ಶಿಕ್ಷಕ ನಾಗೇಶ್ ಜೆ. ನಾಯಕಗೆ ಸಿರಿಗನ್ನಡ ಪುಸ್ತಕ ಪ್ರಶಸ್ತಿ

ಶಿಕ್ಷಕ ನಾಗೇಶ್ ಜೆ. ನಾಯಕಗೆ ಸಿರಿಗನ್ನಡ ಪುಸ್ತಕ ಪ್ರಶಸ್ತಿ Sirigannada Book Award for teacher Nagesh J. Nayak

ಲೋಕದರ್ಶನ ವರದಿ 

ಬೈಲಹೊಂಗಲ 18: ತಾಲೂಕಿನ ಉಡಿಕೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ, ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ ಅವರು ಬರೆದ ‘ಮನುಷ್ಯರಿಲ್ಲದ ನೆಲ’ ಕವನ ಸಂಕಲನಕ್ಕೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಲಭಿಸಿದೆ.  

ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಪ್ರತಿವರ್ಷ ಜಿಲ್ಲೆಯ ಲೇಖಕರಿಗೆ ಪುಸ್ತಕ ಪ್ರಶಸ್ತಿ ಕೊಡುತ್ತಿದ್ದು, 2024 ರ ಸಾಲಿನಲ್ಲಿ ಪ್ರಕಟವಾದ ನಾಗೇಶ್ ಜೆ. ನಾಯಕ ಅವರ ‘ಮನುಷ್ಯರಿಲ್ಲದ ನೆಲ’ ಕವನ ಸಂಕಲನಕ್ಕೆ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಲಭಿಸಿದೆ. ಕಳೆದ 23 ವರ್ಷಗಳಿಂದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯ ಬೋಧಿಸುವ ಶಿಕ್ಷಕರಾಗಿರುವ ನಾಗೇಶ್, ಹಲವು ವರ್ಷಗಳಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರವಣಿಗೆ ಮಾಡುತ್ತಿದ್ದಾರೆ. ವಿಷಯ ಬೋಧನೆಯ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುತ್ತಿರುವುದಷ್ಟೇ ಅಲ್ಲದೆ, ಇವರ ಕೈಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇಲ್ಲಿಯವರೆಗೂ ಅವರ 27 ಕೃತಿಗಳು ಪ್ರಕಟವಾಗಿದ್ದು, ಸಂಚಯ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಪುರಸ್ಕಾರ, ಇಂಚಲ ಕಾವ್ಯ ಪ್ರಶಸ್ತಿ, ಆಜೂರು ಪುಸ್ತಕ ಪ್ರಶಸ್ತಿ, ಅಡ್ವೈಸರ್ ಸಾಹಿತ್ಯ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ, ಕಸಾಪ ದತ್ತಿ ನಿಧಿ ಪ್ರಶಸ್ತಿ, ಚುಟುಕು ಸಾಹಿತ್ಯ ಪರಿಷತ್ತಿನ ಪ್ರಶಸ್ತಿ, ಗಂಗಾಧರ ಮಡಿವಾಳೇಶ್ವರ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ, ಗ್ರಾಮೀಣ ಸಾಹಿತ್ಯ ವೇದಿಕೆಯ ಬಹುಮಾನ, ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಸಮ್ಮಾನಗಳು ನಾಗೇಶ್ ಅವರ ಬರವಣಿಗೆಗೆ ಒಲಿದು ಬಂದಿವೆ. 

ಡಿಸೆಂಬರ್ 25 ರಂದು ಬೆಳಿಗ್ಗೆ 10 ಕ್ಕೆ ಹಿಂದವಾಡಿಯ ಬಿಎಂಇಆರ್ ಸಭಾಗೃಹದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗೇಶ್ ಜೆ. ನಾಯಕ ಅವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ಮಧುಕರ ಗುಂಡೇನಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.