ಕಬ್ಬು ಬಾಕಿ ಪಾವತಿಗೆ ಸೆ.20ರ ಗಡುವು

ಕಬ್ಬು ಬಾಕಿ ಪಾವತಿಗೆ ಸೆ.20ರ ಗಡುವು September 20 deadline for sugarcane arrears payment

ಕಬ್ಬು ಬಾಕಿ ಪಾವತಿಗೆ ಸೆ.20ರ ಗಡುವು  

ಬಾಗಲಕೋಟೆ  13: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರ ಬಾಕಿ ಹಣವನ್ನು ತುರ್ತಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಕಾರ್ಖಾನೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.  

ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ರೈತರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2025-26ನೇ ಸಾಲಿನ ಕಬ್ಬಿನ ಬಾಕಿ ಪಾವತಿ ಕುರಿತು ಚರ್ಚಿಸಿದರು.  

ಜಮಖಂಡಿ ಶುಗರ್ಸ್‌ಗೆ ರೈತರಿಗೆ ಪಾವತಿಸಬೇಕಿರುವ ?81 ಲಕ್ಷ ಹಾಗೂ ಪ್ರತಿ ಮೆಟ್ರಿಕ್ ಟನ್‌ಗೆ ನೀಡಬೇಕಿರುವ 4.34 ಕೋಟಿ ಸೇರಿದಂತೆ ಬಾಕಿ ಮೊತ್ತವನ್ನು ಸೆ.15ರೊಳಗೆ ಸಂಪೂರ್ಣ ಪಾವತಿಸುವುದಾಗಿ ಕಾರ್ಖಾನೆ ಪ್ರತಿನಿಧಿಗಳು ಭರವಸೆ ನೀಡಿದರು.  

ಇದೇ ವೇಳೆ ನೀರಾಣಿ ಶುಗರ್ಸ, ಬಾದಾಮಿ ಶುಗರ್ಸ, ಕೇದಾರನಾಥ ಶುಗರ್ಸ, ಸಾಯಿಪ್ರಿಯಾ ಶುಗರ್ಸ್‌ ಹಾಗೂ ಎಂ.ಆರ್‌.ಎನ್‌. ಕೇನ್ ಫಾವರ್ ಸೇರಿದಂತೆ ಐದು ಕಾರ್ಖಾನೆಗಳಿಂದ ರೈತರಿಗೆ ಪಾವತಿಸಬೇಕಿರುವ ಅಂದಾಜು 28 ಕೋಟಿ ಬಾಕಿಯನ್ನು ಸೆ.15ರಿಂದ 20ರೊಳಗೆ ಪಾವತಿಸುವುದಾಗಿ ಪ್ರತಿನಿಧಿಗಳು ಒಪ್ಪಿಕೊಂಡರು.  

ರೈತರು ಪ್ರತಿ ಟನ್‌ಗೆ ಮೊದಲ ಕಂತಾಗಿ 3,300 ಹಾಗೂ ಎರಡನೇ ಕಂತಾಗಿ ?300 ಪಾವತಿಸಬೇಕು ಎಂದು ಒತ್ತಾಯಿಸಿದರು. ಕಾರ್ಖಾನೆ ಪ್ರತಿನಿಧಿಗಳು ಮೊದಲ ಕಂತಿನಲ್ಲಿ 3,200 ಪಾವತಿಸಲಾಗಿದ್ದು, ಎರಡನೇ ಕಂತಿನಲ್ಲಿ ಸರ್ಕಾರ ಮತ್ತು ಕಾರ್ಖಾನೆಯಿಂದ ತಲಾ ?50ರಂತೆ ಒಟ್ಟು 100 ಪಾವತಿಸಲಾಗಿದೆ ಎಂದು ತಿಳಿಸಿದರು. ರೈತರ 300 ಎರಡನೇ ಕಂತಿನ ಬೇಡಿಕೆಯನ್ನು ಆಡಳಿತ ಮಂಡಳಿಯ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.  

ರೈತ ಮುಖಂಡ ಸುಭಾಷ ಶಿರಬೂರ ಅವರು, ಮಳೆ ಕೊರತೆಯಿಂದ ಹಲವು ತಾಲೂಕುಗಳಲ್ಲಿ ಬೆಳೆಗಳು ಒಣಗುತ್ತಿದ್ದು, ಉಳಿದ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ರೈತರಿಗೆ ಬೆಳೆ ವಿಮೆ ಕುರಿತು ಸಮರ​‍್ಕ ಮಾಹಿತಿ ಹಾಗೂ ಜಾಗೃತಿ ಮೂಡಿಸುವಂತೆ ಸಂಬಂಧಿತ ಇಲಾಖೆಗೆ ಮನವಿ ಮಾಡಿದರು.  

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಂಟಿ ಕೃಷಿ ನಿರ್ದೇಶಕ ಟಿ.ಎಸ್‌. ರುದ್ರೇಶಪ್ಪ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ಅಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.