ಶಾರ್ಟ್‌ ಸರ್ಕಿಟ್, 9 ಎಕರೆ ಕಬ್ಬಿನ ಗದ್ದೆ ಸುಟ್ಟು ಭಸ್ಮ

ಶಾರ್ಟ್‌ ಸರ್ಕಿಟ್, 9 ಎಕರೆ ಕಬ್ಬಿನ ಗದ್ದೆ ಸುಟ್ಟು ಭಸ್ಮ Short circuit, 9 acres of sugarcane field burnt to ashes


ದೇವರಹಿಪ್ಪರಗಿ 10: ತಾಲೂಕಿನ ಮುಳಸಾವಳಗಿ ಗ್ರಾಮದ ಹಿರಿಯ ರೈತರಾದ ರಾಜಶೇಖರ ಬಾಳನಗೌಡ ಬಿರಾದಾರ ಎಂಬುವವರ ಕಟಾವಿಗೆ ಬಂದಿದ್ದ 9ಎಕರೆ ಕಬ್ಬಿಗೆ ಗುರುವಾರ ವಿದ್ಯುತ್ ಶಾರ್ಕಿಟ್ ಆಗಿ ಸುಮಾರು 15.95ಲಕ್ಷ ಮೌಲ್ಯದ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.  

ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಕಬ್ಬಿನ ಗದ್ದೆ ಸುಟ್ಟಿದೆ. ಈ ಸುದ್ದಿ ತಿಳಿದು ಸಿಂದಗಿ ಅಗ್ನಿಶಾಮಕ ದಳ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಸ್ಕಾಂ ಅಧಿಕಾರಿಗಳು ಬಂದು ಪರೀಶೀಲನೆ ಮಾಡಿದರು.  

ನಂತರ ಮಾತನಾಡಿದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸತೀಶ ಸುಲಾಖೆ ಅವರು ಈ ಹೊಲದಲ್ಲಿ ಲೈನ್ ಹಾದು ಹೋಗಿದ್ದು, ಅದು ಕತ್ತರಿಸಿ ಜಮೀನಿನಲ್ಲಿ ಬಿದ್ದು ಬೆಂಕಿ ಹೊತ್ತಿಕೊಂಡು ಸುಮಾರು 9ಎಕರೆ ಕಬ್ಬು ಸುಟ್ಟು ಹೋಗಿದೆ ಎಂದು ಹೇಳಿದರು.  ನಂತರ ಗ್ರಾಮದ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ಮಾಡಿ ಪಂಚನಾಮೆ ಮಾಡಿದರು.   

ಗ್ರಾಮದ ಮುಖಂಡರಾದ ಬಸನಗೌಡ ಭೈರವಾಡಗಿ ಅವರು ಮಾತನಾಡಿ, ಹಿರಿಯ ರೈತರಾದ ರಾಜಶೇಖರ ಬಾಳನಗೌಡ ಬಿರಾದಾರ ಅವರಿಗೆ ಸೇರಿದ ಸುಮಾರು 9 ಎಕರೆ ಬಂಪರ್ ನೀರೀಕ್ಷೆಯಲ್ಲಿದ್ದ ರೈತನಿಗೆ ಸುಮಾರು 15.95 ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದೆ. 80 ಸ್ಪ್ರಿಂಕ್ಲರ್ ಪೈಪ್, 40 ಪಿವಿಸಿ ಪೈಪ್, ಎರಡು ಮೆಕ್ಕೆಜೋಳ ಬಣವೆ ಹಾಗೂ 400 ಫೂಟ್ ಕೇಬಲ್ ವೈರ್ ಕೂಡ ಸಂಪೂರ್ಣ ಸುಟ್ಟು ಹೋಗಿರುತ್ತದೆ. ಸ್ಥಳಕ್ಕೆ ಸಿಂದಗಿ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ತಾನು ಬೆವರು ಸುರಿಸಿ ಸಾಕಿ ಸಲಹಿದ ಬೆಳೆ ನಾಶವಾಗಿರುವುದರಿಂದ ರೈತ ಕಂಗಾಲಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ತಾಲೂಕಿನಲ್ಲಿ ಈ ರೀತಿ ಹಲವು ಘಟನೆಗಳು ನಡೆಯುತ್ತಿದ್ದರು ಹೆಸ್ಕಾಂ ಇಲಾಖೆ ಕಣ್ಣಿದ್ದು ಕುರುಡಾಗಿದೆ ಎಂದು ಹೇಳಿದರು.