ಜಿಲ್ಲೆಯ ಪ್ರವಾಸ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ: ಸಚಿವ ಎಚ್‌.ಕೆ.ಪಾಟೀಲ

ಜಿಲ್ಲೆಯ ಪ್ರವಾಸ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ: ಸಚಿವ ಎಚ್‌.ಕೆ.ಪಾಟೀಲ Special priority given to development of tourist destinations in the district: Minister H.K. Patil

ಹಾವೇರಿ  04:   ಜಿಲ್ಲೆಯ ರಾಣೇಬೆನ್ನೂರ ನಗರವು ಐತಿಹಾಸಿಕ ಪ್ರವಾಸಿ ತಾಣಗಳ ತಾಲೂಕಾಗಿದ್ದು, ಇಲ್ಲಿ ಹಲವಾರು ಐತಿಹಾಸಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳು ನೋಡುವುದಕ್ಕೆ ಸಿಗುತ್ತವೆ ಇವೆಲ್ಲವುಗಳನ್ನು ಐತಿಹಾಸಿಕ ಪ್ರವಾಸಿ ತಾಣಗಳನ್ನಾಗಿ ಮಾಡಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್‌.ಕೆ. ಪಾಟೀಲ ಹೇಳಿದರು.  

ರಾಣೇಬೆನ್ನೂರ ತಾಲೂಕಿನ ವಿವಿಧ ಪ್ರವಾಸ ತಾಣಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ನೀರೀಕ್ಷೆಯಂತೆ ನಾನು ರಾಣೇಬೆನ್ನೂರ ತಾಲೂಕಿನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಅಧ್ಯಯನ ಮಾಡಿ ಸಂಬಂಧಪಟ್ಟ ಇಲಾಖೆಯವರು ಈ ದಿಸೆಯಲ್ಲಿ ಏನು ಮಾಡಬೇಕು ಎಂಬುವುದನ್ನು ನಿರ್ಣಯ ಮಾಡುವುದಕ್ಕೆ ಬಂದಿದ್ದೇನೆ ಎಂದರು.  

ನಗರದ ಮಲ್ಲಾಪುರದ ಗುಡ್ಡಕ್ಕೆ ಬೆಳಿಗ್ಗೆ ಭೇಟಿ ನೀಡಿದ್ದೆವು, ಅದು ತುಂಬಾನೇ ಆಕರ್ಷಣಿಯವಾಗಿದೆ, ಮತ್ತೆ ಮತ್ತೆ ನೋಡಬೇಕೆನ್ನುವಷ್ಟು ಸುಂದರವಾಗಿದೆ ಸುಂದರ ಪರಿಸರದಿಂದ ಮಲ್ಲಾಪುರ ಗುಡ್ಡವು ಕಂಗೊಳಿಸುತ್ತಿದೆ ಈ ಸುಂದರ ಪರಿಸರದ ಸಂಪೂರ್ಣ ಅನುಭವವನ್ನು ಪಡೆಯುವಂತೆ ನಮ್ಮ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಈ ಭಾಗದ ಶಾಸಕರು, ಜಿಲ್ಲಾ ಅಧಿಕಾರಗಳ ಸಲಹೆಯಾಗಿದೆ. ಅದರಂತೆ ಅರೆ ಮಲ್ಲಾಪುರ ಬೆಟ್ಟವನ್ನು ಆಕರ್ಷಣಿಯ ಪ್ರವಾಸಿ ಕೇಂದ್ರವನ್ನಾಗಿ ಮಾಡಿ ಅಭಿವೃದ್ಧಿ ಪಡಿಸುವ ಇಚ್ಛಾಶಕ್ತಿ ಹೊಂದಿದ್ದೇವೆ. ಪ್ರಾರಂಭಿಕ ಹಂತದಲ್ಲಿ ಮಲ್ಲಾಪುರ ಬೆಟ್ಟಕ್ಕೆ ಪ್ರವಾಸಿಗರು ಆಗಮಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಆಗಸ್ಟ 15 ರಿಂದ ಕನಿಷ್ಠ 5 ಜೀಪ್‌ಗಳ ಮೂಲಕ ಯುವಕರು, ವಿದ್ಯಾರ್ಥಿಗಳಿಗೆ ಪ್ರವಾಸಿ ತಾಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು ಹಾಗೆಯೇ ಸುಂದರ ಪ್ರವಾಸಿ ತಾಣ ಮಾಡವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. 

ಬಳಿಕ ಸಚಿವರು ಐರಣಿ ಪ್ರವಾಸಿ ತಾಣಕ್ಕೆ ಭೇಟಿ ಕೊಟ್ಟು ಇಲ್ಲಿ ಒಂದು ಪುರಾತನ ಕೋಟೆಯಿದ್ದು ಅದು ತುಂಬಾನೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ, ಆ ಕೋಟೆಯನ್ನು ಅಭಿವೃದ್ಧಿ ಪಡಿಸಿ ಮುಂದಿನ ಪೀಳಿಗೆಗೆ ಕೋಟೆ ಇರುವುದರ ಬಗ್ಗೆ ಗೊತ್ತುಪಡಿಸಬೇಕಾಗಿದೆ. ಆದ್ದರಿಂದ ಹಾವನೂರ ಮನೆತನಕ್ಕೆ ಸೇರಿದ ಐರಣಿ ಕೋಟೆಯನ್ನು ಜನರಲ್ಲಿ ಜಾಗೃತಿ ಮೂಡುವ ರೀತಿಯಲ್ಲಿ ತಕ್ಷಣಕ್ಕೆ ದುರಸ್ತಿಪಡಿಸಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು. 

ಬಳಿಕ ಮಾಗೋಡದ ಭೀಮನ ದೋಣಿ, ಚೌಡಯ್ಯದಾನಪುರ ತಾಣಗಳಿಗೆ ಭೇಟಿ ನೀಡಿ ಪರೀಶೀಲಿಸಿದರು. ಈ ಸಂದರ್ಭದಲ್ಲಿ ರಾಣೇಬೆನ್ನೂರ ಶಾಸಕ ಪ್ರಕಾಶ ಕೋಳಿವಾಡ, ಜಿಲ್ಲಾ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.