ವಿದ್ಯಾರ್ಥಿನೀಯರ ಅನುಕೂಲಕ್ಕಾಗಿ ದಾಸ್ತಿಕೊಪ್ಪದಲ್ಲಿ ತಡೆರಹಿತ ಬಸ್ ನಿಲ್ಲಿಸಿ: ಎಸ್‌.ಆರ್‌. ಪಾಟೀಲ

ವಿದ್ಯಾರ್ಥಿನೀಯರ ಅನುಕೂಲಕ್ಕಾಗಿ ದಾಸ್ತಿಕೊಪ್ಪದಲ್ಲಿ ತಡೆರಹಿತ ಬಸ್ ನಿಲ್ಲಿಸಿ: ಎಸ್‌.ಆರ್‌. ಪಾಟೀಲ Stop non-stop bus at Dastikoppa for the convenience of students: S.R. Patil

ಧಾರವಾಡ    05: ಜಿಲ್ಲೆಯಲ್ಲಿ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಇದ್ದು, ಮಹಿಳಾ ಪ್ರಯಾಣಿಕರು, ಸರ್ಕಾರಿ ಮಹಿಳಾ ನೌಕರರು ಮತ್ತು ವಿದ್ಯಾರ್ಥಿನೀಯರು ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ದಿನನಿತ್ಯ ಧಾರವಾಡ ಹಾಗೂ ಹುಬ್ಬಳ್ಳಿಯಿಂದ ದಾಸ್ತಿಕೊಪ್ಪದಲ್ಲಿರುವ ಸರ್ಕಾರಿ ಪದವಿ, ಪದವಿಪೂರ್ವ, ಐಟಿಐ ಮತ್ತು ಮೂರಾರ್ಜಿ ವಸತಿ ಶಾಲೆ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಸಂಚರಿಸುತ್ತಾರೆ. ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಬಸ್ ನಿಲ್ದಾಣದಲ್ಲಿ ಧಾರವಾಡ ಮತ್ತು ಹುಬ್ಬಳ್ಳಿಯಿಂದ ಕಲಘಟಗಿಗೆ ಬರುವ ತಡೆರಹಿತ ಬಸ್‌ಗಳಿಗೆ ನಿಲುಗಡೆ ನೀಡಲು ಕ್ರಮವಹಿಸಬೇಕೆಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ಪಾಟೀಲ ಅವರು ಹೇಳಿದರು. 

ಅವರು ಇಂದು (ಡಿ.05) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ದಾಸ್ತಿಕೊಪ್ಪದಲ್ಲಿ ಬಸ್ ನಿಲುಗಡೆಗೆ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರು ಹಾಗೂ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಹುದಿನಗಳ ಈ ಬೇಡಿಕೆಯನ್ನು ಪರೀಶೀಲಿಸಿ, ತಕ್ಷಣ ಕ್ರಮವಹಿಸಬೇಕೆಂದು ಅವರು ಹೇಳಿದರು.  

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಲಘಟಗಿ ತಾಲೂಕಾ ಅಧ್ಯಕ್ಷ ಬಸಪ್ಪ ಮಹಾಬಳೇಶ್ವರ ಬಾವಕಾರ ಅವರು ಮಾತನಾಡಿ, ಕಲಘಟಗಿ ಸರ್ಕಾರಿ ಕಾಲೇಜಿನಲ್ಲಿ ಯುವ ನಿಧಿ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ ವಿದ್ಯಾರ್ಥಿನೀಯರು ಹಾಗೂ ಮಹಿಳಾ ನೌಕರರು ದಾಸ್ತಿಕೊಪ್ಪದಲ್ಲಿ ತಡೆರಹಿತ ಬಸ್‌ಗಳನ್ನು ನಿಲ್ಲಿಸುವಂತೆ ಮನವಿ ಮಾಡಿದರು. ದಾಸ್ತಿಕೊಪ್ಪದ ಸುತ್ತಮುತ್ತ ಸಾಕಷ್ಟು ಗ್ರಾಮಗಳಿರುವದರಿಂದ ಬಹಳಷ್ಟು ಜನ ಪ್ರಯಾಣಿಕರು ದಾಸ್ತಿಕೊಪ್ಪದಲ್ಲಿ ಇಳಿದು, ಬೇರೆ ಬಸ್ ಹತ್ತುತ್ತಾರೆ. ಪ್ರತಿದಿನ ಸಾವಿರಾರು ಸಿಬ್ಬಂದಿಗಳು, ನೌಕರರು ಹುಬ್ಬಳ್ಳಿ ಮತ್ತು ಧಾರವಾಡದಿಂದ ಕಲಘಟಗಿಗೆ ಬಂದು ಕಾರ್ಯನಿರ್ವಹಿಸುತ್ತಾರೆ. ಆದ್ದರಿಂದ ಬೆಳಿಗ್ಗೆ 8:30 ರಿಂದ 9:30 ರವರೆಗೆ ಮತ್ತು ಸಂಜೆ 4:30 ರಿಂದ 5:30 ರವರೆಗೆ ಹುಬ್ಬಳ್ಳಿ ಮತ್ತು ಧಾರವಾಡ ಡಿಪೋಗಳಿಂದ ಸಂಚರಿಸುವ ತಡೆರಹಿತ ಬಸ್‌ಗಳನ್ನು ದಾಸ್ತಿಕೊಪ್ಪ ಬಸ್ ನಿಲ್ದಾಣದಲ್ಲಿ ನಿಲುಗಡೆ ಆಗುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಅವರು ಒತ್ತಾಯಿಸಿದರು.  

