತ್ತು ಸಾಮಾಜಿ ಬದಲಾವಣೆಯ ವರದಿಗಳು ಸಮಾಜದಲ್ಲಿ ಬದಲಾವಣೆ ತಂದಿವೆ. ರಣಜಿ ಕ್ರಿಕೆಟ್, ಐಪಿಎಲ್, ಕಬಡ್ಡಿ ಸೇರಿ ಅನೇಕ ಕ್ರೀಡೆಗಳ ರಾಜ್ಯಮಟ್ಟದ ವರದಿಗಾರರಾಗಿ ಕೆಲಸ ಮಾಡಿದ್ದು, ಧಾರವಾಡ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ವರದಿ ಪ್ರಶಸ್ತಿ ಲಭಿಸಿದೆ. ಇವರ ಕಾಳಜಿ ಮತ್ತು ಪೂರ್ವಾಗ್ರಹರಹಿತ ವರದಿಗಳು ಮತ್ತು ಪತ್ರಿಕೋದ್ಯಮವನ್ನು ಪರಿಗಣಿಸಿ ಬಿಜಾಪೂರ ಜಿಲ್ಲಾ ಮುದ್ದೆಬಿಹಾಳದಲ್ಲಿ ನಡೆದ ವರ್ಣರಂಜಿತ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ, ಶಾಸಕ ಮತ್ತು ಕೆಎಸ್ಡಿ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಗುರುರಾಜ ಹೊಸಕೋಟೆ, ಪುರಸಭೆ ಅಧ್ಯಕ್ಷ ಮೆಹಬೂಬ ಗೊಳಸಂಗಿ, ಬೆಲ್ ಬಾಟಮ್ ಚಿತ್ರ ಖ್ಯಾತಿಯ ಕಲಾವಿದ ಕಡಬಗೆರೆ ಮುನಿರಾಜು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಮತ್ತು ಕಲಬುರಗಿ ವಿಭಾಗೀಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಬಿಜಾಪೂರ ಜಿಲ್ಲಾಧ್ಯಕ್ಷ ಪತ್ರಕರ್ತ ಪುಂಡಲೀಕ ಮುರಾಳ, ಕಲಾವಿದರು, ಗಣ್ಯರು ಪಾಲ್ಗೊಂಡಿದ್ದರು.