ಕುಂಭಾರ ಸಮಾಜ ಸಹಕಾರಿ ಸಂಘದ ರಜತ ಮಹೋತ್ಸವ ಜು. 14ರಂದು

ಕುಂಭಾರ ಸಮಾಜ ಸಹಕಾರಿ ಸಂಘದ ರಜತ ಮಹೋತ್ಸವ ಜು. 14ರಂದು  Silver Jubilee of the Kumbhara Community Cooperative Society on July 14

ಕಾಗವಾಡ 12: ತಾಲ್ಲೂಕಿನ ಉಗಾರ ಖುರ್ಡ ಪಟ್ಟಣದ ಭಕ್ತ ಕುಂಭಾರ ಪಟ್ಟಣ ಪತ್ತಿನ ಸಹಕಾರಿ ಸಂಘವು ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜು. 14ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಜೈನ್ ಬಸದಿ ಮಂಗಳ ಕಾರ್ಯಾಲಯದಲ್ಲಿ ಸಂಘದ ರಜತ ಮಹೋತ್ಸವ ಹಾಗೂ ಕಾರ್ಯಯೋಗಿ ಶಿವಶರಣ ಕುಂಭಾರ ಗುಂಡಯ್ಯವರ 15ನೇ ಸ್ಮರಣೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸುಭಾಷ್ ಕುಂಭಾರ ತಿಳಿಸಿದ್ದಾರೆ.  

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 7.30ಕ್ಕೆ ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ, ನದಿಯಿಂದ ಕುಂಭ ಹೊತ್ತ ಸುಮಂಗಲೆಯರೊಂದಿಗೆ ವಾದ್ಯಮೇಳದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಬಳಿಕ ಮಹಾದೇವ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ನೆರವೇರಿಸಿ, ಅಲ್ಲಿಂದ ಸಮಾರಂಭದ ಸ್ಥಳಕ್ಕೆ ಮೆರವಣಿಗೆ ಮೂಲಕ ಆಗಮಿಸಲಾಗುವುದು ಎಂದು ವಿವರಿಸಿದರು.  

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರು, ಉಗಾರ ಖುರ್ಡ ಗುರುದೇವಾಶ್ರಮದ ಪಪೂ ಬಸವಲಿಂಗ ಸ್ವಾಮೀಜಿ, ಹಂಚಿನಾಳದ ಪಪೂ ಮಹೇಶಾನಂದ ಸ್ವಾಮೀಜಿ, ಗುಳೆದಗುಡ್ಡದ ಪಪೂ ಕಾಶೀನಾಥ ಸ್ವಾಮೀಜಿ, ಚಿಕ್ಕಲಗುಡ್ಡದ ಪಪೂ ಶಿವಶರಣಾನಂದ ಸ್ವಾಮೀಜಿ, ಐನಾಪುರ-ಕೃಷ್ಣಾ ಕಿತ್ತೂರಿನ ಪಪೂ ಬಸವೇಶ್ವರ ಸ್ವಾಮೀಜಿ, ಮಂಗಸೂಳಿಯ ಪಪೂ ನಾಗಲಿಂಗ ಮಹಾಸ್ವಾಮಿಗಳು, ಚಿಂಚಣಿಯ ಪಪೂ ಶಿವಪ್ರಸಾದ ದೇವರು, ಚಿಂಚಳಿಯ ಸಿದ್ಧಪ್ರಸಾದ ಹಾಗೂ ಬೆಳಗಾವಿಯ ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕ ಡಾ. ವೀರೇಶ್ವರ ಸ್ವಾಮಿ ವಹಿಸಲಿದ್ದಾರೆ.  

ಕಾರ್ಯಕ್ರಮದಲ್ಲಿ ದೇಶಸೇವೆ ಸಲ್ಲಿಸಿ ನಿವೃತ್ತರಾದ ಕುಂಭಾರ ಸಮಾಜದ ಮಾಜಿ ಸೈನಿಕರನ್ನು ಸನ್ಮಾನಿಸಲಾಗುವುದು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಕುಂಭಾರ ಸಮಾಜದ ಗಣ್ಯರು ಭಾಗವಹಿಸಲಿದ್ದು, ಸಮಾಜದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸುಭಾಷ್ ಕುಂಭಾರ ಮನವಿ ಮಾಡಿದರು.  ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಪ್ಪಾಸಾಬ ಕುಂಭಾರ, ನಿರ್ದೇಶಕರಾದ ಯೋಗೇಶ ಕುಂಭಾರ, ಅರುಣ ಕುಂಭಾರ, ದತ್ತಾ ಕುಂಭಾರ, ಆನಂದ ಕುಂಭಾರ, ಯಶವಂತ ಕುಂಭಾರ, ಶಿವಶಂಕರ ಕುಂಭಾರ, ವೀರಭದ್ರ ಕುಂಭಾರ, ಕಸ್ತೂರಿ ಕುಂಭಾರ, ಪುಷ್ಪಾ ಕುಂಭಾರ, ಹಣಮಂತ ನಾಯಿಕ, ಶಂಕರ ನಡೋಣಿ, ಪ್ರಧಾನ ಕಾರ್ಯದರ್ಶಿ ಸುಜಾತಾ ಕುಂಭಾರ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.