ಈಗಾಗಲೇ ಈ ಕುರಿತು ಅಧಿಕಾರಿಗಳ ಗಮನಕ್ಕೆ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರೂ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಕನಿಷ್ಠ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ತಡೆರಹಿತ ಬಸ್‌ಗಳಿಗೆ ನಿಲುಗಡೆ ನೀಡಬೇಕೆಂದು ಅವರು ವಿನಂತಿಸಿದರು.  

ಪಂಚ ಗ್ಯಾರಂಟಿ ಯೋಜನೆಗಳ ಸಹಾಯದಿಂದ ಇಂದು ಮಹಿಳೆಯರು, ಬಡವರು ಸ್ವಂತ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಪ್ರತಿ ಅರ್ಹ ಫಲಾನುಭವಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವುದು ಇಲಾಖೆಗಳ ಕರ್ತವ್ಯವಾಗಿದೆ. ಕ್ಷೇತ್ರಮಟ್ಟದಲ್ಲಿ ಯೋಜನೆ ತಲುಪಿಸುವ ಅಧಿಕಾರಿ, ಸಿಬ್ಬಂದಿಗಳು ತೋರುವ ವರ್ತನೆ ಮತ್ತು ಸೌಜನ್ಯತೆಗಳು ಯೋಜನೆಗೆ ಯಶಸ್ಸನ್ನು ತಂದು ಕೊಡುತ್ತದೆ  ಅಧ್ಯಕ್ಷ ಎಸ್‌.ಆರ್‌.ಪಾಟೀಲ ಅವರು ಹೇಳಿದರು. 

ಲೈಮನ್‌ಗಳು ಕಂಬದ ಮೇಲೆ ಕೆಲಸ ಮಾಡುವಾಗ ಮತ್ತು ಬೇರೆ ಯಾವುದೇ ಕೆಲಸ ಮಾಡುವಾಗ ತಮಗೆ ನೀಡಿರುವ ಸುರಕ್ಷಾ ಕವಚಗಳನ್ನು ಎಲ್ಲರೂ ಧರಿಸಿಕೊಂಡು ಕೆಲಸವನ್ನು ಮಾಡಬೇಕು. ಮತ್ತು ಎಲ್ಲರೂ ಕಡ್ಡಾಯವಾಗಿ ಧರಿಸಿಕೊಂಡು ಇರಬೇಕು. ಲೈಮನ್‌ಗಳ ಆಯ್ಕೆ ಪ್ರಕ್ರಿಯೆಯು ಎಲ್ಲವೂ ಮುಗಿದಿದೆ. ಆದಷ್ಟು ಬೇಗ ಅವರಿಗೆ ಆದೇಶ ಪ್ರತಿಯನ್ನು ನೀಡಬೇಕು ಎಂದು ಅವರು ಹೇಳಿದರು.  

ಯುವ ನಿಧಿ ಫಲಾನುಭವಿಗಳಿಗೆ ಯುವನಿಧಿ ಪ್ಲಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ಕಿಲ್ ಇಕೋ ಸಿಸ್ಟಮ್‌ನಲ್ಲಿ ಅವರಿಗೆ ತರಬೇತಿ ನೀಡಲಾಗುತ್ತದೆ. ಒಟ್ಟು 13 ಸಂಸ್ಥೆಗಳು ಕೌಶಲ್ಯ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.  

ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಧಾರವಾಡ ಜಿಲ್ಲೆಗೆ ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇದೆ. ಹಾಗೂ ಜನಸಾಮಾನ್ಯರಿಗೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಬಸ್‌ಗಳನ್ನು ಸರಿಯಾದ ಸಮಯಕ್ಕೆ ಷೆಡ್ಯೂಲ್‌ನ್ನು ನಿರ್ಮಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.  

ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ: ಯುವನಿಧಿ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು 10,019 ಅರ್ಜಿಗಳು ಸ್ವೀಕೃತವಾಗಿದ್ದು, ಡಿ.ಬಿ.ಟಿ ಮೂಲಕ 7,920 ಫಲಾನುಭವಿಗಳಿಗೆ ಸಹಾಯಧನ ಜಮೆಯಾಗಿದೆ. ಇಲ್ಲಿಯವರೆಗೆ ಜಿಲ್ಲೆಯ ಯುವನಿಧಿ ಫಲಾನುಭವಿಗಳಿಗೆ ರೂ.19.95 ಕೋಟಿ ಸಹಾಯಧನ ಜಮೆ ಆಗಿದೆ ಎಂದು ಅಧ್ಯಕ್ಷ ಎಸ್‌.ಆರ್‌.ಪಾಟೀಲ ಅವರು ಹೇಳಿದರು. 

ಧಾರವಾಡ ಜಿಲ್ಲೆಯಲ್ಲಿ ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 53,00,41,042 ಮಹಿಳೆಯರು ಪ್ರಯಾಣಿಸಿದ್ದಾರೆ. ಸರಕಾರದಿಂದ ಸುಮಾರು ರೂ. 1322.69 ಕೋಟಿ ರೂಪಾಯಿ ಬಿಡುಗಡೆಯಾಗಿದೆ.  

ಗೃಹ ಜ್ಯೋತಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 5,18,710 ಫಲಾನುಭವಿಗಳು ಇದ್ದು,  ಸರಕಾರದಿಂದ ಒಟ್ಟು 61570.25 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. 

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಒಟ್ಟು 4,04,848 ಫಲಾನುಭವಿಗಳಿಗೆ ಒಟ್ಟು ಮೊತ್ತ ರೂ. 1663.87 ಕೋಟಿ ಹಣ ಬಿಡುಗಡೆಯಾಗಿದೆ.  

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಒಟ್ಟು 3,62,516 ಫಲಾನುಭವಿಗಳು ಇದ್ದು, ಒಟ್ಟು ಮೊತ್ತ ರೂ. 358.29 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಅವರು ಹೇಳಿದರು.  

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಇಲಾಖಾ ಅಧಿಕಾರಿಗಳು ತಾಲೂಕು ಮಟ್ಟದ ಸಭೆಗಳಿಗೆ ತಪ್ಪದೆ ಹಾಜರಾಗಿ ಅಗತ್ಯ ಮಾಹಿತಿ ನೀಡಬೇಕು. ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿರುವ ಅರ್ಹ ಫಲಾನುಭವಿಗಳಿಗೆ ಎಲ್ಲ ಸೌಲಭ್ಯಗಳು ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು  ಅವರು ಸೂಚಿಸಿದರು.  

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪ ಆಗದಂತೆ ಮತ್ತು ಯೋಜನೆಗಳ ಸೌಲಭ್ಯಗಳು ದುರುಪಯೋಗವಾಗದಂತೆ ಎಚ್ಚರಿಕೆ ವಹಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಯೋಜನೆಗಳ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಸಿಇಓ ಅವರು ತಿಳಿಸಿದರು.  

ವೇದಿಕೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮುರಗಯ್ಯಾ ವಿರಕ್ತಮಠ, ರೇಹನ್ ರಝಾ ಐನಾಪೂರಿ, ರತ್ನಾ ತೇಗೂರಮಠ, ಸುಧೀರ ಎಸ್‌. ಬೋಳಾರ  ಅವರು ಇದ್ದರು.   

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಅರವಿಂದ ಏಗನಗೌಡರ, ಶಿವಾನಂದ ಭೂಮಣ್ಣವರ, ಸಾವಿತ್ರಿ ಬಸವರಾಜ ಭಗವತಿ,  ಗೀತಾ ಥಾವಂಶಿ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. 

ಜಿಲ್ಲಾ ಪಂಚಾಯತಿಯ ಅಧಿಕಾರಿ ವಿನೋದ ಕಂಠಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.