ನಿರಂತರ ಓದು, ಪ್ರಯತ್ನದಿಂದ ಯಶಸ್ಸು ಸಾಧ್ಯ: ನಾಗೇಶ್ ನಾಯಕ

ನಿರಂತರ ಓದು, ಪ್ರಯತ್ನದಿಂದ ಯಶಸ್ಸು ಸಾಧ್ಯ: ನಾಗೇಶ್ ನಾಯಕ Success is possible through continuous reading and effort: Nagesh Nayak

ಸವದತ್ತಿ 23: ವಿದ್ಯಾರ್ಥಿಗಳು ನಿರಂತರ ಓದು, ಶ್ರದ್ಧೆ, ಸತತ ಪ್ರಯತ್ನವನ್ನು ಮೈಗೂಡಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದು ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ ಹೇಳಿದರು.  

ಅವರು ಕೆಎಲ್‌ಇ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಕಲಿತ ಶಾಲೆಯಲ್ಲಿಯೇ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದು ಖುಷಿ ಉಂಟು ಮಾಡಿದೆ. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಫಲ ಕೊಟ್ಟೇ ಕೊಡುತ್ತದೆ ಎಂಬುದಕ್ಕೆ ನಾನು ಸಾಕ್ಷಿಯಾಗಿ ನಿಂತಿದ್ದೇನೆ. ಒಳ್ಳೆಯ ರೀತಿಯಿಂದ ಕಲಿತು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ನಿಮಗೂ ಈ ಗೌರವ ಸಿಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸುಪ್ತವಾದ ಪ್ರತಿಭೆ ಇದೆ. ಅದನ್ನು ಹೊರತರುವಲ್ಲಿ ಪಠ್ಯೇತರ ಚಟುವಟಿಕೆಗಳು ಸಹಾಯ ಮಾಡುತ್ತವೆ. ಓದಿನಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮಕ್ಕಳು ಪಾಲ್ಗೊಳ್ಳಬೇಕು. ಆದಷ್ಟು ಮೊಬೈಲಿನಿಂದ ದೂರವಿದ್ದು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಬರುವ ಕಷ್ಟಗಳನ್ನು ಎದುರಿಸಿ ನಿಂತು ಪರಿಶ್ರಮದಿಂದ ಸಾಧನೆಯ ಒಡೆಯರಾಗಬೇಕು ಎಂದು ನುಡಿದರು. ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷರಾದ ಜಿ. ಎಸ್‌. ಶಿಂತ್ರಿ ಮಾತನಾಡಿ, ಕಲಿಕೆಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳನ್ನು ಸಂಸ್ಥೆ ಕೈಗೊಂಡಿದ್ದು ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದರು.  

ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕಿ ಭಾರತಿ ಏಗನ್‌ಗೌಡ್ರು ಅವರನ್ನು ಸನ್ಮಾನಿಸಲಾಯಿತು. ಉಪ ಪ್ರಾಚಾರ್ಯ ಎಸ್‌.ಎಸ್‌. ಪಾಟೀಲ ಸ್ವಾಗತಿಸಿದರು. ಎಂ ಜಿ. ಲಮಾಣಿ ವಂದಿಸಿದರು. ಎಸ್‌.ಸಿ. ಉಳ್ಳಿಗೇರಿ ಹಾಗೂ ಎಸ್‌. ಬಿ. ಅಂಗಡಿ ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳು, ಎಲ್ಲ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.