ವಿಜಯಪುರ ಫೆ.05: ಸಮಾಜದ ಎಲ್ಲ ಸಮೂದಾಯಗಳಿಗೂ ತನ್ನದೇ ಆದ ಮೌಲ್ಯಗಳಿರುತ್ತವೆ. ಅಂತಹ ಮೌಲ್ಯಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಧಾರವಾಡ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜಾತಿ ಭೇದ ತೊರೆದು ಮಹಣೀಯರ ತತ್ವ, ಸಿದ್ಧಾಂತ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ಪ್ರತಿಯೊಬ್ಬರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು, ಉನ್ನತ ಮಟ್ಟಕ್ಕೆ ಬೆಳೆಸಬೇಕೆಂಬ ಸಂಕಲ್ಪದೊಂದಿಗೆ ಸಂಸ್ಕಾರ ನೀಡಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕ ಡಾ.ರಾಘವೇಂದ್ರ ಗುರುಜಾಲ ಮಾತನಾಡಿ ಸವಿತಾ ಮಹರ್ಷಿಯವರು ಲೋಕ ಕಲ್ಯಾಣಕ್ಕಾಗಿ ನಯ, ವಿನಯ ಹಾಗೂ ಪಾರದರ್ಶಕದಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ಅದು ಅಲ್ಲದೆ ತಮ್ಮ ವೃತ್ತಿಯೊಂದಿಗೆ ಆಯುರ್ವೇಧ ವೈದ್ಯಕೀಯ ಪದ್ಧತಿ ಹಾಗೂ ಸಂಗೀತ ರಂಗದಲ್ಲಿಯೂ ಮುಂಚೂಣಿಯಲ್ಲಿದರು ಎಂದು ಅವರು ತಿಳಿಸಿದರು.
ಸವಿತಾ ಸಮಾಜದ ಕೆಲವರು ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಿರುವರು ಅವರು ತಮ್ಮ ಸಮಾಜದಲ್ಲಿನ ಹಿಂದುಳಿದ ಕುಟುಂಬಗಳ ಶಿಕ್ಷಣಕ್ಕೆ ಸಹಾಯ ಮಾಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಉಪ ತಹಶೀಲ್ದಾರ ಐ.ಎಚ್.ತುಂಬಗಿ ಮಾತನಾಡಿ ಇಂದಿನ ಕಾಲದಲ್ಲಿ ನಮ್ಮ ಮೂಲ ವೃತ್ತಿಗಳು ಸಂದರ್ಭಕ್ಕೆ ತಕ್ಕಂತೆ ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ ಹಾಗೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಅವರು ಹೇಳಿದರು.
ಬೆಳಗ್ಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರು ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಸವಿತಾ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಉಪ ವಿಭಾಗಾಧಿಕಾರಿ ಗುರುನಾಥ ದಡ್ಡಿ, ಜಿ.ಪಂನ ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಾ ಅಧಿಕಾರಿ ಎ.ಬಿ.ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಬೋವಿ, ಸಮಾಜ ಮುಖಂಡ ರಾಜು ಬಳ್ಳಾರಿ, ಗುರುರಾಜ ಪಂಚಲಿಂಗ, ವೆಂಕಟೇಶ್ ಗುರುಜಾಲ, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಗುರುಜಾಲ, ಲಕ್ಷ್ಮೀಬಾಯಿ ಬಳ್ಳಾರಿ, ವೀಣಾ ಮುದೋಳ, ವಿದ್ಯಾವತಿ ಅಂಕಲಗಿ, ಸೋಮನಗೌಡ ಕಲ್ಲೂರು, ದೇವೆಂದ್ರ ಮೀರೆಕರ, ಭೀಮರಾಯ ಜಿಗಜಿಣಗಿ, ಗೀರೀಶ್ ಕುಲಕರ್ಣಿ ಹಾಗೂ ಇತರರು ಉಪಸ್ಥಿತರಿದ್ದರು. (ಫೋಟೋ ಲಗತ್ತಿಸಲಾಗಿದೆ. ಎ.1- ಎ4)