ದೇಹ ತ್ಯಾಗ: ಗುಣಮುಖರಾಗಿ ಗ್ರಾಮಕ್ಕೆ ಮರಳಿದ ಇರಕರ ಕುಟುಂಬ

ದೇಹ ತ್ಯಾಗ: ಗುಣಮುಖರಾಗಿ ಗ್ರಾಮಕ್ಕೆ ಮರಳಿದ ಇರಕರ ಕುಟುಂಬ Sacrifice of the body: Irakara family returns to village after recovery

ಸಂಬರಗಿ 26: ಅನಂತಪೂರ ಗ್ರಾಮದ ಹೊರವಲಯ ಇರಕರ ತೋಟದಲ್ಲಿ ಸೆಪ್ಟೆಂಬರ 8ರಂದು ಪ್ರಾಣ ತ್ಯಾಗ ಮಾಡುವ ನಿರ್ಧಾರ ತೆಗೆದುಕೊಂಡಿದ್ದ ತುಕಾರಾಮ ಇರಕರ ಸೇರಿ ನಾಲ್ಕು ಜನರನ್ನು ತಾಲೂಕಾ ಆಡಳಿತ ಸಪ್ಟೆಂಬರ್ 2ರಂದು ಚಿಕಿತ್ಸೆಗಾಗಿ ಧಾರವಾಡ ಆಸ್ಪತ್ರೆಗೆ ದಾಖಲಿಸಿತ್ತು. ಈಗ ಅವರು ಗುಣಮುಖರಾಗಿ ತಮ್ಮ ಗ್ರಾಮಕ್ಕೆ ಸೋಮವಾರ ಮರಳಿದ್ದು, ದೈನಂದಿನ ವ್ಯವಹಾರದಲ್ಲಿ ತೊಡಗಿದ್ದಾರೆ. ತಾಲೂಕಾ ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆಯವರ ಒಂದು ಮಾನವೀಯತೆಯ ಕಾರ್ಯ ಕೈಗೊಂಡಿದ್ದಕ್ಕಾಗಿ ಗ್ರಾಮಸ್ಥರು ಅಭಿನಂದಿಸಿದ್ದಾರೆ. 

ಅಗಸ್ಟ-ಸಪ್ಟೆಂಬರ 8ರವರೆಗೆ ರಾಮಪಾಲ ಮಹಾರಾಜರ ಭಕ್ತನಾಗಿ ದಿನನಿತ್ಯ ಪ್ರಾರ್ಥನೆ ಮಾಡಿ ಪ್ರಾಣ ತ್ಯಾಗ ಮಾಡಿದರೆ ನಮಗೆ ಮೋಕ್ಷ ದೊರಕುತ್ತದೆ ಎಂಬ ಮೂಢನಂಬಿಕೆ ಹೊಂದಿದ್ದರು. ಈ ಕುರಿತು ತಾಲೂಕಾ ಆಡಳಿತದ ಗಮನಕ್ಕೆ ಬಂದ ನಂತರ ತುಕಾರಾಮ ಇರಕರ, ಮಗ ರಮೇಶ, ಪತ್ನಿ ಸಾವಿತ್ರ, ಸೊಸೆ ವೈಷ್ಣವಿ, ಮಗಳು ಮಾಯಾ ಇವರನ್ನು ಕವಲಗುಡ್ಡ ಅಮರೇಶ್ವರ ಮಹಾರಾಜರು, ಅಥಣಿ ಶಿವಬಸವ ಮಹಾಸ್ವಾಮೀಜಿ, ವಿಭಾಗ ಅಧಿಕಾರಿ ಸುಭಾಸ ಸಂಪಗಾಂವಿ, ತಹಶೀಲ್ದಾರ ಶಿದರಾಯ ಭೋಸಗೆ, ತಹಶೀಲ್ದಾರ ರಾಜು ಬುರಲಿ, ಅಥಣಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ತಾಲೂಕಾ ಆರೋಗ್ಯ ಅಧಿಕಾರಿ ಬಸಗೌಡ ಕಾಗೆ, ಡಿ.ವೈ.ಎಸ್‌.ಪಿ ಪ್ರಶಾಂತ ಮುನ್ನೊಳ್ಳಿ, ಸಿ.ಪಿ.ಐ ಸಂತೋಷ ಹಳ್ಳೂರ, ಪಿ.ಎಸ್‌.ಐ ಗಿರಿಮಲ್ಲಪ್ಪ ಮುಪ್ಪಾರ, ನ್ಯಾಯವಾದಿ ಸಂಘದ ಮಾಧ್ಯಮ ವಕ್ತಾರ ಎಸ್‌.ಎಸ್‌.ಪಾಟೀಲ ಇವರು ಸೇರಿಕೊಂಡು ಅವರನ್ನು ಭೇಟಿಯಾಗಿ ಅವರ ಮನಸ್ಸನ್ನು ಪರಿವರ್ತನೆ ಮಾಡಲು ಪ್ರಯತ್ನಿಸಿದ್ದರು. ಆದರೆ ಅವರ ಪ್ರಯತ್ನ ಫಲಕಾರಿಯಾಗಿರಲಿಲ್ಲ. ಅವರ ಪ್ರಾಣ ಉಳಿಸಲು ತಾಲೂಕಾ ಆಡಳಿತ ಮುಂದಾಗಿ ಸಪ್ಟೆಂಬರ 7ರಂದು ಬೆಳಗಿನ ಜಾವ ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಉಪತಹಶೀಲ್ದಾರ್ ಅಮೀತ ಡವಳೇಶ್ವರ, ಕಂದಾಯ ನೀರೀಕ್ಷಕರು ವಿನೋದ ಕದಂ, ಆರೋಗ್ಯ ಅಧಿಕಾರಿ ಶಿವರಾಜ ಕರೋಲಿ ಇವರು ಸೇರಿ ಅವರನ್ನು ಚಿಕಿತ್ಸೆಗಾಗಿ ಅಥಣಿ ಸರಕಾರಿ ಆಸ್ಪತ್ರೆ, ಬೆಳಗಾವಿ ಭೀಮ್ಸ್‌, ಆನಂತರ ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಅವರನ್ನು ಗುಣಮುಖ ಮಾಡಿ ಅವರ ವಾಹನ ಮೂಲಕ ಗ್ರಾಮಕ್ಕೆ ತಲುಪಿಸಿದ್ದಾರೆ.  

ಅವರು ಗ್ರಾಮಕ್ಕೆ ಮರಳಿ 3 ದಿನಗಳು ಕಳೆದಿವೆ. ದೈನಂದಿನ ವ್ಯವಹಾರವನ್ನು ವ್ಯವಸ್ಥಿತವಾಗಿ ನಡೆಸಿದ್ದಾರೆ. ಅವರ ದೇಹ ತ್ಯಾಗದ ಮೂಢ ನಿರ್ಧಾರ ತಡೆಯುವಲ್ಲಿ  ತಾಲೂಕಾ ಆಡಳಿತ ಯಶಸ್ವಿಯಾಗಿದೆ. ಅವರು ಗುಣಮುಖರಾಗಿ ಆ ಮೌಢ್ಯದ ಭಕ್ತಿಯಿಂದ ಹೊರ ಬಂದಿದ್ದಾರೆ. ಇಲ್ಲವಾದರೆ 21 ಜನ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಎದುರಾಗುತ್ತಿತ್ತು. 

ಈ ಕುರಿತು ಅವರ ಸಹೋದರ ಜ್ಞಾನುಬಾ ಇರಕರ ಇವರನ್ನು ಸಂಪರ್ಕಿದಾಗ ಪತ್ರಿಕೆಯಲ್ಲಿ ಬಂದ ನಂತರ ತಾಲೂಕಾ ಆಡಳಿತ ಎಚ್ಚರಿಸಿ ನಮ್ಮ ಮನೆಗೆ ಬಂದು ಅವರ ಮನಸ್ಸನ್ನು ಪರಿವರ್ತನೆ ಮಾಡಿದರೂ ಯಾವುದೇ ಪರಿಣಾಮ ಬೀರಿಲ್ಲ. ಕೊನೆಗೆ ಚಿಕಿತ್ಸೆಗಾಗಿ ಧಾರವಾಡದಲ್ಲಿ ದಾಖಲಿಸಿದ ನಂತರ ಅವರು ಗುಣಮುಖರಾಗಿ ಗ್ರಾಮಕ್ಕೆ ಬಂದಿದ್ದಾರೆ. ತಾಲೂಕಾ ಆಡಳಿತದ ಪ್ರಯತ್ನದಿಂದ 21 ಜನರ ಪ್ರಾಣ ಉಳಿದಿದೆ. ಅವರನ್ನು ನಾನು ಅಭಿನಂದಿಸುತ್ತೇನೆ. ಇಂತಹ ಕೃತ್ಯ ಯಾರೂ ಮಾಡಬಾರದು ಎಂದು ಅವರು ವಿನಂತಿಸಿದರು.